ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: “ಕ್ರೀಡೆಯ ಮೂಲಕ ಯುವಜನರನ್ನು ಆರೋಗ್ಯಕರ ಚಟುವಟಿಕೆಗೆ ಕೊಂಡೊಯ್ಯುವುದೇ ನಮ್ಮ ಮುಖ್ಯ ಉದ್ದೇಶ. ಗಾಂಧಿ ಮೈದಾನದಲ್ಲಿ ನಿರ್ಮಾಣವಾಗಿರುವ ಈ ವಾಲಿಬಾಲ್ ಕೋರ್ಟ್ನಿಂದ ಕುಂದಾಪುರದ ಯುವ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ಪಡೆಯಲು ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆಯಲಿದೆ. ಸ್ಥಳೀಯ ಕ್ರೀಡಾ ಸಂಘಗಳು ಮತ್ತು ಯುವಕರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು” ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಕರೆ ನೀಡಿದರು.
ಅವರು ನಗರದ ಗಾಂಧಿ ಮೈದಾನದಲ್ಲಿ ನೂತನವಾಗಿ ನಿರ್ಮಿಸಲಾದ ವಾಲಿಬಾಲ್ ಕೋರ್ಟ್ನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕುಂದಾಪುರ ಫ್ರೆಂಡ್ಸ್ನ ಗೌರವಾಧ್ಯಕ್ಷ ರಾಜೇಶ್ ಕಾವೇರಿ ಅವರು ಸ್ವಾಗತಿಸಿ, ಮಾತನಾಡಿ, “ಇಂತಹ ಕ್ರೀಡಾ ಮೂಲಸೌಕರ್ಯಗಳು ನಮ್ಮ ಊರಿನ ಯುವಕರ ಪ್ರತಿಭೆಯನ್ನು ಹೊರತರಲು ಸಹಕಾರಿಯಾಗಲಿವೆ. ಮುಂದೆಯೂ ಇದೇ ರೀತಿ ಯುವಕರ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು” ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಕುಂದಾಪುರ ಗ್ಯಾರಂಟಿ ಸಮಿತಿ ಅಧ್ಯಕ್ಷ ಹರಿಕೃಷ್ಣ ಶೆಟ್ಟಿ ಕಾನ್ಮಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಭಾರತದ ವಾಲಿಬಾಲ್ ಮಾಜಿ ನಾಯಕ ನಾಗರಾಜ್ ಹೆಗ್ಡೆ, ಯೋಜನಾ ಸಬಲೀಕರಣ ಮತ್ತು ಕ್ರೀಡಾ ಅಧಿಕಾರಿ ಸತ್ಯನಾರಾಯಣ ಜಿ. ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಭಾಸ್ಕರ್ ವಿಠಲವಾಡಿ ನಿರೂಪಿಸಿದರು. ವಾಲಿಬಾಲ್ ಮಾಜಿ ಆಟಗಾರ ಸಮೀರ್ ವಂದನಾ ಸಮರ್ಪಿಸಿದರು. ಸ್ಥಳೀಯ ಮುಖಂಡರು, ಕ್ರೀಡಾ ಸಂಘಗಳ ಪದಾಧಿಕಾರಿಗಳು, ಯುವಕರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
















