Kundapra.com ಕುಂದಾಪ್ರ ಡಾಟ್ ಕಾಂ

ಮೌಲ್ಯಗಳ ಅನುಸರಣೆಗೆ ಪ್ರಾಶಸ್ತ್ಯ ನೀಡುವುದು ಅಗತ್ಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ಜೀವನ ಮೌಲ್ಯಗಳ ಕುರಿತು ಕೇಳಿದರೆ ಮತ್ತು ಅವುಗಳ ಅರಿವು ಗಳಿಸಿಕೊಂಡರೆ ಅದರಿಂದ ಯಾವ ಪ್ರಯೋಜನವೂ ಆಗದು. ಮೌಲ್ಯಗಳಿಗೆ ಮತ್ತು ಬದುಕಿಗೆ ಅರ್ಥ ಬರುವುದು ವ್ಯಕ್ತಿಗಳು ಅವುಗಳನ್ನು ನಡೆ, ನುಡಿಗಳಲ್ಲಿ ಅನುಸರಿಸಿದಾಗ ಮಾತ್ರ ಎಂದು ಕುಂದಾಪುರ ಹೋಲಿ ರೋಸರಿ ಚರ್ಚ್‌ನ ಸಹಾಯಕ ಧರ್ಮಗುರು ಫಾ. ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಹೇಳಿದರು.

ನಾವುಂದ ರಿಚರ್ಡ್ ಆಲ್ಮೇಡಾ ಮೆಮೋರಿಯಲ್ ಕಾಲೇಜು ಮರವಂತೆಯ ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾಗೃಗೃಹದಲ್ಲಿ ಶನಿವಾರ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಜೀವನ ಮೌಲ್ಯ ಶಿಕ್ಷಣ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ಸಂಚಾಲಕ ಸಿಲ್ವೆಸ್ಟರ್ ಆಲ್ಮೇಡಾ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ರೇಷ್ಮಾ ಎಸ್. ಶೆಟ್ಟಿ ಸ್ವಾಗತಿಸಿದರು. ಪ್ರಾಂಶುಪಾಲ ಎಸ್. ನಾರಾಯಣ ರಾವ್ ಪ್ರಾಸ್ತಾವಿಕ ನುಡಿಗಳನ್ನಾಡಿ ಶಿಬಿರದ ಉದ್ದೇಶ ಮತ್ತು ಅಗತ್ಯವನ್ನು ವಿವರಿಸಿದರು. ನಿರೂಪಿಸಿದ ರೆನಿಟಾ ವಂದಿಸಿದರು.

ಶಿಬಿರದಲ್ಲಿ ಫಾ. ಜೆರಾಲ್ಡ್ ಸಂದೀಪ್ ಡಿಮೆಲ್ಲೊ ’ಪ್ರಸ್ತುತ ಜೀವನ ಮೌಲ್ಯಗಳು’ ಕುರಿತು, ಶಿವಮೊಗ್ಗದ ಕಸ್ತೂರ ಬಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನಟೇಶ್ ’ಮಂಕುತಿಮ್ಮನ ಕಗ್ಗ ಮತ್ತು ಜೀವನ ಮೌಲ್ಯಗಳು’ ಬಗ್ಗೆ ಮತ್ತು ಕಟೀಲು ದುರ್ಗಾಪರಮೇಶ್ವರಿ ಕಾಲೇಜಿನ ಪ್ರಾಂಶುಪಾಲ ಕೆ. ಬಾಲಕೃಷ್ಣ ಶೆಟ್ಟಿ ’ಜೀವನೋತ್ಸಾಹ ಮತ್ತು ಜೀವನ ಮೌಲ್ಯಗಳು’ ವಿಚಾರವಾಗಿ ವಿಷಯ ಮಂಡಿಸಿದರು. ವಿದ್ಯಾರ್ಥಿಗಳು ಭಾಷಣಕಾರರೊಂದಿಗೆ ಸಂವಾದ ನಡೆಸಿದರು. ಸಂಜೆ ಸಿಲ್ವೆಸ್ಟರ್ ಆಲ್ಮೇಡಾ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಿತು.

Exit mobile version