ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಶ್ವದಲ್ಲಿ ಕೋಟ್ಯಾಂತರ ಜನರು ಕಣ್ಣಿನ ವಿವಿಧ ದೋಷಗಳಿಂದ ಬಳಲುತ್ತಿದ್ದು, ಅನೇಕರು ದೃಷ್ಟಿಯನ್ನು ಕಳೆದು ಕೊಂಡಿದ್ದಾರೆ. ಹೀಗಾಗಿ ಜನರು ಕಣ್ಣಿನ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು. ಕಾಲಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದರಿಂದ ಕಣ್ಣಿನ ದೋಷಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಿದೆ. ಕಣ್ಣಿನ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಕಣ್ಣಿನ ತಪಾಸಣಾ ಶಿಬಿರಗಳ ಮೂಲಕ ಜನರ ಪಾಲಿಗೆ ಬೆಳಕಾಗಬೇಕಾದದ್ದು ಸಂಘ ಸಂಸ್ಥೆಗಳ ಕರ್ತವ್ಯವಾಗಿದೆ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು.
ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನ ಟ್ರಸ್ಟ್ ಬಸ್ರೂರು ಮತ್ತು ಜಿಎಸ್ಬಿ ಸಮಾಜ ಬಸ್ರೂರು ಇವರ ಜಂಟಿ ಆಶ್ರಯದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆ ಸಹಯೋಗದೊಂದಿಗೆ ಬಸ್ರೂರು ಮಂಡಿಕೇರಿಯ ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಸಭಾಭವನದಲ್ಲಿ ನಡೆದ ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಟಿ.ನಾರಾಯಣ ಪೈ ಅಧ್ಯಕ್ಷತೆ ವಹಿಸಿದ್ದರು. ಬಸ್ರೂರು ಜಿ.ಎಸ್.ಬಿ. ಸಮಾಜ ಅಧ್ಯಕ್ಷ ನರಸಿಂಹರಾಜ ಪ್ರಭು, ಮಣಿಪಾಲ ಕೆಎಂಸಿ ಆಸ್ಪತ್ರೆಯ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಸುಹಾನಾ, ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು, ಬಸ್ರೂರು ಜಿಎಸ್ಬಿ ಸಮಾಜ ಸದಸ್ಯರು ಉಪಸ್ಥಿತರಿದ್ದರು.
ಬಸ್ರೂರು ಜಿ.ಎಸ್.ಬಿ. ಸಮಾಜ ಕಾರ್ಯದರ್ಶಿ ಬಿ.ಎನ್.ಪ್ರಭು ಸ್ವಾಗತಿಸಿದರು. ಮಣಿಪಾಲ ಕೆಎಂಸಿ ಆಸ್ಪತ್ರೆಯ ಎಚ್ಒಡಿ ಡಾ.ಯೋಗೀಶ್ ಕಾಮತ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಬಿ. ರಾಘವೇಂದ್ರ ಪೈ ಕಾರ್ಯಕ್ರಮ ನಿರ್ವಹಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಡಾ.ಎಂ. ವಿಶ್ವನಾಥ ಪೈ ವಂದಿಸಿದರು.










