ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಪಾಂಡೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶು ಆಸ್ಪತ್ರೆ ನೀಡಬೇಕು ಎಂದು ಪಾಂಡೇಶ್ವರ ವಿಶೇಷ ಗ್ರಾಮ ಸಭೆಯಲ್ಲಿ ಆಗ್ರಹ ಕೇಳಿ ಬಂತು.
ಶುಕ್ರವಾರ ಪಾಂಡೇಶ್ವರ ಗ್ರಾ.ಪಂ ಸಭಾಂಗಣದಲ್ಲಿ ವಿಶೇಷ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿ ನಮ್ಮ ಗ್ರಾಮದಲ್ಲಿ ಈವರೆಗೆ ಸ್ಥಳೀಯವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶು ಆಸ್ಪತ್ರೆ ಇಲ್ಲವಾಗಿದೆ ಈ ಬಗ್ಗೆ ನಿರ್ಣಯ ಕೈಗೊಂಡು ಸರಕಾರಕ್ಕೆ ಪ್ರಾಸ್ತಾವನೆ ಸಲ್ಲಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು.

ಸಾಸ್ತಾನ ಟೋಲ್ ಸುತ್ತಮುತ್ತ ಹಾಗೂ ಪಂಚಾಯತ್ ವ್ಯಾಪ್ತಿಯ ಕೆಲ ಅಂಗಡಿ ಮುಂಗಟ್ಟುಗಳ ಆಸುಪಾಸು ಕಸ ಹಾಗೂ ಎಳನೀರಿನ ಬೊಂಡದ ರಾಶಿಯಿಂದ ಪರಿಸರ ಮಲಿನಗೊಳ್ಳುತ್ತಿದೆ ಈ ಬಗ್ಗೆ ಸಂಬಂಧಪಟ್ಟ ಟೋಲ್ ಹಾಗೂ ಅಂಗಡಿಮುಂಗಟ್ಟುಗಳಿಗೆ ನೋಟಿಸ್ ಮೂಲಕ ಜಾಗೃತಿ ಮೂಡಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು.
ಇದೀಗ ವಿಪರೀತ ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಏರುತ್ತಿದೆ ಕುಡಿಯುವ ನೀರಿನ ಅಭಾವ ತಪ್ಪಿಸಲು ಏನು ಕ್ರಮ ಕೈಗೊಂಡಿದ್ದಿರಿ,ಜಲಜೀವನ್ ಯೋಜನೆ ಟ್ಯಾಪ್ ನಲ್ಲಿ ನೀರು ಬರುತ್ತಿಲ ಈಗಲೇ ಈ ಬಗ್ಗೆ ಕ್ರಮಕೈಗೊಳ್ಳಿ ಎಂಬ ಆಗ್ರಹ,ಪರಿಶಿಷ್ಟ ಪಂಗಡದ ಕೆಲ ಮಕ್ಕಳು ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾರೆ ಈ ಬಗ್ಗೆ ಸ್ಥಳೀಯಾಡಳಿತ ಮಹಿಳಾಮತ್ತುಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಕ್ರಮ,ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಸಂಬಂಧಿಸಿದ ವೈದ್ಯರನ್ನು ವರ್ಗಾಯಿಸಿ ಅಲ್ಲಿ ಹೆರಿಗೆ ಕೇಂದ್ರವನ್ನು ಮುಚ್ಚಿದ್ದಾರೆ ಇದರಿಂದ ಕೋಟ ಹೋಬಳಿ ಭಾಗದ ಸಾಕಷ್ಟು ಬಡ ವರ್ಗದವರಿಗೆ ಅದರಲ್ಲೂ ನಮ್ಮ ಪಂಚಾಯತ್ ವ್ಯಾಪ್ತಿಯ ಫಲಾನುಭವಿಗಳು ವಂಚಿರಾಗಿ ದೂರದ ತಾಲೂಕು ಜಿಲ್ಲಾಸ್ಪತ್ರೆಗೆ ಹೋಗುವ ಪ್ರಸಂಗ ಎದುರಾಗಿದೆ ಈ ಬಗ್ಗೆ ವೈದ್ಯರನ್ನು ಮರುನೇಮಕಗೊಳಿಸುವ ಸಂಬಂಧ ನಿರ್ಣಯ ಕೈಗೊಳ್ಳಿ ಎಂದು ಸಭೆ ಆಗ್ರಹಿಸಿತು.
ಸಭೆಯ ಅಧ್ಯಕ್ಷೆತೆಯನ್ನು ಆಡಳಿತ ಅಧಿಕಾರಿ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸೂರಜ್ ವಹಿಸಿದ್ದರು.
ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ ರಾಘವೇಂದ್ರ ರಾವ್ ಬೇಸಿಗೆಯ ಹಿನ್ನಲ್ಲೆಯಲ್ಲಿ ಆರೋಗ್ಯದ ಮೇಲಾಗುವ ವ್ಯತ್ಯಯ, ಸ್ವಚ್ಛ ಕುಡಿಯುವ ನೀರು ಉಪಯೋಗಿಸುವ ಸಂಬಂಧಿಸಿದಂತೆ ಸಮಗ್ರ ಆರೋಗ್ಯ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಇದೇ ವೇಳೆ ಕ್ಷಯ ಮುಕ್ತ ಗ್ರಾಮಪಂಚಾಯತ್ ಪ್ರಥಮ ಸ್ಥಾನ ಪಡೆದ ಹಿನ್ನಲ್ಲೆಯಲ್ಲಿ ಸಭೆಯಲ್ಲಿ ವೈದ್ಯಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಯ ಬ್ರಹ್ಮಾವರ ತಾಲೂಕಿನ ಅಧಿಕಾರಿ ಭಾಗೀರಥಿ ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಮಾಡಳಿತಾಧಿಕಾರಿ ಐರಿನ್ ಶಾಂತಿ ಫೇರೆರಾ ಉಪಸ್ಥಿತರಿದ್ದರು. ಪಂಚಾಯತ್ ಪಿಡಿಒ ವಂದನಾ ಸ್ವಾಗತಿಸಿ ವಿಶೇಷ ಗ್ರಾಮಸಭೆಯ ಕುರಿತು ಮಾಹಿತಿ ನೀಡಿದರು.ಪಂಚಾಯತ್ ಕಾರ್ಯದರ್ಶಿ ವಿಜಯ ಭಂಡಾರಿ ವಿಶೇಷ ಗ್ರಾಮಸಭೆ ನಿರ್ವಹಿಸಿದರು.
















