ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಟದ ಪಂಚವರ್ಣ ಸಂಘಟನೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಅವರ ಪರಿಸರ ಕಾಳಜಿ ಆಂದೋಲನ ಮನೆ ಮನಗಳನ್ನು ತಲುಪುತ್ತಿದೆ ಇದು ಅಭಿನಂದನೀಯ ಎಂದು ಶಿಕ್ಷಣ ತಜ್ಞ, ಯಕ್ಷಗುರು ಎಂ.ಎನ್. ಮಧ್ಯಸ್ಥ ಅಭಿಪ್ರಾಯಪಟ್ಟರು.
ಅವರು ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ, ಜೆಸಿಐ ಸಿನಿಯರ್ ಲಿಜನ್ ಕೋಟ ಇವರ ಸಹಯೋಗದೊಂದಿಗೆ ಹಾಲು ಉತ್ಪಾದಕರ ಸಹಕಾರಿ ಸಂಘ ಮಣೂರು ಇವರ ಸಂಯೋಜನೆಯೊಂದಿಗೆ ಗೀತಾನಂದ ಫೌಂಡೇಶನ್ ಮಣೂರು, ಸಮುದ್ಯತಾ ಗ್ರೂಪ್ಸ್ ಕೋಟ, ಅನ್ನಪೂರ್ಣ ನರ್ಸರಿ ಪೇತ್ರಿ ಕೊಡ ಮಾಡಿದ ಗಿಡಗಳನ್ನು ನಡುವ 256ನೇ ಭಾನುವಾರದ ಪರಿಸರಸ್ನೇಹಿ ಹಸಿರು ಜೀವ ಅಭಿಯಾನ ಕಾರ್ಯಕ್ರಮದಲ್ಲಿ ಗಿಡ ವಿತರಿಸಿ, ಮಾತನಾಡಿದರು.
ಸಂಘ ಸಂಸ್ಥೆಗಳು ಸಮಾಜಮುಖಿ ಚಿಂತನೆಗಳೊಂದಿಗೆ ಕಾರ್ಯನಿರ್ವಹಿಸುವುದು ಸಹಜ ಆದರೆ ಪಂಚವರ್ಣ ಸಂಘಟನೆ ಪರಿಸರಕ್ಕಾಗಿ ಪ್ರತಿ ಭಾನುವಾರ ತಮ್ಮನ್ನು ಅರ್ಪಿಸಿಕೊಂಡಿದೆ. ಕಳೆದ ಐದಾರು ವರ್ಷಗಳಿಂದ ಕೋಟ ಸುತ್ತಮುತ್ತಲಿನ ಪರಿಸರದಲ್ಲಿ ಹಸಿರು ಕ್ರಾಂತಿ ಸೃಷ್ಠಿಸಿದೆ. ಇಂತಹ ಕಾರ್ಯವೈಖರಿ ಹೊಸ ಇತಿಹಾಸವನ್ನು ನಿರ್ಮಾಣಮಾಡಲಿದೆ ಎಂದು ಹಸಿರು ಅಭಿಯಾನ ಹಾಗೂ ಪ್ಲಾಸ್ಟಿಕ್ ಮುಕ್ತ ಪರಿಸರದ ಯೋಜನೆಯನ್ನು ಕೊಂಡಾಡಿದರು.
ಇದೇ ವೇಳೆ ಸ್ಥಳೀಯ ಗ್ರಾಮಸ್ಥರಿಗೆ ವಿವಿಧ ತರಹದ ತಳಿಗಳ ಗಿಡಗಳನ್ನು ವಿತರಿಸಲಾಯಿತು.ಅಲ್ಲದೆ ಕೋಟ, ಮಣೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 50ಕ್ಕೂ ಅಶೋಕ ಗಿಡವನ್ನು ನಾಟಿಮಾಡಲಾಯಿತು.
ಈ ಸಂದರ್ಭದಲ್ಲಿ ಮಣೂರು ಮಹಾಲಿಂಗೇಶ್ವರ ದೇಗುಲದ ಅಧ್ಯಕ್ಷ ಸತೀಶ್ ಹೆಚ್. ಕುಂದರ್, ಉದ್ಯಮಿ ತೆಕ್ಕಟ್ಟೆ ಅನಂತ ನಾಯಕ್, ಕೋಟ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ ಅಧ್ಯಕ್ಷ ಎಂ. ಸುಬ್ರಾಯ ಆಚಾರ್, ಕೋಟ ಕಾಶೀಮಠದ ವೇ.ಮೂ ದೇವದತ್ತ ಭಟ್, ಟ್ರಾವೆಲಿಂಕ್ಸ್ ಫ್ರೆಂಡ್ಸ್ ಗೌರವಾಧ್ಯಕ್ಷ ನಾಗರಾಜ್ ಅಮೀನ್, ಹಿರಿಯ ಕೃಷಿಕರಾದ ರವಿ ಮಯ್ಯ, ರವೀಂದ್ರ ಶೆಟ್ಟಿ ದ್ಯಾವಸ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಸಿಇಒ ಹರ್ಷ ಪೂಜಾರಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿ ನಿರೂಪಿಸಿದರು. ಪಂಚವರ್ಣದ ಸದಸ್ಯ ಮಹೇಶ್ ಬೆಳಗಾವಿ ಸ್ವಾಗತಿಸಿ, ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ವಂದಿಸಿದರು.















