ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾರ್ಕಳ ತಾಲೂಕು ಇಪ್ಪತ್ತೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಜೆಕಾರು ಪದ್ಮಗೋಪಾಲ ಎಜುಕೇಶನ್ ಟ್ರಸ್ಟ್ ಗಣಿತ ನಗರ ಕುಕ್ಕುಂದೂರು ಇದರ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ನೀಡಲಾಗುವ ದಿ. ಪ್ರೊ. ಎಂ. ರಾಮಚಂದ್ರ ಸ್ಮರಣೆಯ ಉಡುಪಿ ಜಿಲ್ಲಾ ವಿದ್ಯಾರ್ಥಿ ಯುವ ಸಾಹಿತ್ಯ ರತ್ನ ಪ್ರಶಸ್ತಿಗೆ ಕುಂದಾಪುರ ತಾಲೂಕಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ರಿಷಿಕಾ ದೇವಾಡಿಗ ಬೈಂದೂರು ಆಯ್ಕೆಯಾಗಿದ್ದಾರೆ.
ರಿಷಿಕಾ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ 2025ರ ಸರ್ವಾಧ್ಯಕ್ಷೆಯಾಗಿದ್ದು, ಆ ಸಂದರ್ಭ ಅವರ ‘ಮೊದಲ ಹೆಜ್ಜೆ’ ಕಥಾ ಸಂಕಲನ ಪ್ರಕಟಗೊಂಡಿರುತ್ತದೆ. ಅವರು ರಾಜ್ಯ ಮಟ್ಟದ ಭಾಷಣ ಸ್ಪರ್ಧೆ, ದೇಶಭಕ್ತಿ ಗೀತೆ ಸ್ಪರ್ಧೆ, ಏಕಪಾತ್ರಾಭಿನಯ ಸಾಹಿತ್ಯ ಕೃತಿ ವಿಮರ್ಶೆ ಮೊದಲಾದವುಗಳಲ್ಲಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
ಅವರು ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಉಪ ಪ್ರಾಂಶುಪಾಲ ರಾಮ ದೇವಾಡಿಗ ಮತ್ತು ಶಿಕ್ಷಕಿ ರೂಪ ದಂಪತಿಯ ಪುತ್ರಿ. ಯುವ ಸಾಹಿತ್ಯ ರತ್ನ ಪಶಸ್ತಿಯು ಹತ್ತು ಸಾವಿರ ರೂಪಾಯಿ ನಗದು ಹಾಗೂ ಶಾಶ್ವತ ಫಲಕವನ್ನು ಒಳಗೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ಪ್ರಕಟನೆಯಲ್ಲಿ ತಿಳಿಸಿದೆ.










