ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಿದ್ಧಾಪುರ ಏತ ನೀರಾವರಿ ಯೋಜನೆಯೂ ಸೇರಿ ಜನರಿಗೆ ಅನುಕೂಲವಾಗುವ ಹಾಗೂ ಅಗತ್ಯವಾಗಿರುವ ಯಾವುದೇ ಯೋಜನೆಗಳಿಗೂ ನಾನು ವಿರೋಧಿಯಲ್ಲ. ಆದರೆ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೊದಲು ಅದರಿಂದ ಆಗುವ ಉಪಯೋಗ ಹಾಗೂ ಭವಿಷ್ಯದ ತೊಂದರೆ ಬಗ್ಗೆ ತಜ್ಞರಿಂದ ತಾಂತ್ರಿಕ ಸಲಹೆ ಪಡೆದುಕೊಳ್ಳುವುದು ಒಳಿತು. ಆ ನೆಲೆಯಲ್ಲಿ ನನ್ನ ಜವಾಬ್ದಾರಿ ಅರಿತು ನಾನು ಪತ್ರ ಬರೆದಿದ್ದೆ. ಇದರಲ್ಲೂ ಅನಗತ್ಯವಾಗಿ ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಅವರು ಕುಂದಾಪುರದ ಖಾಸಗಿ ಹೋಟೆಲ್ನಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ವಿವಿಧ ಗ್ರಾಮಗಳಿಗೆ ನೀರು ನೀಡುವ ಸಿದ್ದಾಪುರ ಏತ ನೀರಾವರಿ ಯೋಜನೆಯ ಮೂಲ ಉದ್ದೇಶ ಯಾವುದೇ ಕಾರಣಕ್ಕೂ ಬದಲಾಗಬಾರದು. ಆದರೆ ಯೋಜನೆಯ ಪ್ರಾರಂಭವನ್ನು ಅಣೆಕಟ್ಟಿನ ಮೇಲ್ಭಾಗದ ಬದಲು, ಕನಿಷ್ಠ 500-600ಮೀಟರ್ ಕೆಳಭಾಗದಲ್ಲಿ ನಿರ್ಮಾಣ ಮಾಡಬೇಕು ಎನ್ನುವುದು ಮಾತ್ರ ನಮ್ಮ ಆಗ್ರಹ. ಈ ಬೇಡಿಕೆಯ ಆಗು ಹೋಗುಗಳ ಕುರಿತು ಪರಿಶೀಲನೆ ಮಾಡಲು ಸರ್ಕಾರ ತಜ್ಞರಿಂದ ಅಭಿಪ್ರಾಯ ಪಡೆದು ಮುಂದುವರೆಯಲಿ ಎಂದರು. 2023 ರಲ್ಲಿ ಇದೇ ವಿಚಾರದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ಆಗ ಅದು ವಿವಾದವಾಗಿರಲಿಲ್ಲ. ಆಗ ವಿರೋಧ ಮಾಡುವವರು ಆವಾಗ ನಮ್ಮ ಪಾರ್ಟಿಯಲ್ಲೇ ಇದ್ದಿದ್ದರು ಎಂದು ಕಿಡಿಕಾರಿದರು.

ಹೊಳೆಯಲ್ಲಿ ಇರುವ ಲಿಂಗಕ್ಕೆ ನೀರಿನ ಕೊರತೆಯಾಗುತ್ತದೆ ಎಂದರೆ ಗೋಪಾಲ ಪೂಜಾರಿ ಅವರನ್ನು ತಪ್ಪು. ಒಂದು ವೇಳೆ ಯೋಜನೆ ಜಾರಿಯಾಗಿ ಲಿಂಗಕ್ಕೆ ನೀರಿನ ತೊಂದರೆಯಾದರೆ ಇದು ಕಾಂಗ್ರೆಸ್ ಸರ್ಕಾರ ಮಾಡಿದ ಹುನ್ನಾರ ಎನ್ನುವ ಆರೋಪ ಮಾಡುವವರು ಇವರೆ. ಇಲ್ಲಿ ನಡೆಯುವ ಕಾಮಗಾರಿ ಟರ್ನ್ ಕೀ ಮಾದರಿಯದು ಎನ್ನುವ ಮಾಹಿತಿ ಇದೆ. ಹಾಗಾಗಿ ಕಾಮಗಾರಿ ಸ್ಥಳ ಬದಲಾವಣೆ ಮಾಡಲು ಡಿಪಿಆರ್, ಹೊಸ ಟೆಂಡರ್ ಪ್ರಕ್ರಿಯೆ ಬೇಕಾಗೋದಿಲ್ಲ ಎನ್ನುವ ಅಭಿಪ್ರಾಯ ಇದೆ. ಇಲಾಖಾ ಅಧಿಕಾರಿಗಳು ಹಾಗೂ ಗುತ್ತಿಗೆದಾರ ನಡುವೆ ಸಮನ್ವಯ ಸಾಧಿಸಿ, ತಾಂತ್ರಿಕ ಅನುಮೋದನೆ ಪಡೆದುಕೊಂಡರೆ ಸಾಕು ಎನ್ನುವ ಅಭಿಪ್ರಾಯಗಳಿದ್ದು, ಬದಲಾವಣೆ ಪ್ರಕ್ರಿಯೆಗಳನ್ನು ತ್ವರಿತವಾಗಿ ಮುಗಿಸುವ ಕುರಿತು ನಿಗಮದ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಆಗತ್ಯವಾದರೆ ಮಾನ್ಯ ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ.
ನಾನು ಶಾಸಕನಾಗಿದ್ದಾಗಲೂ ಹೊಸಂಗಡಿ, ಸಿದ್ಧಾಪುರ, ಆಜಿ, ಉಳ್ಳೂರು -74, ಬಾಂಡ್ಯ ಮುಂತಾದ ಭಾಗಗಳಿಗೆ ವಾರಾಹಿ ನೀರು ನೀಡಲು ಯೋಜನೆ ರೂಪಿಸುವಂತೆ ಹೇಳಿದ್ದೆ. ಬೈಂದೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದ ಜನಪ್ರತಿನಿಧಿಗಳು ಈ ಯೋಜನೆಗೆ ಪೂರಕವಾಗಿಯೇ ಕೆಲಸ ಮಾಡಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರದ ಬೃಹತ್ ನೀರಾವರಿ ಯೋಜನೆಯ ಲಾಭ ಕ್ಷೇತ್ರದ ಎಲ್ಲಾ ಜನರಿಗೂ ದೊರಕಬೇಕು ಎನ್ನುವುದೇ ನಮ್ಮೆಲ್ಲರ ಒತ್ತಾಸೆ. ಇದರಲ್ಲಿ ಯಾವುದೇ ರಾಜಕೀಯೂ ಇಲ್ಲ. ಆಲೂರಿನ ಗುಂಡೂರು, ಸೌಕೂರು ಯೋಜನೆಗಳನ್ನು ಈ ಸದುದ್ದೇಶದಿಂದಲೇ ಪ್ರಾರಂಭಿಸಲಾಗಿತ್ತು. ವಾರಾಹಿ ನೀರನ್ನೇ ಬಳಸಿಕೊಂಡು ಜಲಜೀವನ್ ಯೋಜನೆ ಮೂಲಕ ಕ್ಷೇತ್ರದ ಜನರಿಗೆ ನೀರು ನೀಡುವ ಯೋಜನೆಗಳು ರೂಪಿತವಾಗಿದೆ ಎಂದರು.
ಅವಿಭಜಿತ ಕುಂದಾಪುರ ತಾಲ್ಲೂಕು ಹಾಗೂ ಬ್ರಹ್ಮಾವರ ಭಾಗದ ಜನರಿಗೆ ಕೃಷಿ ಹಾಗೂ ಕುಡಿಯುವ ನೀರಿನ ಅವಶ್ಯಕತೆಗಾಗಿ ರೂಪಗೊಂಡಿದ್ದ ವಾರಾಹಿ ಯೋಜನೆ ಇಂದು ತನ್ನ ಮೂಲ ಉದ್ದೇಶವನ್ನು ಬಿಟ್ಟು ಇತರ ಉಪ ಯೋಜನೆಗಳ ಕಡೆಗೆ ಹೆಚ್ಚು ಆಸಕ್ತಿ ತೋರಿಸುತ್ತಿರುವುದು ಸರಿಯಲ್ಲ. ಯೋಜನೆಯ ಪ್ರಾರಂಭದಲ್ಲಿ ಹೇಳಿರುವಂತೆ 18 ಸಾವಿರ ಹೆಕ್ಟೇರ್ ಕೃಷಿ ಭೂಮಿಗಳಿಗೆ ನೀರೂಣಿಸುವ ಕೆಲಸ ಆದ್ಯತೆಯ ನೆಲೆಯಲ್ಲಿ ಆಗಬೇಕು. ಪ್ರಸ್ತುತ ನಡೆಯುತ್ತಿರುವ ಎಡದಂಡೆ ಯೋಜನೆಯನ್ನು ಶೀಘ್ರವಾಗಿ ಮುಕ್ತಾಯ ಮಾಡಿ ಜನರಿಗೆ ನೀರು ನೀಡುವ ಕೆಲಸವನ್ನು ನಿಗಮದ ಅಧಿಕಾರಿಗಳು ಮಾಡಬೇಕು ಎಂದರು.
ಸಿದ್ಧಾಪುರ ಏತ ನೀರಾವರಿ ಯೋಜನೆಯ ಕಾಮಗಾರಿಗಳು ಆದಷ್ಟು ಶೀಘ್ರದಲ್ಲಿ ಮುಗಿದು ಜನರ ನೀರಿನ ಅವಶ್ಯಕತೆ ಪರಿಹಾರವಾಗಬೇಕು ಎನ್ನುವುದು ನನ್ನ ಅಭಿಪ್ರಾಯ. ಆದರೆ ಈ ಯೋಜನೆಯನ್ನು ಯಥಾರೀತಿಯಲ್ಲಿ ಪ್ರಾರಂಭ ಮಾಡುವುದರಿಂದ ಭವಿಷ್ಯದಲ್ಲಿ ಒಂದಷ್ಟು ತಾಂತ್ರಿಕ ಅಡಚಣೆಗಳು ಉಂಟಾಗಬಹುದು ಎನ್ನುವ ಅನುಭವಿಗಳ ಅಭಿಪ್ರಾಯ ಇರೋದರಿಂದ, 2023 ರಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದು ಇಲ್ಲಿನ ಪ್ರಾಸ್ತಾವಿಕ ಅಂಶಗಳನ್ನು ಗಮನಕ್ಕೆ ತಂದಿದ್ದೇನೆ. ಪ್ರಸ್ತುತ ಎಡದಂಡೆ ಕಾಲುವೆಗೆ ನೀರು ಹರಿಯುವ ಡ್ಯಾಂ ನ ಪಕ್ಕದಲ್ಲಿ ಏತ ನೀರಾವರಿಯ ಪಂಪ್ ಹೌಸ್ ನಿರ್ಮಾಣ ಮಾಡುವ ಯೋಚನೆ ಇದೆ. ಇದರಿಂದ ಸಮತಟ್ಟಾಗಿ ಮಂದಗತಿಯಲ್ಲಿ ಹರಿಯುವ ಕಾಲುವೆ ನೀರು ವಾಪಾಸು ಹಿಂದಕ್ಕೆ ಸೆಳೆಯುವ ಅಪಾಯವೂ ಇದೆ. ರಿಸರ್ವ್ವಯರ್ನಲ್ಲಿ ಈಗಾಗಲೇ 15-20ಮೀಟರ್ ಹೂಳು ತುಂಬಿಕೊಂಡಿರುವುದರಿಂದ ಇಲ್ಲಿ ನೀರಿನ ಧಾರಣ ಸಾಮರ್ಥ್ಯವೂ ಸಹಜವಾಗಿ ಕಡಿಮೆಯಾಗಿದೆ. ಅಣೆಕಟ್ಟಿನ ಮೇಲ್ಬಾಗದಲ್ಲಿ ಉದ್ದೇಶಿತ ಕಾಮಗಾರಿ ಕೈಗೊಳ್ಳುವುದರಿಂದ ನೀರಿನ ಹರಿವು ಹೆಚ್ಚಾಗಿ ಪರಿಸರದ ನದಿಗಳಲ್ಲಿ ನೀರಿನ ಕುಸಿತ ಉಂಟಾಗುವ ಸಾಧ್ಯತೆಗಳಿವೆ. ಇದರಿಂದ ಈ ಭಾಗಗಳಲ್ಲಿ ಹಲವಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಧಾರ್ಮಿಕ ನಂಬಿಕೆ ಹಾಗೂ ಆಚರಣೆಗೆ ತೊಡಕಾಗುವ ಸಾಧ್ಯತೆಗಳಿವೆ ಎನ್ನುವುದನ್ನು ಮುಖ್ಯಮಂತ್ರಿಗಳು ಹಾಗೂ ಇಲಾಖೆಯ ಗಮನಕ್ಕೆ ತಂದಿದ್ದೇನೆ ಎಂದರು.
ಚುನಾವಣೆಯಲ್ಲಿ ನಾನು ಗೆದ್ದಿರಬಹುದು ಅಥವಾ ಸೋತಿರಬಹುದು, ಜನರು ನೀಡಿರುವ ತೀರ್ಪನ್ನು ಸಮಾನವಾಗಿ ಸ್ವೀಕರಿಸಿದ್ದೇನೆ. ನನಗಾಗಿ ದುಡಿದಿರುವ ಕಾರ್ಯಕರ್ತರನ್ನು ನನ್ನನ್ನು ರಾಜಕೀಯವಾಗಿ ಬೆಳಸಿದ ಬೈಂದೂರು ಕ್ಷೇತ್ರದ ಪ್ರತಿಯೊಬ್ಬ ಮತದಾರರ ಋಣವೂ ನನಗಿದೆ. ಕ್ಷೇತ್ರದ ಜನರ ಪರವಾಗಿರುವ ನಾನು ಯಾವ ಉದ್ದಿಮೆದಾರರ ಪರವೂ ಇಲ್ಲ.
ವಾರಾಹಿ ನೀರನ್ನು ಉಪಯೋಗಿಸಿಕೊಂಡು ಮೂಲ ಯೋಜನೆಯ ವ್ಯಾಪ್ತಿಯನ್ನು ಬಿಟ್ಟು ಬೇರೆ ಬೇರೆ ಕಡೆಗೆ ನೀರನ್ನು ಕೊಂಡೊಯ್ಯಲಾಗುತ್ತಿದೆ. ಜನರಿಗೆ ಕುಡಿಯಲು ನೀರು ತೆಗೆದುಕೊಂಡು ಹೋಗಲು ನಮ್ಮ ಆಕ್ಷೇಪವಿಲ್ಲ. ಆದರೆ ಮೂಲ ಯೋಜನೆಯಲ್ಲಿ ಪ್ರಾಸ್ತಾವಿಕವಾಗಿರುವ ಪ್ರದೇಶಗಳಿಗೆ ಮೊದಲು ನೀರು ನೀಡಿ, ನಂತರ ಬೇರೇಡೆಗೆ ಯೋಜನೆ ರೂಪಿಸುವಂತೆ ಸರ್ಕಾರ ಹಾಗೂ ನಿಗಮದ ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ.
ಪ್ರತಿ ವರ್ಷ ಬೇರೆ ಬೇರೆ ಕಾರಣಗಳಿಂದಾಗಿ ಸಮುದ್ರ ಸೇರುವ ನೂರಾರು ಟಿಎಂಸಿ ನೀರಿನ ಸದ್ಬಳಕೆ ಹಾಗೂ ಉಡುಪಿ ಜಿಲ್ಲೆಯಲ್ಲಿ ಹರಿಯುವ ವಾರಾಹಿ ಅಲ್ಲದೆ ಇತರ ನದಿಗಳ ನೀರನ್ನು ಉಪಯೋಗಿಸಿಕೊಂಡು ಜಿಲ್ಲೆಯ ಜನರ ನೀರಿನ ಅವಶ್ಯಕತೆ ಪೂರೈಸಲು ಅಗತ್ಯ ಯೋಜನೆ ರೂಪಿಸಲು ಕ್ರಮ ಕೈಗೊಳ್ಳುವಂತೆ ಮಾನ್ಯ ಉಪಮುಖ್ಯಮಂತ್ರಿಗಳನ್ನು ಮನವಿ ಮಾಡುತ್ತೇನೆ.
ಭವಿಷ್ಯದ ವಾರಾಹಿಯ ಯಾವುದೇ ಯೋಜನೆಗಳನ್ನು ರೂಪಿಸುವಾಗಲೂ ಅಣೆಕಟ್ಟಿನ ಮೇಲ್ಬಾಗದಲ್ಲಿ ಹಾಗೂ ರಿಸರ್ವವಯರ್ ಬಿಟ್ಟು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ. ಎಡದಂಡೆ ಯೋಜನೆ ಹಾಗೂ ಉಪ ಯೋಜನೆಗಳನ್ನು ಶೀಘ್ರವಾಗಿ ಮುಗಿಸಿ, ಬಲದಂಡೆ ಯೋಜನೆಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದರು.
ಈ ವೇಳೆ ಮುಖಂಡರಾದ ಜ್ಯೋತಿ ಪುತ್ರನ್, ಬೈಂದೂರು ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಅಕ್ಷಯ್ ಶೆಟ್ಟಿ ಉಪಸ್ಥಿತರಿದ್ದರು.
















