ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಜ್ಯ ಸರಕಾರದ ಗ್ಯಾರೆಂಟಿ ಯೋಜನೆ ಪ್ರತಿಯೋಬ್ಬ ಅರ್ಹ ಫಲಾನುಭವಿಗೂ ತಲುಪಿಸಬೇಕಾಗಿದ್ದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಇದಕ್ಕೆ ಅಧಿಕಾರಿಗಳ ಸಹಕಾರ ಅಗತ್ಯ. ಸರಕಾರದ ಯೋಜನೆಯಿಂದ ಯಾರೋಬ್ಬರು ವಂಚಿತರಾಗದಂತೆ ಶ್ರಮವಹಿಸಬೇಕಿದೆ ಎಂದು ಬೈಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮೋಹನ್ ಪೂಜಾರಿ ಹೇಳಿದರು.
ಅವರು ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಗ್ಯಾರಂಟಿ ಅನುಷ್ಠಾನ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೈಂದೂರು ತಾಲೂಕಿನ ಯಡ್ತರೆಯಲ್ಲಿ ಸುಸಜ್ಜಿತವಾದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಆಗಿದ್ದರೂ ಸರ್ವಿಸ್ ರಸ್ತೆ ಆಗದ ಕಾರಣ ಉಡುಪಿ ಭಾಗದ ಬಸ್ಸುಗಳನ್ನು ನಿಲ್ದಾಣಕ್ಕೆ ಬರದೇ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಇದಕ್ಕೆ ಸೂಕ್ತ ಕ್ರಮವಹಿಸಲು ಈಗಾಗಲೇ ಕೆ.ಎಸ್.ಆರ್.ಟಿ.ಸಿ ಡಿಸಿ ಅವರ ಗಮನಕ್ಕೆ ತರಲಾಗಿದೆ. ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಲಾಗಿದೆ. ಎಲ್ಲಾ ಬಸ್ಸುಗಳು ನಿಲ್ದಾಣಕ್ಕೆ ಬರುವಂತೆ ಹೆಚ್ಚಿನ ಕ್ರಮವಹಿಸಲು ಅವರು ಸೂಚಿಸಿದರು.

ಪರ್ಮಿಟ್ ಹೊಂದಿದ್ದರೂ ಕೆಎಸ್ಆರ್ಟಿಸಿ ಬಸ್ ಸೇವೆಯನ್ನು ಸ್ಥಗೀತಗೊಳಿಸಿ ತಾಲೂಕು ವ್ಯಾಪ್ತಿಯ ಗ್ರಾಮೀಣ ಭಾಗಗಳ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಗ್ಯಾರೆಂಟಿ ಸಮಿತಿಯ ನಿರಂತರ ಒತ್ತಡದ ಫಲವಾಗಿ ಬೆಳಿಗ್ಗೆ ಬಸ್ ವ್ಯವಸ್ಥೆ ಮಾಡಲಾಗಿದೆ ಆದರೆ ಮಧ್ಯಾಹ್ನ ಸಮಸ್ಯೆ ಎದುರಿಸುತ್ತಿದ್ದಾರೆ. ಮಧ್ಯಾಹ್ನ 3 ಗಂಟೆ ಸಮಯದಲ್ಲಿಯೂ ಬಸ್ ವ್ಯವಸ್ಥೆ ಒದಗಿಸಲು ಕ್ರಮ ಕೈಗೊಳ್ಳುವಂತೆ ಮತ್ತು ಬೈಂದೂರು ಕೇಂದ್ರಿತವಾಗಿ ಸಿರಸಿ, ಉಡುಪಿ – ಮಂಗಳೂರು – ಹಾಸನ ಮಾರ್ಗಕ್ಕೆ ನೂತನವಾಗಿ ಎಸಿ / ನಾನ್ ಎಸಿ ಬಸ್ಸುಗಳನ್ನು ಒದಗಿಸಲು ಪತ್ರ ಬರೆದು, ಫಾಲೋಅಪ್ ಮಾಡಲು ಸೂಚಿಸಿದರು.
ಗ್ಯಾರಂಟಿಯಿಂದ ಫೆಬ್ರವರಿ ತನಕ 283.07 ಕೋಟಿ:
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ಬೈಂದೂರು ತಾಲೂಕಿಗೆ ಫೆಬ್ರವರಿ ತಿಂಗಳ ತನಕ ಸುಮಾರು 283.07 ಕೋಟಿ ರೂ. ವೆಚ್ಚಮಾಡಲಾಗಿದೆ. ಗೃಹಲಕ್ಷ್ಮೀ ಯೋಜನೆಯಿಂದ ಡಿಸೆಂಬರ್ ತಿಂಗಳಲ್ಲಿ 27,738 ಫಲಾನುಭವಿಗಳಿಗೆ 140.09ಕೋಟಿ ಜಮಾ ಆಗಿದೆ. 1289 ಮಂದಿಗೆ ಹಣ ಬರುವುದು ಬಾಕಿ ಇದ್ದು ಈ ಪೈಕಿ ಆಧಾರ್ ಮ್ಯಾಪಿಂಗ್, ಐಟಿ-ಜಿಎಸ್ಟಿ ಹಾಗೂ ಹೊಸ ನೊಂದಣಿಯವರೂ ಸೇರಿದ್ದಾರೆ. ಕುಟುಂಬದಲ್ಲಿ ಮರಣ ಹೊಂದಿದ ಗೃಹಲಕ್ಷ್ಮೀ ಫಲಾನುಭವಿಗಳ ಮಾಹಿತಿಯನ್ನು ಇಲಾಖೆಗೆ ತಿಳಿಸಿ ಸರ್ಕಾರದ ಹಣ ದುರ್ಬಳಕೆಯಾಗದಂತೆ ತಡೆಯುವಂತೆ ಸೂಚಿಸಿದರು. ಜನವರಿ ಹಾಗೂ ಫೆಬ್ರವರಿ ತಿಂಗಳ ಹಣ ಸಂದಾಯವಾಗುವುದು ಬಾಕಿ ಇದೆ. ಗೃಹ ಜ್ಯೋತಿ ಯೋಜನೆಯಿಂದ ಬೈಂದೂರು ಮೆಸ್ಕಾಂ ವ್ಯಾಪ್ತಿಯ 28512 ಕುಟುಂಬಗಳಿಗೆ 53.03 ಕೋಟಿ ರೂ., ತಲ್ಲೂರು ಮೆಸ್ಕಾಂ ಉಪ ಕೇಂದ್ರ ವ್ಯಾಪ್ತಿಯ 1832 ಕುಟುಂಬಗಳಿಗೆ 3.41 ಕೋಟಿ ರೂ. ಸೇರಿದಂತೆ ಒಟ್ಟು 56.44 ಕೋಟಿ ರೂ. ವೆಚ್ಚವಾಗಿದೆ. ಅನ್ನಭಾಗ್ಯ ಯೋಜನೆಯಡಿ 25,532 ಪಡಿತರ ಚೀಟಿಗಳಿಗೆ 1.91 ಕೋಟಿ ರೂ. ವಿನಿಯೋಗಿಸಲಾಗಿದೆ. ಯುವ ನಿಧಿ ಯೋಜನೆಯಡಿ 637 ಫಲಾನುಭವಿಗಳ ನೊಂದಣಿಯಾಗಿದ್ದು 482 ಮಂದಿಗೆ 1.55ಕೋಟಿ ರೂ. ಜಮಾ ಆಗಿದೆ. ಶಕ್ತಿ ಯೋಜನೆಯಡಿ ಇದುವರೆಗೆ 2.02ಕೋಟಿ ಮಹಿಳೆಯರು ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸಿದ್ದು 76.69ಕೋಟಿ ರೂ. ರಿಯಾಯಿತಿ ಪಡೆದಿದ್ದಾರೆ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಕಾರಿ ರಾಮದಾಸ್. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಮಾಲತಿ ಶಿವಾನಂದ, ಅನೀಶ್ ಪೂಜಾರಿ, ಸೂರ್ಯಕಾಂತಿ ದೇವದಾಸ್ ವಿ.ಜೆ., ಬಾಬು ದೇವಾಡಿಗ, ಮುಕ್ರಿ ಮೊಹಮ್ಮದ್ ಅಲ್ತಾಫ್, ಪ್ರಭಾಕರ ನಾಯ್ಕ್, ಅಣ್ಣಪ್ಪ ಶೆಟ್ಟಿ ಮೆಸ್ಕಾಂ, ಕೆಎಸ್ಆರ್ಟಿಸಿ, ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
















