Kundapra.com ಕುಂದಾಪ್ರ ಡಾಟ್ ಕಾಂ

ಟೋಲ್ ಪ್ಲಾಜಾದಲ್ಲಿನ ಅರ್ಲಕ್ಷ್ಯ, ಹೆದ್ದಾರಿ ಅವ್ಯವಸ್ಥೆಗೆ ಬಲಿಯಾಗುತ್ತಿದೆ ಅಮೂಲ್ಯ ಜೀವಗಳು

ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರು:
ತಾಲೂಕಿನ ಶಿರೂರು ಟೋಲ್ ಪ್ಲಾಜಾದಲ್ಲಿ ಬುಧವಾರ ಸಂಜೆ ನಡೆದ ಭೀಕರ ಅಪಘಾತ ಸಾರ್ವಜನಿಕರ ಎದೆ ನಡುಗಿಸಿದೆ. ಟೋಲ್ ಪ್ಲಾಜಾದಲ್ಲಿನ ಸಣ್ಣ ಎಡವಟ್ಟು, ಅಂಬುಲೆನ್ಸ್ ವೇಗ ನಾಲ್ಕು ಜೀವಗಳನ್ನು ಬಲಿಪಡೆದುಕೊಳ್ಳುವಂತಾಗಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೊರಟ ವ್ಯಕ್ತಿಯೊಂದಿಗೆ ಆತನ ಬಂಧುಗಳೂ ಮಸಣ ಸೇರುವಂತಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿನ ನಿರ್ವಹಣಾ ಕಂಪೆನಿಯ ಎಡವಟ್ಟುಗಳು ಹೆದ್ದಾರಿಯನ್ನು ಮೃತ್ಯುಕೂಪವನ್ನಾಗಿಸುತ್ತಿದೆ.

ಆಗಿದ್ದೇನು?
ಹೊನ್ನಾವರದ ಹಾಡಗೇರಿ ಸಮೀಪದ ಹೋಟೆಲಿನಲ್ಲಿ ನೌಕರನಾದ್ದ ಗಜಾನನ ಗಣಪ ನಾಯ್ಕ್ ಎಂಬುವವರಿಗೆ ಬುಧವಾರ ಮಧ್ಯಾಹ್ನದ ವೇಳೆ ಹೈಬಿಪಿ ಹಾಗೂ ವಾಂತಿ ಕಾಣಿಸಿಕೊಂಡು ಅನಾರೋಗ್ಯಕ್ಕೀಡಾಗಿದ್ದರಿಂದ ಹೊನ್ನಾವರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸೂಚನೆ ನೀಡಿದ್ದರು. ಅದರಂತೆ ಅಂಬ್ಯುಲೆನ್ಸ್ ಮೂಲಕ ಗಜಾನನ ನಾಯ್ಕ್ ಅವರ ಪತ್ನಿ, ಸಂಬಂಧಿಗಳು ಹಾಗೂ ಸ್ನೇಹಿತರು ಗಜಾನನ ನಾಯ್ಕ್ ಅವರನ್ನು ಕರೆದುಕೊಂಡು ಉಡುಪಿಗೆ ಹೊರಟಿದ್ದರು.

ಸಂಜೆ ನಾಲ್ಕು ಗಂಟೆ ವೇಳೆಗೆ (04:07pm) ಅಂಬ್ಯುಲೆನ್ಸ್ ಶಿರೂರು ಟೋಲ್ ಪ್ಲಾಜಾ ತಲುಪಿದೆ. ಟೋಲ್ ಫಾಸ್ಟ್ ಟ್ರ್ಯಾಕಿನಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ತೆರವುಗೊಳಿಸಲು ವಿಳಂಬ ಮಾಡಿರುವುದು ಹಾಗೂ ಅಲ್ಲಿಯೇ ದನವೊಂದು ಮಲಗಿದ್ದರಿಂದ ಚಾಲಕ ಬ್ರೇಕ್ ಹಾಕಿದ್ದು, ಇದರಿಂದ ನಿಯಂತ್ರಣ ಕಳೆದುಕೊಂಡ ಅಂಬುಲೆನ್ಸ್ ತಿರುಗಿ ಕಂಬ ಹಾಗೂ ಟೋಲ್ ಸಂಗ್ರಹಣಾ ಕೌಂಟರಿಗೆ ಬಂದು ಬಡಿದಿದೆ. ಅಪಘಾತದ ತೀವ್ರತೆಗೆ ಅಂಬ್ಯುಲೆನ್ಸ್ ಒಳಗಿದ್ದವರು ಹೊರಕ್ಕೆಸೆಯಲ್ಪಟ್ಟು, ಮೂವರು ಸ್ಥಳದಲ್ಲಿಯೇ ಮೃತಪಟ್ಟರೇ ಓರ್ವ ವ್ಯಕ್ತಿ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹೊನ್ನಾವರ ಹಾಡಗೇರಿ ಹಡಿನಬಾಳು ನಿವಾಸಿಗಳಾಗಿರುವ ಗಜಾನನ ಗಣಪ ನಾಯ್ಕ (55) ಹಾಗೂ ಲೋಕೇಶ್ (48), ಅವರ ಪತ್ನಿ ಜ್ಯೋತಿ (44), ಹಾಗೂ ಗಜಾನನ ಕೆಲಸ ಮಾಡುತ್ತಿದ್ದ ಹೊಟೇಲ್ ಮಾಲೀಕ ಮಂಜುನಾಥ್ (48) ಎಂಬುವವರು ಮೃತಪಟ್ಟಿದ್ದಾರೆ. ಮೃತ ಗಜಾನನ ಅವರ ಪತ್ನಿ ಗೀತಾ (50), ಸ್ನೇಹಿತ ಗಣೇಶ್ (40), ಹಾಗೂ ಗಜಾನನ ಅವರ ಅಳಿಯ ಶಶಾಂಕ್ ನಾಯ್ಕ್ ಹಾಗೂ ಅಂಬ್ಯುಲೆನ್ಸ್ ಚಾಲಕ ರೋಶನ್ ರೋಡ್ರಿಗಸ್ ಗಾಯಗೊಂಡಿದ್ದಾರೆ. ಟೋಲ್ ಸಿಬ್ಬಂದಿ ಶಂಬಾಜಿ ಘೋರ್ಪಡೆ ಹಾಗೂ ಇತರರು ಸಣ್ಣಪಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಟೋಲ್ ಪ್ಲಾಜಾದಲ್ಲಿನ ನಿರ್ಲಕ್ಷ:
ಅಂಬುಲೆನ್ಸ್ ಅಪಘಾತಕ್ಕೆ ಟೋಲ್ ಪ್ಲಾಜಾದ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಫಾಸ್ಟ್ ಟ್ರ್ಯಾಕಿನಲ್ಲಿ ಬ್ಯಾರಿಕೇಡ್ ಇಡುವುದು ಸರಿಯಲ್ಲ. ಹಾಗೆ ಇಟ್ಟರೂ ಅಲ್ಲೊಬ್ಬ ಸಿಬ್ಬಂದಿ ಯಾವಾಗಲೂ ಇರಬೇಕು. ಯಾವುದೇ ಅಂಬ್ಯುಲೆನ್ಸ್ ಬರುತ್ತಿರುವುದು ತಿಳಿದರೆ ತಕ್ಷಣ ಪಾಸ್ಟ್ ಟ್ರ್ಯಾಕ್ ಕ್ಲಿಯರ್ ಮಾಡಿಕೊಡಬೇಕು. ಅಂಬುಲೆನ್ಸ್ ಹತ್ತಿರ ಬರುವ ತನಕ ಒಂದು ಬದಿಯ ಬ್ಯಾರಿಕೇಡ್ ತೆಗೆದು ಮತ್ತೊಂದು ಬದಿಯ ಬ್ಯಾರಿಕೇಡ್ ತೆಗೆಯಲು ವಿಳಂಬ ಮಾಡಲಾಗಿದೆ. ಅಷ್ಟೇ ಅಲ್ಲದೇ ಪಾಸ್ಟ್ ಟ್ರ್ಯಾಕಿನ ಒಂದು ಬದಿ ದನ ಮಲಗಿಕೊಂಡಿತ್ತು. ಟೋಲ್ ಸಿಬ್ಬಂದಿ ಬ್ಯಾರಿಕೇಡ್ ತೆರವುಗೊಳಿಸಲು ತಡವಾಗಿ ಹೋಗಿದ್ದಾನೆ. ಟೋಲ್ ಸಿಬ್ಬಂದಿ ಹಾಗೂ ದನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ವೇಗದಲ್ಲಿದ್ದ ಅಂಬುಲೆನ್ಸ್ ಚಾಲಕ ಬ್ರೇಕ್ ಹಾಕಿದ್ದಾನೆ. ಆದರೆ ಮಳೆಯ ಕಾರಣದಿಂದ ಅಂಬುಲೆನ್ಸ್ ನಿಯಂತ್ರಣ ಕಳೆದುಕೊಂಡು ತಿರುಗಿ ಬಿದ್ದಿದೆ. ಸಿಬ್ಬಂದಿಗಳ ಈ ಅಜಾಗರೂಕತೆ ನಾಲ್ಕು ಜೀವಗಳನ್ನು ಬಲಿಯಾಗುವಂತಾಗಿದೆ. /ಕುಂದಾಪ್ರ ಡಾಟ್ ಕಾಂ ವರದಿ/

ಮುಗಿಯದ ರಾಷ್ಟ್ರೀಯ ಹೆದ್ದಾರಿಯ ಕರ್ಮಕಾಂಡ:
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೋಟದಿಂದ ಶಿರೂರಿನ ತನಕ ಒಂದಿಲ್ಲೊಂದು ಅವ್ಯವಸ್ಥೆ ಎದ್ದು ಕಾಣುತ್ತದೆ. ಅವ್ಯವಸ್ಥೆಯ ಕಾರಣಕ್ಕೆ ಅಮಾಯಕ ಜೀವಗಳು ಬಲಿಯಾಗುತ್ತಲೇ ಇದೆ. ಹೆದ್ದಾರಿ ನಿರ್ವಹಣೆಯಲ್ಲಿ ಲೋಪ, ಮೂಲಭೂತ ಸೌಕರ್ಯಗಳನ್ನು ಒದಗಿಸದೇ ಇರುವುದು ಅಪಘಾತಕ್ಕೆ ಎಡೆಮಾಡಿಕೊಡುತ್ತಿದೆ. ಮಳೆಗಾಲದಲ್ಲಿ ಹೆದ್ದಾರಿಯ ಮೇಲೆ ನೀರು ನಿಲ್ಲುವುದು, ಅಲ್ಲಲ್ಲಿ ರಸ್ತೆ ಹೊಂಡ ಬಿದ್ದಿರುವುದು, ಈತನಕ ರಾತ್ರಿ ವೇಳೆ ಕೆಲವೆಡೆ ಸರಿಯಾದ ಬೀದಿ ದೀಪ ವ್ಯವಸ್ಥೆ ಇಲ್ಲದಿರುವುದು. ಪ್ರಮುಖ ಜಂಕ್ಷನ್’ಗಳಲ್ಲಿ ವೆಯ್ಟಿಂಗ್ ಟ್ರ್ಯಾಕ್ ಮಾಡದಿರುವುದು, ಹಂಪ್’ಗಳಿಗೆ ಪ್ರತಿಫಲಕಗಳನ್ನು ಅಳವಡಿಸದಿರುವುದು, ಚರಂಡಿ ಕಾಮಗಾರಿ ಪೂರ್ಣಗೊಳಿಸದಿರುವುದು, ಅಪಘಾತ ನಡೆದರೆ ತಕ್ಷಣ ಸ್ಪಂದಿಸದಿರುವುದು ಹೀಗೆ ಸಾಲು ಸಾಲು ಸಮಸ್ಯೆಗಳ ಸರಮಾಲೆಯನ್ನಿಟ್ಟುಕೊಂಡು ಟೋಲ್ ಸಂಗ್ರಹಕ್ಕೆ ಮಾತ್ರ ಗಮನ ಹರಿಸುತ್ತಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಹೆದ್ದಾರಿ ಚತುಷ್ಪಥ ಕಾಮಗಾರಿ ಆರಂಭವಾಗಾಗಲಿಂದಲೂ ನಿರ್ವಹಣೆಯಲ್ಲಿನ ಅವ್ಯವಸ್ಥೆಯಿಂದಾಗಿಯೇ ನೂರಾರು ಅಪಘಾತಗಳು ಸಂಭವಿಸಿದೆ. ಆದಾಗ್ಯೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚತ್ತುಕೊಂಡು ಅವ್ಯವಸ್ಥೆ ಸರಿಪಡಿಸುವ ಕಾರ್ಯ ಮಾಡಲಿ ಎಂಬುದು ನಮ್ಮ ಆಶಯವಾಗಿದೆ. /ಕುಂದಾಪ್ರ ಡಾಟ್ ಕಾಂ ವರದಿ/

* ರಾಷ್ಟ್ರೀಯ ಹೆದ್ದಾರಿಯೆಂಬುದು ಅವ್ಯವಸ್ಥೆಯ ಆಗರವಾಗಿದೆ. ಕೆಲ ತಿಂಗಳ ಹಿಂದೆ ಒತ್ತಿನಣೆಯಲ್ಲಿ ಅಪಘಾತವಾದಾಗ ಏಕಮುಖ ಸಂಚಾರ ಮಾಡಲಾಗಿತ್ತು. ಆದರೆ ಯಾವುದೇ ಬ್ಯಾರಿಕೇಡ್, ಫಲಕ ಹಾಕದೇ ನಿರ್ಲಕ್ಷ್ಯ ತೋರಲಾಗಿತ್ತು. ಇದರಿಂದಾಗಿ ಶಿರೂರಿನ ನಿವಾಸಿಯೋರ್ವರು ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದರು. ಇಂತಹ ಅವ್ಯವಸ್ಥೆಯಿಂದಾಗಿ ಅಪಘಾತಕ್ಕೀಡಾದ ಹಲವು ಪ್ರಕರಣಗಳು ನಮ್ಮ ಮುಂದಿದೆ. ಟೋಲ್ ಗೇಟಿನ ಸಿಬ್ಬಂದಿಗಳ ನಿರ್ಲಕ್ಷ್ಯ ನಾಲ್ವರನ್ನು ಬಲಿ ಪಡೆದಿದೆ. ಟೋಲ್ ಸಂಗ್ರಹಿಸುವಲ್ಲಿ ಕಂಪೆನಿಯವರಿಗೆ ಇರುವ ಉತ್ಸುಕತೆ ಮೂಲಭೂತ ಸೌಕರ್ಯ ಒದಗಿಸಿಕೊಡುವಲ್ಲಿ ಇಲ್ಲ. ಸಾರ್ವಜನಿಕರು ಎಚ್ಚೆತ್ತುಕೊಳ್ಳಲಿದ್ದರೆ ಹೆದ್ದಾರಿ ಸಾವಿನ ಕೂಪವಾಗಲಿದೆ. ಉದಯ ಪೂಜಾರಿ, ಸದಸ್ಯರು, ಗ್ರಾ.ಪಂ. ಶಿರೂರು

ಇದನ್ನೂ ಓದಿ:
ಶಿರೂರು ಟೋಲ್ ಪ್ಲಾಜಾದಲ್ಲಿ ಭೀಕರ ಅಂಬುಲೆನ್ಸ್ ಅಪಘಾತ. ನಾಲ್ವರ ದುರ್ಮರಣ, ನಾಲ್ವರಿಗೆ ಗಾಯ – https://kundapraa.com/?p=60776 .
► ಭೀಕರ ಅಪಘಾತ: ಶಿರೂರು ಟೋಲ್ ಪ್ಲಾಜಾದಲ್ಲಿ ಮಗುಚಿದ ಅಂಬ್ಯುಲೆನ್ಸ್. ಮೂವರ ಸಾವು, ಓರ್ವ ಗಂಭೀರ – https://kundapraa.com/?p=60757 .

Exit mobile version