ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಅಂಪಾರು ಸಂಜಯಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವು ವಿಶಿಷ್ಟ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಲಾಯಿತು.
ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಸಂಜಯಗಾಂಧಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಬಲಾಡಿ ಅವರು ರಿಬ್ಬನ್ ಕತ್ತರಿಸುವುದರ ಮೂಲಕ ನೆರವೇರಿಸಿದರೆ, ಖಜಾಂಚಿ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಅವರು ದೀಪ ಬೆಳಗಿಸಿ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಿದರು.
ಕಿಂಡರ್ಗಾರ್ಟನ್ ಮಕ್ಕಳನ್ನೊಳಗೊಂಡ ವಿದ್ಯಾರ್ಥಿಗಳ ತಂಡ ಜ್ಞಾನ, ದೈವಿಕತೆ, ಸಮೃದ್ಧಿಯ ಪ್ರತೀಕವಾಗಿರುವ ಮಂಗಳಕರ ಹಣತೆಯನ್ನು ಬೆಳಗುವ ಮೂಲಕ ಶುಭಾರಂಭ ಮಾಡಿದರು. ಶಾಲಾ ಆಡಳಿತಾಧಿಕಾರಿ ಚೈತ್ರ ಯಡಿಯಾಳ ಅವರು ಮಕ್ಕಳಿಗೆ ಆರತಿ ಬೆಳಗಿ ಹೂವು, ಅಕ್ಷತೆಯೊಂದಿಗೆ ಬರಮಾಡಿಕೊಂಡರು.
ಮುಖ್ಯ ಶಿಕ್ಷಕಿ ವಿಲಾಸಿನಿ ಶೆಟ್ಟಿ ಸ್ವಾಗತಿಸಿದರೆ, ಸಂಯೋಜಕಿ ಸರೋಜ ಅವರು ವಂದಿಸಿದರು. ಸಂಸ್ಥೆಯ ಶಿಕ್ಷಕ – ಶಿಕ್ಷಕಿಯರು ವಿದ್ಯಾರ್ಥಿಗಳಿಗೆ ಸಿಹಿ ಹಂಚುವ ಮೂಲಕ ಶುಭ ಹಾರೈಸಿದರು.










