ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಿಕ್ಷಣ ಇಲಾಖೆ ಅವೈಜ್ಞಾನಿಕವಾಗಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸುತ್ತಿದ್ದು ಇದು ಸರ್ಕಾರಿ ಶಾಲೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಂಡ್ಸೆ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳುವ ಸಲುವಾಗಿ ಸಾಕಷ್ಟು ಪ್ರಯತ್ನ ಮಾಡಿ ಬೇರೆ ಬೇರೆ ಕಡೆಗಳಿಂದ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡುವ ಕೆಲಸ ಆಗಿದೆ. ಆದರೆ ಈಗಿನ ವಿದ್ಯಾರ್ಥಿಗಳ ಸಂಖ್ಯೆಗೆ ಇನ್ನೂ ಶಿಕ್ಷಕರ ಅವಶ್ಯಕತೆ ಇರುವಾಗ ಇದ್ದ ಶಿಕ್ಷರನ್ನೇ ಹೆಚ್ಚುವರಿ ಶಿಕ್ಷಕರೆಂದು ವರ್ಗಾವಣೆಗೆ ಮುಂದಾಗಿರುವುದು ಅವೈಜ್ಞಾನಿಕವಾಗಿದೆ ಎಂದು ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಹೇಳಿದರು. ಎಂದು ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಹೇಳಿದರು.
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿ ನಡೆದ ವಂಡ್ಸೆ ಗ್ರಾಮ ಪಂಚಾಯತ್ನ ಪ್ರಥಮ ಸುತ್ತಿನ ಗ್ರಾಮ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದರು. ವಂಡ್ಸೆ ಗ್ರಾಮ ಪಂಚಾಯತ್ನಲ್ಲಿ ಸೋಮವಾರದಿಂದಲೇ ಬಾಪೂಜಿ ಸೇವಾಕೇಂದ್ರ ಆರಂಭವಾಗಿದ್ದು ಇಲ್ಲಿ ಪಹಣಿ ಪತ್ರ ಸೇರಿದಂತೆ ಕಂದಾಯ ಇಲಾಖೆಯ ೩೯ ಸೇವೆಗಳನ್ನು ಪಡೆಯಲು ಅವಕಾಶವಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಅಧ್ಯಕ್ಷರು ತಿಳಿಸಿದರು.
‘ನಮ್ಮ ಗ್ರಾಮ ಯೋಜನೆ’ಯ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಮುಂದಿನ ೫ ವರ್ಷದ ಯೋಜನೆಯ ತಯಾರಿ ಬಗ್ಗೆ, ವರ್ಗೀಕರಣ ಇತ್ಯಾದಿ ವಿಚಾರಗಳ ಬಗ್ಗೆ ಸದಸ್ಯರಿಗೆ ಮನವರಿಕೆ ಮಾಡಲಾಯಿತು.
ಹೆಚ್ಚುವರಿ ಶಿಕ್ಷಕರ ವರ್ಗಾವಣೆಯನ್ನು ವಿರೋಧಿಸಿ ಜನರು ಅಸಮಾಧಾನ ವ್ಯಕ್ತ ಪಡಿಸಿದರು. ಸರ್ಕಾರಿ ಶಾಲೆಗಳಿಗೆ ಇನ್ನೂ ಹೆಚ್ಚಿನ ಶಿಕ್ಷಕರನ್ನು ಸರ್ಕಾರ ನೀಡುವುದನ್ನು ಬಿಟ್ಟು ಇರುವ ಶಿಕ್ಷಕರನ್ನೇ ತಗೆಯುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಇತರ ಗ್ರಾಮಕ್ಕಿಂತ ವಂಡ್ಸೆ ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯ ವ್ಯಾಪಕವಾಗುತ್ತಿದ್ದು, ಜಡ್ಕಲ್-ಮುದೂರು ವಿದ್ಯುತ್ ಸಂಪರ್ಕ ವಂಡ್ಸೆಯ ಮೂಲಕವೇ ಹರಿದು ಹೋಗುತ್ತಿರುವುದರಿಂದ ಆ ಭಾಗದಲ್ಲಿ ಸಮಸ್ಯೆ ಉಂಟಾದರೂ ಇಲ್ಲಿ ವಿದ್ಯುತ್ ವ್ಯತ್ಯಯವಾಗುತ್ತದೆ. ಇದಕ್ಕೊಂದು ಶಾಶ್ವತ ಪರಿಹಾರ ಸಂಬಂಧಪಟ್ಟವರು ಕಂಡು ಕೊಳ್ಳಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದರು. ವಂಡ್ಸೆಗೆ ಕುಡಿಯುವ ನೀರಿನ ಸಮಸ್ಯೆ ಶಾಶ್ವತ ಪರಿಹಾರ, ಸಾರ್ವಜನಿಕ ಶೌಚಾಲಯ ನಿರ್ಮಾಣ, ಸಂಚಾರ ಸಮಸ್ಯೆ ಇತ್ಯಾದಿಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು.ವಂಡ್ಸೆ ಬೆಳ್ಳಾಲ ರಸ್ತೆ ತೀವ್ರ ಹದಗೆಟ್ಟಿದ್ದು ದುರಸ್ತಿಗೆ ಆಗ್ರಹ ವ್ಯಕ್ತವಾಯಿತು. ಈ ರಸ್ತೆಯ ಅಭಿವೃದ್ದಿಗೆ ಶಾಸಕರು ೪೦ಲಕ್ಷ ಇಡುವುದಾಗಿ ಹೇಳಿದ್ದು, ಈಗಾಗಲೇ ೧೫ಲಕ್ಷ ರೂಪಾಯಿ ವೆಚ್ಚದ ಕೆಲಸ ಆಗಿದೆ ಎಂದು ಸಭೆಗೆ ತಿಳಿಸಲಾಯಿತು.
ವಂಡ್ಸೆಯಲ್ಲಿ ಮೆಸ್ಕಾಂ ಸೆಕ್ಷನ್ ಕಛೇರಿ ಆಗಿದೆ. ಆದರೆ ಜೆ.ಇ ಇಲ್ಲ, ಸಿಬ್ಬಂದಿಗಳು ಇಲ್ಲ, ವಿದ್ಯುತ್ ಬಿಲ್ ಪಾವತಿಗೆ ಅವಕಾಶವಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತ ಪಡಿಸಿದರು. ಗ್ರಾಮದಲ್ಲಿ ಹೆಚ್ಚುತ್ತಿರುವ ಮಂಗಗಳ ಹಾವಳಿಯ ನಿಯಂತ್ರಣದ ಬಗ್ಗೆ ಚರ್ಚೆ ನಡೆಯಿತು.
ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯಕ್ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಾರದಾ ರುದ್ರಯ್ಯ ಆಚಾರ್ಯ, ತಾ.ಪಂ.ಸದಸ್ಯ ಉದಯ ಜಿ.ಪೂಜಾರಿ, ಗ್ರಾ.ಪಂ.ಸದಸ್ಯರಾದ ಉದಯ ಕೆ.ನಾಯ್ಕ, ಗುಂಡು ಪೂಜಾರಿ ಹರವರಿ, ಸಿಂಗಾರಿ ಪೂಜಾರಿ, ಲಕ್ಷ್ಮೀ, ಗಿರಿಜಾ, ಸಿಡಬ್ಲ್ಯೂಸಿ ಸಂಸ್ಥೆಯ ಶ್ರೀನಿವಾಸ ಗಾಣಿಗ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಕಾಶ್, ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ|ಬಾಬಣ್ಣ ಪೂಜಾರಿ, ಜಿ.ಪಂ.ಇಂಜಿನಿಯರಿಂಗ್ ವಿಭಾಗದ ಕಿರಿಯ ಇಂಜಿನಿಯರ್ ಕೇಶವ ಗೌಡ, ಗ್ರಾಮ ಲೆಕ್ಕಿಗರಾದ ಕಾಂತರಾಜ್, ಕೃಷಿ ಇಲಾಖೆಯ ರಘುರಾಮ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಬೇಬಿ, ಕೊಲ್ಲೂರು ಅರಕ್ಷಕ ಇಲಾಖೆಯ ಎಎಸ್.ಐ ವಿಜಯ್ ಅಮೀನ್, ಕಾರ್ಮಿಕ ಕಲ್ಯಾಣ ಇಲಾಖೆಯ ಅಧಿಕಾರಿ ಮಂಜುನಾಥ, ಮೆಸ್ಕಾಂನ ರಾಜೇಶ ಎಸ್., ಉಪ ವಲಯ ಅರಣ್ಯಾಧಿಕಾರಿ ನವೀನ್ ಡಿಸೋಜ, ಮೂರು ಶಾಲೆಯ ಮುಖ್ಯೋಪಾಧ್ಯಾಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಪಿಡಿಒ ಎಚ್.ವಿ.ಇಬ್ರಾಹೀಂಪುರ್ ವರದಿ ವಾಚಿಸಿದರು.