ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯಾವುದೇ ರೀತಿಯ ಒತ್ತಡ ವಿದ್ಯಾರ್ಥಿಗಳ ಮೇಲೆ ತರದೇ ಅವರು ಸ್ವಯಂಸ್ಪೂರ್ತಿಯಿಂದ ಕಲಿಯುವಂಥ ವಾತಾವರಣ ಆರ್.ಎನ್. ಎಸ್. ಕಾಲೇಜಿನಲ್ಲಿದ್ದಿದ್ದರಿಂದ ನನ್ನಂಥ ಹಲವು ವಿದ್ಯಾರ್ಥಿಗಳಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಪ್ರವೇಶಿಸಿ ಯಶಸ್ಸು ಪಡೆಯಲು ಸಾಧ್ಯವಾಯಿತು ಎಂದು ಕಾಲೇಜಿನ ಹಳೆ ವಿದ್ಯಾರ್ಥಿ, ಉಡುಪಿಯ ಟಿ.ಎಮ್.ಎ. ಪೈ ಆಸ್ಪತ್ರೆಯ ವೈದ್ಯೆ ಡಾ. ಶ್ರೀಪ್ರದಾ ಹೆಗ್ಡೆ ತಿಳಿಸಿದರು.
ಅವರು ಕುಂದಾಪುರ ಎಜುಕೇಶನ್ ಸೊಸೈಟಿಯ ಸುವರ್ಣ ಮಹೋತ್ಸವದ ವೇದಿಕೆಯಲ್ಲಿ ನಡೆದ ಕುಂದಾಪುರದ ಆರ್. ಎನ್ .ಶೆಟ್ಟಿ ಪದವಿ ಪೂರ್ವ ಕಾಲೇಜಿನ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿಆಗಮಿಸಿದ ಇನ್ನೋರ್ವ ಹಳೆ ವಿದ್ಯಾರ್ಥಿ CA ಸಂಕೇತ್ ಹೆಗ್ಡೆ ಕಾಲೇಜಿನಲ್ಲಿ ಕಲಿಯುವಾಗ ಉಪನ್ಯಾಸಕರ ಸ್ಪೂರ್ತಿದಾಯಕ ನುಡಿಗಳು ತನ್ನಲ್ಲಿ ಸಿ.ಎಯಂಥ ಕಠಿಣ ವ್ಯಾಸಂಗ ಮಾಡಲು ಸಹಕಾರಿಯಾಯಿತು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಸಿ.ಇ.ಎಸ್ ನ ಅಧ್ಯಕ್ಷರೂ, ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿಶಾಸಕ ಬಿ.ಎಮ್. ಸುಕುಮಾರ್ ಶೆಟ್ಟಿ ಅವರು ಸಂಸ್ಥೆಯನ್ನು ಊರ್ಜಿತಗೊಳಿಸುವಲ್ಲಿ ಎದುರಾದ ಭಾವುಕಕ್ಷಣಗಳನ್ನು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ತಿಳಿಸಿದರು.
ಕುಂದಾಪುರ ಎಜುಕೇಶನ್ ಸೊಸೈಟಿಯಕಾರ್ಯದರ್ಶಿಯವರಾದ ಸೀತಾರಾಮನಕ್ಕತ್ತಾಯ, ಖಜಾಂಚಿ ಡಾ. ಎಮ್. ಸಚ್ಚಿದಾನಂದಶೆಟ್ಟಿ, ಜೊತೆ ಕಾರ್ಯದರ್ಶಿ ಸುಧಾಕರ ಶೆಟ್ಟಿ ಭಾಂಡ್ಯ, ಸದಸ್ಯರಾದ ಅರುಣ್ ಕುಮಾರ್ ಶೆಟ್ಟಿ ಹಾಗೂ ಡಾ. ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಉಮೇಶ್ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟಿಯ ಅವರು ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಜ್ಯೋತಿ ಅತಿಥಿಗಳನ್ನು ಸ್ವಾಗತಿಸಿದರು. ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಅಕ್ಷತಾ ಕೆ.ಎನ್. ಮತ್ತು ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಅಶ್ವಿನಿ ನಾಯಕ್ ಅವರು ಅತಿಥಿ ಪರಿಚಯ ಮಾಡಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ರೇಖಾ ಪುತ್ರನ್, ಗಣಿತಶಾಸ್ತ್ರ ಉಪನ್ಯಾಸಕಿ ಫರ್ಝಾನಾ ಹಾಗೂ ರಸಾಯನಶಾಸ್ತ್ರ ಉಪನ್ಯಾಸಕಿ ಅಕ್ಷತಾ ಶೆಟ್ಟಿ ಅವರು ಶೈಕ್ಷಣಿಕ ಬಹುಮಾನಗಳ ಪಟ್ಟಿಗಳನ್ನು ವಾಚಿಸಿದರು. ಭೌತಶಾಸ್ತ್ರ ಉಪನ್ಯಾಸಕರಾದ ಅನಿಲ್ ಕೊಠಾರಿಯವರು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ರಾಂಕ್ ವಿಜೇತ ಹಳೆ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಇಂಗ್ಲೀಷ್ ಉಪನ್ಯಾಸಕಿ ಸುಮತಿ ಶೆಣೈ ಕಲಾ ಮತ್ತು ಕ್ರೀಡಾಕ್ಷೇತ್ರದ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನು ನಿರ್ವಹಿಸಿದರು.
















