ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲದ ಮಳೆಗಾಲದ ಅಧಿವೇಶನದಲ್ಲಿ ರಾಜ್ಯದಲ್ಲಿ ಪ್ರಸ್ತುತ ಅಳವಡಿಸಲಾದ ಮಳೆ ಮಾಪಕಗಳು ಹಾಳಾಗಿರುವುದು ಹಾಗೂ ಸಮರ್ಪಕವಾದ ನಿರ್ವಹಣೆ ಕೊರತೆ ಇರುವ ವಿಚಾರ ಇದರಿಂದ ಸರಿಯಾದ ಮಳೆ ಅಂಕಿ ಅಂಶ ದಾಖಲಾಗದೇ ಬೆಳೆ ವಿಮೆ ಸಹಿತ ರೈತರಿಗೆ ಪರಿಹಾರ ಪಡೆಯುವಲ್ಲಿ ಅನಾನುಕೂಲವಾಗುವ ಸಾಧ್ಯತೆ ಇರುವುದರಿಂದ ಪ್ರತಿ ಕೇಂದ್ರದ ಕಾರ್ಯಕ್ಷಮತೆ ಹೆಚ್ಚಿಸಲು ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಪ್ರಶ್ನೆ ಕೇಳಿದ್ದಾರೆ.
ಚುಕ್ಕೆ ರಹಿತ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯ ಮಂತ್ರಿಗಳೂ ಹಾಗೂ ಕಂದಾಯ ಸಚಿವರಾದ ಡಾ. ಜಿ ಪರಮೇಶ್ವರ್ ಅವರು ಪ್ರತಿ ಟೆಲಿ ಮೆಟ್ರಿಕ್ ಮಳೆ ಮಾಪಕಗಳ ನಿರ್ವಹಣೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ನಿತ್ಯ ಸಮರ್ಪಕ ಕಾರ್ಯನಿರ್ವಹಣೆ, ಮೇಲ್ವಿಚಾರಣೆ ಮತ್ತು ನಿಗಾವಹಿಸುವ ಜವಾಬ್ದಾರಿ ಹೊಂದಿರುತ್ತಾರೆ ಮತ್ತು ಯಾವುದೇ ಟೆಲಿಮೆಟ್ರಿಕ್ ಮಳೆ ಮಾಪಕಗಳು ಕಾರ್ಯನಿರ್ವಹಿಸದಿದ್ದರೆ ತಕ್ಷಣವೇ ತಹಶೀಲ್ದಾರ್ ಮೂಲಕ ಅಪರ ಜಿಲ್ಲಾಧಿಕಾರಿಗಳಿಗೆ ವರದಿ ಮಾಡಬೇಕು.
ಅಪರ ಜಿಲ್ಲಾಧಿಕಾರಿಗಳು ಸಮಸ್ಯೆ ಇರುವ ಟೆಲಿ ಮೆಟ್ರಿಕ್ ಮಳೆ ಮಾಪಕಗಳ ವಿವರಗಳನ್ನು ಪಟ್ಟಿ ಮಾಡಿ ಮತ್ತು ಇವುಗಳನ್ನು ಸಕ್ರಿಯಗೊಳಿಸಲು ಸಂಬಂಧಿಸಿದ ನಿರ್ವಹಣಾ ಸಂಸ್ಥೆಗಳಿಗೆ ಲಿಖಿತವಾಗಿ ಸೂಚನೆ ನೀಡಲು ಅವಕಾಶ ಮಾಡಿಕೊಡಲಾಗಿದೆ.
ಸರಿಯಾದ ಮಳೆ ಅಂಕಿ ಅಂಶ ದಾಖಲಾಗದ ಪಕ್ಷದಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಿಬ್ಬಂದಿಗಳು ಪ್ರತಿ ಜಿಲ್ಲೆ ಒಬ್ಬರಂತೆ ಪ್ರತಿದಿನ ಪರಿಶೀಲನೆ ಮಾಡಿ ಸರಿಯಾದ ದತ್ತಾಂಶವನ್ನು ಸಂಬಂಧಪಟ್ಟ ಸಂರಕ್ಷಣೆ ವೆಬ್ಸೈಟ್ಗೆ ಅಪ್ಲೋಡ್ ಮಾಡುತ್ತಾರೆ ಎಂದು ಸಚಿವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಹೊಸದಾಗಿ ಮಳೆ ಮಾಪಕ ಘಟಕ ಅಳವಡಿಸಲು ಇರುವ ಬೇಡಿಕೆ ಕುರಿತಾಗಿ ಕೇಳಿರುವ ಉಪ ಪ್ರಶ್ನೆಗೆ ಉತ್ತರಿಸಿದ ಸಚಿವರು 1,959 ಮಳೆ ಮಾಪನ ಕೇಂದ್ರಗಳ ವಾರ್ಷಿಕ ನಿರ್ವಹಣೆ ಅವಧಿ ಮುಗಿದಿದ್ದು ಈಗಾಗಲೇ ಹೊಸದಾಗಿ ಸ್ಥಾಪಿಸಲು ಆದೇಶ ನೀಡಲಾಗಿದೆ. ಇವುಗಳ ಪೈಕಿ ಯಾವುದೇ 1791 ಕೇಂದ್ರಗಳ ಸಿವಿಲ್ ಕಾಮಗಾರಿ ಮುಗಿದಿದ್ದು 359 ಕೇಂದ್ರಗಳ ದತ್ತಾಂಶ ಸ್ವೀಕಾರವಾಗುತ್ತಿದೆ ಎಂಬುದಾಗಿ ಶಾಸಕರ ಪ್ರಶ್ನೆಗೆ ಉತ್ತರಿಸಿದ್ದಾರೆ.
















