ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳ ಜೊತೆಯಲ್ಲಿ ಹಾಸುಹೊಕ್ಕಾಗಿ ಹೆಣೆದುಕೊಂಡಿರುವ ಕನ್ನಡ ಭಾಷೆ ಇಂದು ಅಳಿವಿನಂಚಿನತ್ತ ಸಾಗುತ್ತಿದೆ. ಭಾಷೆಯ ಉಳಿಸುವಿಕೆಯಲ್ಲಿ ನಾವು ನಮ್ಮ ಮುಂದಿನ ಜನಾಂಗಕ್ಕೆ ಪ್ರೇರಣೆಯಾಗಬೇಕಿದೆ ಎಂದು ಸಾಹಿತಿ, ನ್ಯಾಯವಾದಿ ಎ.ಎಸ್.ಎನ್ ಹೆಬ್ಬಾರ್ ಅವರು ಹೇಳಿದರು.
ಅವರು ಇತ್ತಿಚಿಗೆ ಕುಂದಾಪುರದ ದಿನೇಶ್ ಐತಾಳರ ಮನೆಯಲ್ಲಿ ನಡೆದ ’ಮನೆಯಂಗಳದಲ್ಲಿ ಸಾಹಿತ್ಯ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆಯರು ಸಾಹಿತ್ಯಕೃಷಿಯಲ್ಲಿ ಅಲ್ಪತೃಪ್ತರಾಗದೇ ನಿರಂತರವಾಗಿ ತೊಡಗಿಸಿಕೊಳ್ಳಬೇಕು ಹಾಗೂ ಉತ್ತಮ ಗುಣಮಟ್ಟದ ಪ್ರಬುದ್ಧ ಸಾಹಿತ್ಯಕ್ಕೆ ಪ್ರಾಮುಖ್ಯತೆ ದೊರೆಯುವಂತಾಗಬೇಕು ಎಂದು ಆಶಿಸಿದರು.
ಈ ಸಂದರ್ಭ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಾಚಾರ್ ಅವರನ್ನು ಸನ್ಮಾನಿಸಲಾಯಿತು. ದಿನೇಶ್ ಐತಾಳ್ ಅವರು ಉಪಸ್ಥಿತರಿದ್ದರು. ಅಧ್ಯಾಪಕಿ ನಾಗಮ್ಮ, ಸುಪ್ರಸನ್ನ ನಕ್ಕತ್ತಾಯ, ಪ್ರಕಾಶ್ ಹೆಬ್ಬಾರ್, ಪೂರ್ಣಿಮಾ ಭಟ್, ಸುಮಿತ್ರಾ ಐತಾಳ್ ಕವನಗಳನ್ನು ವಾಚಿಸಿದರು. ಕಸಾಪ ಕಾರ್ಯದರ್ಶಿ ಡಾ. ಕಿಶೋರ್ಕುಮಾರ್ ಶೆಟ್ಟಿ ಸ್ವಾಗತಿಸಿದರು.