ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಂದಿನ ಕಾಲದಲ್ಲಿ ಮಕ್ಕಳು ಹೆಚ್ಚು ಮೊಬೈಲ್ ಬಳಸುತ್ತಿದ್ದು ಅದರ ಗೀಳಿನಿಂದ ಹೊರಬರಲು ಬೇಸಿಗೆ ಶಿಬಿರಗಳ ಸಹಕಾರಿ ಎಂದು ಪಾಂಡೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲಾ ಸದಾನಂದ ಪೂಜಾರಿ ನುಡಿದರು.
ಅವರು ಬುಧವಾರ ಪಾಂಡೇಶ್ವರ ಗ್ರಾಮಪಂಚಾಯತ್ ಹಾಗೂ ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಇವರುಗಳ ಸಹಭಾಗಿತ್ವದಡಿ 15ರಿಂದ 21ರ ತನಕ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಎಷ್ಟೋ ಮಕ್ಕಳಲ್ಲಿ ಪ್ರತಿಭೆಗಳು ಮರಿಚಿಕೆಯಾಗಿ ಉಳಿಯುತ್ತದೆ. ಇದಕ್ಕೆ ಗ್ರಾಮೀಣ ಶಿಬಿರಗಳು ಅತ್ಯಂತ ಪರಿಣಾಮಕಾರಿಯಾಗಿದೆ. ಶಿಬಿರಗಳ ಜತೆ ಪರಿಸರ ಜಾಗೃತಿ ಹೊಂದಬೇಕು ಎಂದರು.
ಮುಖ್ಯ ಅಭ್ಯಾಗತರಾಗಿ ಪಂಚಾಯತ್ ಉಪಾಧ್ಯಕ್ಷ ವೈ ಬಿ. ರಾಘವೇಂದ್ರ, ಅಭಿವೃದ್ಧಿ ಅಧಿಕಾರಿ ಲೋಲಾಕ್ಷಿ ಸದಸ್ಯರಾದ ಸುಜಾತ ವೆಂಕಟೇಶ್ ಪೂಜಾರಿ, ಸಂಜೀವಿನಿ ಒಕ್ಕೂಟದ ಎಂಬಿಕೆ ಉಷಾ ಗಣೇಶ್ ಪೂಜಾರಿ, ವಿಆರ್ ಡಬ್ಲ್ಯೂ ಶಾಂತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ತಂಡಗಳಿಗೆ ಸ್ಪರ್ಧೆ ಏರ್ಪಡಿಸಿದ್ದು ಹೆಚ್ಚು ಅಂಕ ಪಡೆದ ತಂಡಗಳಿಗೆ ಗಿಡ ನೀಡುವ ಮೂಲಕ ಪರಿಸರ ಸ್ನೇಹಿ ಬಹುಮಾನಗಳನ್ನು ನೀಡಲಾಯಿತು.
ಕಾರ್ಯಕ್ರಮವನ್ನು ಗ್ರಂಥಪಾಲಕಿ ಜ್ಯೋತಿ ಪೂಜಾರಿ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

