ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಶ್ರೀ ಪಟ್ಟಾಭಿರಾಮಚಂದ್ರ ದೇಗುಲದಲ್ಲಿ ಶ್ರೀ ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಚಾತುರ್ಮಾಸ ವ್ರತವನ್ನು ಆಚರಿಸಲು ಸಕಲ ಸಿದ್ಧತೆ ನಡೆದಿದೆ.
ಜು. 5 ರಂದು ಶ್ರೀ ಕಾಶಿ ಮಠಾಧೀಶರು ಕೋಟೇಶ್ವರಕ್ಕೆ ಆಗಮಿಸಲಿದ್ದು, ಜು. 15 ರಂದು ಚಾತುರ್ಮಾಸ ವ್ರತ ಸ್ವೀಕರಿಸುವರು.
100 ದಿನಗಳ ಅಖಂಡ ಭಜನೆ:
ಸತತ 85 ವರ್ಷಗಳಿಂದ ಪ್ರತಿದಿನ ಭಜನೆ ಹಾಗೂ ವಸಂತ ಪೂಜೆ ಇಲ್ಲಿ ನಡೆಯುತ್ತಿದೆ. ಈ ಬಾರಿ 100 ದಿನಗಳ ಕಾಲ ಅಖಂಡ ಭಜನೆ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದಲ್ಲದೇ ದೇಶ ವಿದೇಶದ ಗೌಡ ಸಾರಸ್ವತ ಸಮಾಜ ಬಾಂಧವರ ಭಜನ ಮಂಡಳಿಗಳು ಶತ ದಿವಸ ಅಖಂಡ ಭಜನೆಯಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸುವರು.
ಶತನಮನ, ಶತಸ್ಮರಣ:
ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿ ಅವರ ಜನ್ಮ ಶತಾಬ್ಧ ಮಹೋತ್ಸವದ ಅಂಗವಾಗಿ ನೂರು ಮಂದಿ ಕಲಾವಿದರ ಶತನಮನ, ಶತಸ್ಮರಣ ಸಂಗೀತ ಕಾರ್ಯಕ್ರಮ ಅ. 18 ರಂದು ನಡೆಯಲಿದೆ.
4 ತಿಂಗಳ ಅವಧಿಯಲ್ಲಿ ಕೋಟೆ ರಾಮನಾಮ ತಾರಕ ಮಂತ್ರ ಹವನ, ಚತುರ್ವಿಂಶತಿ ಲಕ್ಷ ಗಾಯತ್ರಿ ಹವನ, ಬೃಹತಿ ಸಹಸ್ರ ಹವನ, ಮಹಾಭಾರತ ಪ್ರವಚನ, ಭಾಗವತ ಪಾರಾಯಣ, ಲಕ್ಷ್ಮೀನಾರಾಯಣ ಹೃದಯ ಹವನ, ಶ್ರೀ ಸೀತಾ ಕಲ್ಯಾಣ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ವಾಹನ ನಿಲುಗಡೆಗೆ ಮೂರು ಕಡೆ ವಿಶಾಲ ವ್ಯವಸ್ಥೆ ಮಾಡಲಾಗಿದ್ದು, ಸಮಾಜ ಬಾಂಧವರು ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಾಳ್ಮೆಯ ಸಂದರ್ಭದಲ್ಲಿ ಕೋಟೇಶ್ವರದಲ್ಲಿ ನಡೆಯುತ್ತಿರುವ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ ವ್ರತ ಯಶಸ್ವಿಗೊಳಿಸಲು ಸಹಕರಿಸುವಂತೆ ಶ್ರೀ ಪಟ್ಟಾಭಿ ರಾಮಚಂದ್ರ ದೇಗುಲದ ಆಡಳಿತ ಮೊಕೇಸರ ಶ್ರೀ ಚಾತುರ್ಮಾಸ ವ್ರತ ಸಮಿತಿ ಅಧ್ಯಕ್ಷ ಕೆ. ದಿನೇಶ ಜಿ. ಕಾಮತ್ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.















