ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಗಂಗೊಳ್ಳಿ ಗ್ರಾಮದ ವಿನಾಯಕ ಸೋಮಿಲ್ ಸಮೀಪದ ನಿವಾಸಿ ಹರೀಶ ಜಿ.ಕೆ. (26) ಅವರು ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದು, ಅವರ ವೈದ್ಯಕೀಯ ಚಿಕಿತ್ಸೆಗೆ ಮಾನವೀಯ ನೆರವಿನ ಅಗತ್ಯವಿದೆ.
ಕುಟುಂಬದ ಆಧಾರಸ್ತಂಭವಾಗಿದ್ದ ಹರೀಶ ಜಿ.ಕೆ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಕಳೆದ ನಾಲ್ಕು ತಿಂಗಳ ಹಿಂದೆ ಇವರ ಎರಡೂ ಮೂತ್ರಪಿಂಡಗಳು ವೈಫಲ್ಯವಾಗಿದ್ದು ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಲಕ್ಷಾಂತರ ರೂ.ಗಳನ್ನು ಮೂತ್ರಪಿಂಡದ ಚಿಕಿತ್ಸೆಗಾಗಿ ಖರ್ಚು ಮಾಡಿರುವ ಇವರು ಮುಂದಿನ ಚಿಕಿತ್ಸೆಗಾಗಿ ಹಣ ಹೊಂದಿಸಲಾಗದೆ ಕಂಗಾಲಾಗಿದ್ದಾರೆ. ಮನೆಯಲ್ಲಿ ದುಡಿಯುವವರು ಬೇರೆ ಯಾರೂ ಇಲ್ಲವಾದ್ದರಿಂದ ಈ ಕುಟುಂಬ ಭಾರೀ ಅತಂತ್ರತೆಯಲ್ಲಿ ಸಿಲುಕಿದೆ.
ನೆರವಿಗೆ ಮನವಿ: ಕಳೆದ ನಾಲ್ಕು ತಿಂಗಳಿನಿಂದ ಮೂತ್ರಪಿಂಡಗಳ ವೈಫಲ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಹರೀಶ ಅವರಿಗೆ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡುವ ಅನಿವಾರ್ಯತೆ ಇದೆ. ಡಯಾಲಿಸಿದ್ ಹಾಗೂ ಔಷಧೋಪಚಾರಕ್ಕಾಗಿ ಪ್ರತಿವಾರ ಸುಮಾರು 10 ಸಾವಿರ ರೂ.ಗಳ ಅವಶ್ಯತೆ ಇದ್ದು ಇಷ್ಟೊಂದು ಹಣವನ್ನು ಹೊಂದಿಸಲು ಇವರ ಕುಟುಂಬ ಬಹಳ ಕಷ್ಟಪಡುತ್ತಿದೆ. ಮೂತ್ರಪಿಂಡಗಳ ಬದಲಾವಣೆ ಮಾಡಿ ಚಿಕಿತ್ಸೆ ನೀಡಿದರೆ ಅವರು ಚೇತರಿಸಿಕೊಳ್ಳುವ ಬಗ್ಗೆ ಅವರ ಕುಟುಂಬ ಆಶಾವಾದವನ್ನೇನೋ ಹೊಂದಿದೆ. ಆದರೆ ಅದಕ್ಕೆ ಅಗತ್ಯವಿರುವ ಲಕ್ಷಾಂತರ ರೂ. ಹಣವನ್ನು ಹೊಂದಿಸುವ ಶಕ್ತಿ ಈ ಕುಟುಂಬಕ್ಕೆ ಇಲ್ಲ.
ಹರೀಶ ಅವರಿಗೆ ಸಹಾಯ ಮಾಡಲಿಚ್ಛಿಸುವವರು ಅವರ ಸಿಂಡಿಕೇಟ್ ಬ್ಯಾಂಕ್ ಗಂಗೊಳ್ಳಿ ಶಾಖೆಯಲ್ಲಿರುವ ಉಳಿತಾಯ ಖಾತೆ ಸಂಖ್ಯೆ 012322000071669 (ಐಎಫ್ಎಸ್ಸಿ ಕೋಡ್ ಎಸ್ವೈಎನ್ಬಿ0000123)ಗೆ ಸಲ್ಲಿಸಬಹುದಾಗಿದೆ.
- ಹರೀಶ್ ಅವರ ಕುಟುಂಬಿಕರ ಸಂಪರ್ಕ: 9343911004 , 9535646429