Kundapra.com ಕುಂದಾಪ್ರ ಡಾಟ್ ಕಾಂ

ಭಾರತೀಯ ಸಮಾಜದಲ್ಲಿ ಮಹಿಳೆಯರ ಪ್ರಾಮುಖ್ಯತೆ, ರಾಷ್ಟ್ರ ನಿರ್ಮಾಣದಲ್ಲಿ ಅವರ ಪಾತ್ರ: ಉಪನ್ಯಾಸ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಭಾರತೀಯ ಸಮಾಜದಲ್ಲಿ ಮಹಿಳೆಯರ ಪ್ರಾಮುಖ್ಯತೆ, ರಾಷ್ಟ್ರ ನಿರ್ಮಾಣ ಹಾಗೂ ಪ್ರಗತಿಯಲ್ಲಿ ಅವರ ಪಾತ್ರ ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಂಡಾರ್ಕಾರ್ಸ್ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ರೇಖಾ ಬನ್ನಾಡಿ ಮಾತನಾಡಿ, ಭಾರತೀಯ ಸಮಾಜದಲ್ಲಿ ಮಹಿಳೆಯರು ಅನಾದಿ ಕಾಲದಿಂದಲೂ ಒಂದಲ್ಲ ಒಂದು ರೀತಿಯ ಶೋಷಣೆ, ದೌರ್ಜನ್ಯ, ದಬ್ಬಾಳಿಕೆಗಳಿಗೆ ಒಳಗಾಗುತ್ತಲೇ ಇದ್ದಾರೆ. ಮಾತ್ರವಲ್ಲದೇ ರಾಜಕೀಯ ಆರ್ಥಿಕ ಕ್ಷೇತ್ರಗಳಲ್ಲಿಯೂ ಮಹಿಳೆಯರ ಪಾಲ್ಗೊಳ್ಳುವಿಕೆ ಗಣನೀಯವಾಗಿ ಏರಿಕೆಯಾಗಿಲ್ಲ. ಇಂದು ಶಿಕ್ಷಣವು ಒಂದು ಪ್ರಬಲ ಸಾಧನವಾಗಿ ಪ್ರವಹಿಸುತ್ತಿರುವ ಈ ಹೊತ್ತಿನಲ್ಲಿ ಮಹಿಳೆಯರ ಸ್ಥಿತಿಗತಿಯಲ್ಲಿ ಕೊಂಚ ಪ್ರಗತಿ ಕಂಡುಬಂದಿದೆ. ಆದರೂ ಅದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲಾಗದು. ರಾಮಾಯಣ ಮಹಾಭಾರತದಲ್ಲಿ ಬರುವ ಸೀತೆ ಮಂಡೊದರಿಯರಂತಹ ಪತಿವ್ರತೆಯರಿಂದ ಆರಂಭಗೊಂಡು ಇಂದಿನ ಆಧುನಿಕ ಸ್ತ್ರೀಯರವರೆಗೂ ಪತಿವ್ರತೆಯ ವಿಚಾರದಲ್ಲಿ ಸಾಕಷ್ಟು ಭಿನ್ನ ಅಭಿಪ್ರಾಯಗಳಿವೆ ಎಂದು ಹೇಳಿದರು.

ಸೀತೆ ಮಂಡೊದರಿಯರಂತಹ ಪತಿವ್ರತೆಯರ ಪಾವಿತ್ರ್ಯತೆಯನ್ನು ಒಪ್ಪಿಕೊಳ್ಳುವ ನಾವು ಆಧುನಿಕ ಸ್ತ್ರಿಯರ ಪಾವಿತ್ರ್ಯತೆಯ ವಿಚಾರದಲ್ಲಿ ಹೇಗೆ ನಡೆದುಕೊಳ್ಳುತ್ತಿದ್ದೇವೆ ಎಂಬುದು ಚರ್ಚೆಗೆ ಗ್ರಾಸವಾದ ವಿಚಾರವಾಗಿದೆ. ಕಿತ್ತೂರು ರಾಣಿಚೆನ್ನಮ್ಮ ಒನಕೆ ಓಬಬ್ಬ ಮುಂತಾದ ಐತಿಹಾಸಿಕ ವೀರವನಿತೆಯರನ್ನು ಪಟ್ಟಭದ್ರ ಹಿತಾಸಕ್ತಿಯ ನೆಲೆಯಲ್ಲಿ ಜನಪ್ರಿಯಗೊಳಿಸದೇ, ಸಾವಿತ್ರಿಬಾಯಿ, ಉಮಾಬಾಯಿಯಂತಹ ಮಹಿಳೆಯರ ಹೆಸರು ಕೂಡ ಮುನ್ನೆಲೆಗೆ ಬರುವಂತೆ ಮಾಡಬೇಕು. ಭಾರತೀಯ ಸಮಾಜದಲ್ಲಿ ಮಹಿಳೆಯರ ಪಾತ್ರವನ್ನು ಸಾರಬೇಕು. ಮಾತ್ರವಲ್ಲದೇ ಅತ್ಯಾಚಾರ ಪ್ರಕರಣಗಳಂತಹ ಭೀಕರ ಘಟನೆಗಳನ್ನು ಸದಾ ಗಮನದಲ್ಲಿಟ್ಟುಕೊಂಡು ಸಮಾಜವನ್ನು ಜಾಗ್ರತಗೊಳಿಸುವ ಕೆಲಸ ಆಗಬೇಕು. ಜೊತೆಗೆ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಗುರುತಿಸಿಕೊಳ್ಳುವ ನೆಲೆಯಲ್ಲಿ ಯೋಚಿಸದೇ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಅರುಣಕುಮಾರ್ ಎ. ಎಸ್ ಮತ್ತು ರಾಮಚಂದ್ರ ಆಚಾರಿ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕಿ ವಿದ್ಯಾರ್ಥಿನಿ ಶಾಂಭವಿ ಕಾರ್ಯಕ್ರಮವನ್ನು ನಿರ್ವಹಿಸಿದರು. ವಿದ್ಯಾರ್ಥಿನಿ ಸ್ವಾತಿ ಭಟ್ ಸ್ವಾಗತಿಸಿದರು. ಸಿಂಚನಾ ವಂದಿಸಿದರು.

Exit mobile version