Kundapra.com ಕುಂದಾಪ್ರ ಡಾಟ್ ಕಾಂ

ಜನ್ನಾಲು: ಸರಕಾರಿ ಶಾಲೆಯಲ್ಲಿ ಕಲಿಯಲು ಮಕ್ಕಳಿದ್ದಾರೆ. ಶಿಕ್ಷಕರು ಮಾತ್ರ ಇಲ್ಲ

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಕನ್ನಡ ಶಾಲೆಗಳಿಗೆ ಬೀಗ ಬೀಳಲು ಪರೋಕ್ಷವಾಗಿ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯಲ್ಲಿನ ಲೋಪವೇ ಕಾರಣವಾಗುತ್ತಿವೆ ಎಂಬ ಅಂಶ ಗುಟ್ಟಾಗಿ ಉಳಿದಿಲ್ಲ. ಕನ್ನಡ ಶಾಲೆಗಳಿಗೆ ಮಕ್ಕಳ ಬರುವುದಿಲ್ಲ ಎಂಬ ಆತಂಕದ ನಡುವೆ, ಬರುವ ಮಕ್ಕಳಿಗೂ ಸಸೂತ್ರವಾದ ಶೈಕ್ಷಣಿಕ ವಾತಾವಣವನ್ನು ನಿರ್ಮಿಸುವಲ್ಲಿ ಶಿಕ್ಷಣ ಇಲಾಖೆ ಸೋಲುತ್ತಿವೆ ಎಂಬುದಕ್ಕೆ ಇಡುರು-ಕುಂಜ್ಞಾಡಿ ಗ್ರಾಪಂ ವ್ಯಾಪ್ತಿಯ ಕುಗ್ರಾಮವಾದ ಜನ್ನಾಲು ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಾಗಿದ್ದವರು ಏಕಾಏಕಿ ವರ್ಗಾವಣೆ ಸಾಕ್ಷೀಕರಿಸಿವೆ.

ಬೈಂದೂರು ವಲಯದ ಜನ್ನಾಲು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ೧೩ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಇಲ್ಲಿ ಸೇವೆ ಸಲ್ಲಿಸುತ್ತಿದ್ದ ಇಬ್ಬರು ಶಿಕ್ಷಕರೂ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಸದ್ದಿಲ್ಲದೇ ವರ್ಗಾವಣೆಗೊಂಡು ಇಲ್ಲಿನ ಮಕ್ಕಳನ್ನು ಸಂಕಷ್ಟಕ್ಕೆ ಸಿಲುಕಿಸದ ಘಟನೆ ತಡವಾಗಿ ಬೆಳಕಿದೆ ಬಂದಿದೆ.

ಶಿಕ್ಷಕರು ವರ್ಗಾವಣೆಗೊಂಡ ವಿಚಾರ ಅವರ ಜನ್ನಾಲು ಶಾಲೆಗೆ ಗೈರಾಗುವವರೆಗೂ ಶಾಲೆಯ ಮಕ್ಕಳಿಗಾಗಲಿ, ಎಸ್‌ಡಿಎಂಸಿ ಸದಸ್ಯರಿಗಾಗಲಿ ತಿಳಿದಿರಲಿಲ್ಲ. ಶಿಕ್ಷಕರು ಏಕೆ ಬರುತ್ತಿಲ್ಲ ಎಂದು ಗೊಂದಲಕ್ಕೆ ಬಿದ್ದ ಎಸ್‌ಡಿಎಂಸಿ ಸದಸ್ಯರು, ಡೆಪ್ಟೆಷನ್ ಮೇಲೆ ಸೆಲ್ಕೋಡು ಶಾಲೆಯಿಂದ ಬಂದ ಶಿಕ್ಷಕರ ಬಳಿ ವಿಚಾರಿಸಿದಾಗ ಇಬ್ಬರೂ ಶಿಕ್ಷಕರು ಒಮ್ಮೆಲೆ ವರ್ಗಾವಣೆ ಪಡೆದುಕೊಂಡ ವಿಚಾರ ಬಹಿರಂಗಗೊಂಡಿತ್ತು. ಕುಂದಾಪ್ರ ಡಾಟ್ ಕಾಂ ವರದಿ

ಇಲಾಖೆ ಏಕಾಏಕಿ ಶಿಕ್ಷಕರಿಗೆ ವರ್ಗಾವಣೆ ಮಾಡಿದ್ದನ್ನು ಆಕ್ಷೇಪಿಸಿದ ಪೋಷಕರು, ಎಸ್‌ಡಿಎಂಸಿ ಸಭೆಯಲ್ಲಿ ಪ್ರಭಾರ ಶಿಕ್ಷಣಾಧಿಕಾರಿಗಳಲ್ಲಿ ದೂರಿಕೊಂಡಾಗ ಶೀಘ್ರವೇ ಶಿಕ್ಷಕರನ್ನು ನೆಮಿಸುವುದಾಗಿ ತಿಳಿಸಿದ್ದರು. ಈ ವಿಚಾರವಾಗಿ ಮೂರು ಬಾರಿ ಗ್ರಾಮಸ್ಥರು, ಎಸ್‌ಡಿಎಂಸಿ ಹಾಗೂ ಶಿಕ್ಷಣಾಧಿಕಾರಿಯವರ ನಡುವೆ ಸಾಕಷ್ಟು ಚರ್ಚೆ ನಡೆದ ಬೆನ್ನಲ್ಲೆ ಶಾಲೆಗೆ ಒಬ್ಬರು ಅತಿಥಿ ಶಿಕ್ಷಕರು ನೇಮಕಗೊಂಡರೇ ಹೊರತು ಖಾಯಂ ಶಿಕ್ಷಕರು ಈವರೆಗೂ ನೆಮಕವಾಗಿಲ್ಲ. ಸ್ವತಃ ಶಿಕ್ಷಣ ಸಚಿವರೇ ಶಿಕ್ಷಣಾಧಿಕಾರಿಯವರಿಗೆ ಕರೆಮಾಡಿ ಶಿಕ್ಷಕರೋರ್ವರನ್ನು ನೆಮಿಸುವಂತೆ ತಿಳಿಸಿದ್ದರೂ ಅವರ ಮಾತಿಗೂ ಕಿಮ್ಮತ್ತಿಲ್ಲ. ಡೆಪ್ಟೆಷನ್ ಬಂದಿರುವ ಶಿಕ್ಷಕರು ಹಾಗೂ ಅತಿಥಿ ಶಿಕ್ಷಕರು ಈ ಶೈಕ್ಷಣಿಕ ವರ್ಷವನ್ನು ಪೂರೈಸಿಯಾರು ಆದರೆ ಮುಂದೆ ಮಕ್ಕಳ ಭವಿಷ್ಯವೇನು ಎಂಬ ಚಿಂತೆ ಪೋಷಕರನ್ನು ಕಾಡುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಈ ಶಾಲೆಗೆ ಮಕ್ಕಳನ್ನು ಕಳುಹಿಸದಿರುವ ಕುರಿತು ಗ್ರಾಮದಲ್ಲಿ ಗುಸುಗುಸು ಕೇಳಿಬರುತ್ತಿದೆ. ಒಟ್ಟಾರೆಯಾಗಿ ಈ ಶಾಲೆಯನ್ನು ಮುಚ್ಚುವ ಹುನ್ನಾರ ನಡೆದಿದೆಯೇ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ

* ಅಕ್ಟೋಬರ್‌ನ ಮಧ್ಯಾವಧಿ ಪರೀಕ್ಷೆಗೂ ಮೊದಲು ಶಿಕ್ಷಕರೀರ್ವರು ಒಟ್ಟಿಗೆ ವರ್ಗಾವಣೆಯಾಗಿ ಹೊಗಿದ್ದಾರೆ. ಕನ್ನಡ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗಬಹುದೆಂಬ ಕಾರಣಕ್ಕೆ ನಮ್ಮ ಮಕ್ಕಳನ್ನು ಇಲ್ಲಿ ಸೇರಿಸುತ್ತೇವೆ. ಆದರೆ ಶಿಕ್ಷಕರೇ ಸರಿಯಾಗಿ ಕಾರ್ಯನಿರ್ವಹಿಸದಿದ್ದರೇ ಮಕ್ಕಳ ಭವಿಷ್ಯದ ಗತಿಯೇನು? ಮನಸ್ಸಿಗೆ ಬಂದ ಹಾಗೆ ವರ್ಗಾವಣೆ ನೀಡುವುದನ್ನು ಶಿಕ್ಷಣ ಇಲಾಖೆ ನಿಲ್ಲಿಸಬೇಕು. – ರವೀಂದ್ರ ಶ್ಯಾನುಭಾಗ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು.

* ಶಿಕ್ಷಕರು ವರ್ಗಾವಣೆಗೊಂಡಿದ್ದರೂ ಶಾಲೆಯ ಶೈಕ್ಷಣಿಕ ವಾತಾವಣದಲ್ಲಿ ಏರುಪೇರಾಗಿಲ್ಲ. ವರ್ಗಾವಣೆಗೊಂಡ ಶಿಕ್ಷಕರನ್ನು ಕಾನೂನು ಚೌಕಟ್ಟಿನಲ್ಲಿಯೇ ರಿಲಿವ್ ಮಾಡಲಾಗಿದೆ. ಸದ್ಯ ಒಬ್ಬರು ಡೆಪ್ಟೆಷನ್ ಶಿಕ್ಷಕರು, ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಗೆ ಖಾಯಂ ಶಿಕ್ಷಕರು ನೇಮಕಗೊಂಡಿದ್ದು, ಸದ್ಯದಲ್ಲಿಯೇ ಕೆಲಸಕ್ಕೆ ಹಾಜರಾಗಲಿದ್ದಾರೆ.- ನಾಗೇಶ್ ನಾಯ್ಕ್, ಬೈಂದೂರು ವಲಯ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ.

?

Exit mobile version