ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯಾವುದೇ ಅಬ್ಬರದ ಪ್ರಚಾರವಿಲ್ಲದೇ ಜನಮೆಚ್ಚುವ ಕೆಲಸ ಮಾಡುತ್ತಿರುವ ಆಸರೆ ಸಂಸ್ಥೆಯ ಕಾರ್ಯ ಇತರರಿಗೆ ಮಾದರಿ. ಗ್ರಾಮೀಣ ಪ್ರದೇಶದಲ್ಲಿರುವ ಸಂಘ-ಸಂಸ್ಥೆಗಳು ಆರ್ಥಿಕ ದುರ್ಬಲರ ಪಾಲಿಗೆ ಸಂಜೀವಿನಿಯಾಗಿದೆ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಲಿ ಹೇಳಿದರು.
ಅವರು ಆಸರೆ ಟ್ರಸ್ಟ್ ವಕ್ವಾಡಿ ವತಿಯಿಂದ ಭಾನುವಾರ ವಕ್ಕಾಡಿಯ ಶ್ರೀ ಹಳೆಯಮ್ಮ ದೇವಿ ಸಭಾಭವನದಲ್ಲಿ ಆಯೋಜಿಸಲಾದ ವಿದ್ಯಾರ್ಥಿವೇತನ ಹಾಗೂ ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದುಬ್ಬಾ ಪಾರ್ಚೂನ್ ಗ್ರೂಫ್ ಆಫ್ ಹೊಟೇಲ್ನ ಆಡಳಿತ ನಿರ್ದೇಶಕ ಪ್ರವೀಣ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿವೇತನವನ್ನು ವಿತರಿಸಿ, ಟ್ರಸ್ಟ್ನ ಕಾರ್ಯವೈಖರಿಯನ್ನು ಪ್ರಶಂಸಿದರಲ್ಲದೇ ಊರಿನ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ನೆರವನ್ನು ನೀಡಲು ಸದಾ ಬದ್ಧನಾಗಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸರೆ ಟ್ರಸ್ಟ್ ವಕ್ವಾಡಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಸಣಗಲ್ಲು ಮನೆ ವಹಿಸಿದ್ದರು. ಕಟೀಲು ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ ದಿಕ್ಕೂಚಿ ಭಾಷಣ ಮಾಡಿದರು. ಹೊನ್ನಾವರದ ಶ್ರೀ ದೇವಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಚಂದ್ರಶೇಖರ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

ವಕ್ವಾಡಿ ಶ್ರೀ ಹಳೆಯಮ್ಮ ದೇವಿ ಸಪರಿವಾರ ದೈವಸ್ಥಾನದ ಆಡಳಿತ ಮೊಕ್ತಸರ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಕೋಟೇಶ್ವರ ರೋಟರಿ ಕ್ಲಬ್ ನೂತನ ಕಾರ್ಯದರ್ಶಿ ಅರುಣ್ ದೇವಾಡಿಗ, ತೆಕ್ಕಟ್ಟೆ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ನಿವೃತ್ತ ಶಿಕ್ಷಕರಾದ ಅಶೋಕ ಶೆಟ್ಟಿ ಹಾಗೂ ಚಂದ್ರಶೇಖರ ಶೆಟ್ಟಿ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ನಂದಿನಿ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಸ್ಥಳೀಯ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ, ಆಶಕ್ತರಿಗೆ ಆರ್ಥಿಕ ನೆರವು, ಸ್ಥಳೀಯ ಅಂಗನವಾಡಿ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ವಿತರಿಸಲಾಯಿತು.
ಕೀರ್ತಿ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸತೀಶ ಪೂಜಾರಿ ನಿರೂಪಿಸಿದರು. ಆನಂದ ಆಚಾರ್ ವಂದಿಸಿದರು.
















