ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೆಸಿಐ ಉಪ್ಪುoದ, ಡಾ.ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ, ರಾಷ್ಟ್ರೀಯ ಸೇವಾ ಯೋಜನೆ ವಿಭಾಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಒಂದು ದಿನದ ಪ್ರಥಮ ಚಿಕಿತ್ಸಾ ಕೌಶಲ್ಯದ ಹಾಗೂ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಗಾರ ಡಾ.ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಉಮೇಶ್ ಶೆಟ್ಟಿ ಮಾತನಾಡಿ, ಪ್ರಥಮ ಚಿಕಿತ್ಸಾ ಮಾಹಿತಿಯಿಂದ ಯುವಜನರು ತಮ್ಮನ್ನು ಮತ್ತು ಇತರರನ್ನು ಅಪಾಯದಿಂದ ಪಾರು ಮಾಡಬಲ್ಲರು. ವಿದ್ಯಾರ್ಥಿಗಳನ್ನು ಕೌಶಲ್ಯ ಭರಿತರನ್ನಾಗಿ ಮಾಡುವ ಇಂತಹ ಕಾರ್ಯ ಶ್ಲಾಘನೀಯ ಎಂದರು.
ರೆಡ್ ಕ್ರಾಸ್ ಸಂಸ್ಥೆ ದಕ್ಷಿಣಕನ್ನಡ ಜಿಲ್ಲೆ ಇಲ್ಲಿಯ ತರಬೇತುದಾರರಾದ ಅಶ್ವಿನ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ನಿದರ್ಶನಗಳೊಂದಿಗೆ ಪ್ರಥಮ ಚಿಕಿತ್ಸಾ ಕೌಶಲ್ಯ ಹಾಗೂ ವಿಪತ್ತು ನಿರ್ವಹಣೆಯ ತರಬೇತಿ ನೀಡಿದರು. ಜೆಸಿಐ ಉಪ್ಪುoದದ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಸಭಾಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ, ಜೆಸಿ ಸಂಸ್ಥೆಯ ತರಬೇತುದಾರರಾದ ಸುಬ್ರಮಣ್ಯ ಜಿ ಉಪ್ಪುಂದ, ಸೇವಾ ಯೋಜನೆಯ ಸಂಯೋಜಕರಾದ ದೀಪ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು.
ಕಾರ್ಯದರ್ಶಿ ಪುರಂದರ ಉಪ್ಪುಂದ, ಜೇಸಿರೇಟ್ ಅಧ್ಯಕ್ಷೆ ರೇಖಾ, ಜೆಜೆಸಿ ಅಧ್ಯಕ್ಷರಾದ ನಿಶಾ ಸಂತೋಷ ಶೆಟ್ಟಿ, ಗೌರೀಶ್ ಹುದಾರ್, ಸಂತೋಷ್ ನಾಗೂರು ಉಪಸ್ಥಿತರಿದ್ದರು.
ಎನ್.ಎಸ್.ಎಸ್ ಸಂಯೋಜಕರುಗಳಾದ ಚೇತನ್ ಶೆಟ್ಟಿ ಸ್ವಾಗತಿಸಿದರು. ದೀಪಾ ಪೂಜಾರಿ ವಂದನಾರ್ಪಣೆಗೈದರು. ವಿದ್ಯಾರ್ಥಿಗಳಾದ ಪವಿತ್ರ ಪೈ ಪ್ರಾರ್ಥಿಸಿದರು, ಲಕ್ಷೀ ಕಾಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ 200 ವಿದ್ಯಾರ್ಥಿಗಳು ಈ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದರು.
















