ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ಕುಂಭಾಶಿ ವಿಶ್ವಕರ್ಮ ಕರಕುಶಲ ಕೇಂದ್ರಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಇತ್ತೀಚಿಗೆ ಭೇಟಿ ನೀಡಿದರು. ಶ್ರೀಪಾದರನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ಪುತ್ರ ಖ್ಯಾತರಥ ಶಿಲ್ಪಿ ರಾಜಗೋಪಾಲ ಆಚಾರ್ಯ ಕೋಟೇಶ್ವರ ಇವರು ಸ್ವಾಗತಿಸಿಕೊಂಡು ಕೇಂದ್ರದ ವತಿಯಿಂದ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅವರು ಕೇಂದ್ರದ ರಥ ತಯಾರಿಕೆಯ ಚಟುವಟಿಕೆಯನ್ನು ಗಮನಿಸಿ ರಥ ತಯಾರಿಸುವ ವಿಧಾನ ಮತ್ತು ರಥಗಳ ಮಾಹಿತಿಯನ್ನು ಪಡೆದುಕೊಂಡರು. ರಥಶಿಲ್ಪಿ ಗಣಪತಿ ಆಚಾರ್ಯ, ಸತೀಶ ಆಚಾರ್, ಕರಕುಶಲ ಕೇಂದ್ರದ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು. ಕುಂಭಾಶಿ ವಿಶ್ವಕರ್ಮ ಕರಕುಶಲ ಕೇಂದ್ರದ ವತಿಯಿಂದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಮಠಾಧೀಶರಾದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲೂಕು ಘಟಕದ ಸಾಹಿತ್ಯ ಸಂಚಾರ 61 ಸರಣಿ ಕಾರ್ಯಕ್ರಮವು ಸೋಮವಾರದಂದು ಇಲ್ಲಿನ ಕೂರಾಡಿಯ ಬಿಎಂಎಂ ಪ್ರೌಢಶಾಲೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಇಲ್ಲಿನ ನಿವೃತ್ತ ಶಿಕ್ಷಕ ವಿಶ್ವನಾಥ್ ಎಂ. ಉದ್ಘಾಟಿಸಿ, ಮಾತನಾಡಿ, ದೀಪವು ಸದಾ ಕಾಲ ಪೂಜನೀಯ. ಅದು ಇತರರಿಗಾಗಿ ಉರಿಯುವುದೇ ವಿನಹ ಇತರರ ಯಶಸ್ಸನ್ನು ಕಂಡು ಉರಿದುಕೊಳ್ಳುವುದಿಲ್ಲ ಎಂದು ಶುಭ ಹಾರೈಸಿದರು. ಮುಖ್ಯ ಅಧ್ಯಾಪಕರಾದ ಮಂಜುನಾಥ್ ಎಂ. ಅವರು ಮಾತನಾಡಿ, ಇಂದು ವಿದ್ಯಾರ್ಥಿಗಳಿಗೆ ವಿದ್ಯೆ ಜೊತೆಯಲ್ಲಿ ಸಂಸ್ಕಾರ ಮುಖ್ಯ ಎಂದು ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾದ ನೀಲಾಂಬರ ಸುರೇಂದ್ರ ಅಡಿಗ ಅವರು ಪ್ರಾಸ ಪದಗಳನ್ನು ಕೊಟ್ಟು ಕವನಗಳನ್ನು ರಚಿಸಿದರು. ಬ್ರಹ್ಮಾವರ ಘಟಕದ ಅಧ್ಯಕ್ಷರಾದ ಗುಂಡ್ಮಿ ರಾಮಚಂದ್ರ ಐತಾಳ್ ಅವರು ಸ್ವರ ಏರಿಳಿತವು ಪ್ರಾಮುಖ್ಯ ಎಂದು ಅಭಿನಯಿಸಿ ತೋರಿಸಿದರು. ನಾಗೇಶ ಮಯ್ಯ ಅವರು ಕಥೆಗಳನ್ನ ರಚಿಸುವ ಬಗ್ಗೆ ವಿವರಿಸಿದರು. ನರಸಿಂಹ ತುಂಗ ಅವರು ನವರಸಗಳ ಬಗ್ಗೆ ವಿವರಿಸುತ್ತಾ ಯಕ್ಷಗಾನದ ಅಭಿನಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲ ಪುರಾತನವಾದ ಕಾರಣಿಕ ಕ್ಷೇತ್ರಗಳಲ್ಲೊಂದಾಗಿದೆ. ಈ ನಿಟ್ಟಿನಲ್ಲಿ ಭಕ್ತ ಸಮುದಾಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಸಾಕ್ಷೀಯಾಗಿದೆ ಎಂದು ಸಮಾಜ ಸೇವಕ ಪಾರಂಪಳ್ಳಿ ರವೀಂದ್ರ ಐತಾಳ್ ಹೇಳಿದರು. ಅವರು ಭಾನುವಾರ ಕೋಟದ ಹರ್ತಟ್ಟು ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಶಿವರಾತ್ರಿ ಉತ್ಸವದ ಅಂಗವಾಗಿ ಹಮ್ಮಿಕೊಂಡ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು. ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಪ್ರತಿಯೊರ್ವರ ಸಹಕಾರ ಅತ್ಯವಶ್ಯಕ. ಈ ನಿಟ್ಟಿನಲ್ಲಿ ಕರಾವಳಿಯ ಧರ್ಮರತ್ನಾಕರ ಆನಂದ್ ಸಿ. ಕುಂದರ್ ದೇಗುಲಗಳ ಅಭಿವೃದ್ಧಿಗೆ ಸಾಕಷ್ಟು ದೇಣಿಗಳನ್ನು ನೀಡುತ್ತಿದ್ದಾರೆ. ಅಂತೆಯೇ ಈ ದೇಗುಲಕ್ಕೆ ತನ್ನ ವತಿಯಿಂದ 25ಸಾವಿರ ರೂಗಳನ್ನು ಅಭಿವೃದ್ಧಿಗೆ ನೀಡುವುದಾಗಿ ಘೋಷಿಸಿದರು. ದೇಗುಲದ ಅಧ್ಯಕ್ಷ ಸುರೇಶ್ ಗಾಣಿಗ ಶೇವಧಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮವನ್ನು ದೇಗುಲದ ಗೌರವಾಧ್ಯಕ್ಷ ಆನಂದ್ ಸಿ. ಕುಂದರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ದೇಗುಲದ ಸೇವೆಯಲ್ಲಿ ನಿರತರಾದ ಸುಜಾತ ಶ್ರೀಧರ ದೇವಾಡಿಗ, ಜೀವನ್ ಸಮೃದ್ಧ್, ದೇವಿ ಮಂಜುನಾಥ ದೇವಾಡಿಗ ಅವರುಗಳನ್ನು ಸನ್ಮಾನಿಸಲಾಯಿತು. ಮುಖ್ಯ ಅಭ್ಯಾಗತರಾಗಿ ಕೋಟ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಶಿರೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ದಿನೇಶ್ ಕುಮಾರ್ ಶಿರೂರು (46) ಅವರು ಸೋಮವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಅವರು ಶಿರೂರು ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಈ ಹಿಂದೆ ಅವರು ಆಕ್ರಮ -ಸಕ್ರಮ ಸಮಿತಿ ಮಾಜಿ ಸದಸ್ಯರಾಗಿ, ಸ.ಪ.ಪೂ ಕಾಲೇಜಿನ ಶಾಲಾಭಿವೃದ್ಧಿ ಸಮಿತಿ ಸದಸ್ಯರಾಗಿ, ಮೇಲ್ಪಂಕ್ತಿ ಎರಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಕ್ರೀಯ ಸ್ವಯಂಸೇವಕರಾಗಿದ್ದ ಅವರು ಬಿಜೆಪಿ ಪಕ್ಷದಲ್ಲಿಯೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಅವರು ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದು ಸೋಮವಾರ ನಿಧನರಾಗಿದ್ದಾರೆ. ಅವಿವಾಹಿತರಾಗಿರುವ ಅವರು ತಾಯಿ ಹಾಗೂ ಇಬ್ಬರು ಸಹೋದರಿಯರು ಹಾಗೂ ಅಪಾರ ಸ್ನೇಹಿತ ವರ್ಗವನ್ನು ಅಗಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟಿಂಗ್ ಆಫ್ ಇಂಡಿಯಾ ನಡೆಸುವ ಸಿಎಂಎ ಇಂಟರ್ಮೀಡಿಯಟ್ ಗ್ರೂಪ್II, ಡಿಸೆಂಬರ್ 2025ರಲ್ಲಿ ನಡೆದ ಪರೀಕ್ಷೆಯಲ್ಲಿ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಕ್ತನ ವಿದ್ಯಾರ್ಥಿಗಳಾದ ಅನುಶ್ರೀ ಹಾಗೂ ಯಶವಂತ ಎನ್. ಉತ್ತೀರ್ಣವಾಗುವ ಮೂಲಕ ಉತ್ಕೃಷ್ಟ ಸಾಧನೆಗೈದಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ-ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೆ.ಡಿ.ಎಫ್ ಕಪ್ 2026, ರಾಜ್ಯ ಮಟ್ಟದ ಇಂಟರ್ ಡುಜೊ ಕರಾಟೆ ಚಾಂಪಿಯನ್ಶಿಪ್ನ ಕುಮಿಟಿ ವಿಭಾಗದಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಾದ ತನ್ವಿ (5B) ಹಾಗೂ ವಂಶಿಕಾ ಭಂಡಾರ್ಕರ್ (5B) ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದಿರುತ್ತಾರೆ. ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಶ್ರೀ ಜಟ್ಟಿಗೆಶ್ವರ ಭಕ್ತ ವೃಂದ ಕುಂಜಿಗುಡಿ ಸಾಲಿಗ್ರಾಮ ಇದರ ನೇತೃತ್ವದಲ್ಲಿ 30ನೇ ವರ್ಷದ ಯಕ್ಷಗಾನ ಬಯಲಾಟವಾಗಿ ಅಮೃತೇಶ್ವರಿ ಮೇಳದ ವೇದಿಕೆಯಲ್ಲಿ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೋಟ ಸುರೇಶ್ ಬಂಗೇರ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಸಾರ್ವಜನಿಕ ಅನ್ನ ಸಂತರ್ಪಣೆ ಸೇವಕರ್ತರಾದ ಮಂಜುನಾಥ ಹೊಳ್ಳ ದಂಪತಿಗಳಿಗೆ ಮತ್ತು ಗೆಳೆಯರ ಬಳಗದ ತಾರಾನಾಥ ಹೊಳ್ಳರಿಗೆ ವಿಶೇಷ ಗೌರವಾರ್ಪಣೆ ಸಲ್ಲಿಸಲಾಯಿತು. ಯಕ್ಷಗಾನಕ್ಕೆ ವಾರ್ಷಿಕ ನಿತ್ಯನಿಧಿ ಠೇವಣಿದಾರರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಆರೋಗ್ಯ ಸೇವೆ, ಸಮಾಜ ಸೇವೆ, ವಿದ್ಯಾ ಸೇವೆ, ಧಾರ್ಮಿಕ ಸೇವೆಗೆ ಸಹಾಯ ನಿಧಿ ವಿತರಿಸಲಾಯಿತು. ವೇದಿಕೆಯಲ್ಲಿ ಅತಿಥಿಗಳಾಗಿ ಉದ್ಯಮಿ ಕೃಷ್ಣಯ್ಯ ಪೂಜಾರಿ ಗದ್ದೆಮನೆ, ಶ್ರೀ ಜಟ್ಟಿಗೆಶ್ವರ ಭಕ್ತ ವೃಂದ ಅಧ್ಯಕ್ಷ ಗಣೇಶ್ ನಾಯರಿ, ಜಟ್ಟಿಗೆಶ್ವರ ಸಮಿತಿಯ ಕುಂಜುಗುಡಿ ಮಂಜುನಾಥ ನಾಯರಿ, ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಗಣೇಶ್ ನೆಲ್ಲಿಬೆಟ್ಟು, ಶಿವಪೂಜಾರಿ ಉಪಸ್ಥಿತರಿದ್ದರು. ಸಮಿತಿಯ ಕೆ. ಮಂಜುನಾಥ ನಾಯರಿ ಕಾರ್ಯಕ್ರಮ ನಿರೂಪಿಸಿ, ಸನ್ಮಾನ ಪತ್ರ ವಾಚಿಸಿ ಧನ್ಯವಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ರಿಂಗ್ ರಸ್ತೆ ಸಮೀಪ ವ್ಯಕ್ತಿಯೊಬ್ಬರು ಆಟೋ ರಿಕ್ಷಾದಲ್ಲಿ ಉಚಿತ ಅನ್ನಭಾಗ್ಯ ಅಕ್ಕಿಯನ್ನು ಸಾಗಾಟ ನಡೆಸುತ್ತಿರುವಾಗ ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ. ಆಟೋ ಚಾಲಕ ಬಾಲಕೃಷ್ಣ ಖಾರ್ವಿಯನ್ನು ಪೊಲೀಸರು ಅಕ್ಕಿ ಸಹಿತ ವಶಪಡಿಸಿಕೊಂಡಿದ್ದಾರೆ. ಆಹಾರ ನಿರೀಕ್ಷಕ ಸುರೇಶ ಎಚ್.ಎಸ್, ಪಿಎಸ್ಐ ನಂಜಾನಾಯ್ಕ್ ಎನ್. ಹಾಗೂ ಸಿಬ್ಬಂದಿಯವರೊಂದಿಗೆ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ಕಾಯುತ್ತಿರುವಾಗ ಆಟೋ ರಿಕ್ಷಾವು ಖಾರ್ವಿಕೇರಿ ರಿಂಗ್ ರಸ್ತೆ ಕಡೆಯಿಂದ ಬರುತ್ತಿರುವುದನ್ನು ಕಂಡು ನಿಲ್ಲಿಸಿ, ಪರಿಶೀಲಿಸಿದಾಗ ಆಟೋ ರಿಕ್ಷಾದಲ್ಲಿ ಅಕ್ಕಿ ತುಂಬಿದ 8 ಪಾಲೀಥಿನ್ ಚೀಲದಲ್ಲಿ ಉಚಿತ ಅನ್ನಭಾಗ್ಯ ಅಕ್ಕಿ ಇತ್ತು. ಚಾಲಕ ಕೃಷ್ಣ ಖಾರ್ವಿ ಬಳಿ ಇದ್ದ ಒಟ್ಟು 300 ಕೆ.ಜಿ ತೂಕದ ಅಂದಾಜು ರೂ.7,200 ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಶ್ರೀ ಇಂದುಧರ ದೇವಸ್ಥಾನ ಗಂಗೊಳ್ಳಿ ಇದರ ವತಿಯಿಂದ 81ನೇ ಮಹಾ ಶಿವರಾತ್ರಿ ಮಹೋತ್ಸವದ ಪ್ರಯುಕ್ತ ಗಂಗೊಳ್ಳಿಯ ಸ.ವಿ. ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಆಯೋಜಿಸಲಾಗಿದ್ದ ಕಾರವಾರದಿಂದ ಮಂಗಳೂರುವರೆಗಿನ ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಕುಣಿತ ಭಜನಾ ಸ್ಪರ್ಧೆಯಲ್ಲಿ ಮೊವಾಡಿ ಶ್ರೀ ಮಾಣಿ ಸಿದ್ಧಲಿಂಗೇಶ್ವರ ಭಜನಾ ಮಂಡಳಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಆಶಿಕಾನ್ ಭಜನಾ ಮಂಡಳಿ ಭಟ್ಕಳ (ದ್ವಿತೀಯ) ಮತ್ತು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಶಾನಮದ್ಲು ಭಟ್ಕಳ (ತೃತೀಯ) ಸ್ಥಾನ ಪಡೆದುಕೊಂಡಿತು. ವಿಜೇತರಿಗೆ ತೀರ್ಪುಗಾರರಾದ ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಸಂಚಾಲಕ ಜಯಕರ ಪೂಜಾರಿ ಗುಲ್ವಾಡಿ, ಭಜನಾ ಪರಿಷತ್ ಗಂಗೊಳ್ಳಿ ವಲಯ ಅಧ್ಯಕ್ಷ ಜಗದೀಶ ಪೂಜಾರಿ, ಬಿ. ಪ್ರಕಾಶ ಶೆಣೈ ಮತ್ತು ಮಾಧವ ದೇವಾಡಿಗ ಬಹುಮಾನ ವಿತರಿಸಿ ಶುಭ ಹಾರೈಸಿದರು. ದೇವಸ್ಥಾನದ ಅಧ್ಯಕ್ಷ ಗುರುರಾಜ್, ಕಾರ್ಯದರ್ಶಿ ವರದರಾಜ್ ಜಿ.ಟಿ. ಮತ್ತು ಅರ್ಚಕ ಕೃಷ್ಣ ಜಿ.ಟಿ., ದೇವಸ್ಥಾನದ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ/ ಪಂಗಡದ ಮುಖಂಡರುಗಳು ಹಾಗೂ ಗ್ರಾಮಸ್ಥರಿಗೆ ಮಾಸಿಕ ಎಸ್ಸಿ ಎಸ್ಟಿ ಕುಂದು ಕೊರತೆ ಸಭೆ ಬೈಂದೂರು ವೃತ್ತ ನಿರೀಕ್ಷಕರಾದ ಶಿವಕುಮಾರ್ ಬಿ. ಅವರ ನೇತೃತ್ವದಲ್ಲಿ ಭಾನುವಾರ ನಡೆಯಿತು. ಸಭೆಯಲ್ಲಿ ಕುಂದುಕೊರತೆ ಬಗ್ಗೆ ವಿಚಾರಿಸಿ ಆಹವಾಲುಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ವ್ಯವಹಾರ ಮಾಡುವುದಾಗಿ ತಿಳಿಸಿದರು. ಇದೇ ವೇಳೆ ಸೈಬರ್ ಅಪರಾಧ, ಸಂಚಾರಿ ನಿಯಮಗಳು, ತುರ್ತು ಸಂದರ್ಭದಲ್ಲಿ 112 ದೂರವಾಣಿ ಕರೆ ಹಾಗೂ ಇನ್ನಿತರ ಬಗ್ಗೆ ಮಾಹಿತಿ ನೀಡಿದರು.
