ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ದೇಶದ ಸುಭಿಕ್ಷೆಗೆ ಕೃಷಿ ಮತ್ತು ಹೈನುಗಾರಿಕೆ ಮೂಲಕ ಕಾರಣವಾಗಿದೆ ಎಂದು ಕೆ.ಎಂ.ಎಫ್ ವಿಸ್ತರ್ಣಾಧಿಕಾರಿ ಉಮೇಶ್ ಕುಂದರ್ ಹೇಳಿದರು.
ಅವರು ಸೋಮವಾರ ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಇದರ ವಾರ್ಷಿಕ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಹೈನುಗಾರಿಕೆಯಲ್ಲಿ ಯುವ ಸಮೂಹ ಹೈನುಗಾರಿಕೆಯಲ್ಲಿ ಮುನ್ನುಗ್ಗುತ್ತಿರುವುದು ಆವಾಸಸ್ಥಾನ ಬೆಳವಣಿಗೆಯಾಗಿದೆ, ಹೈನುಗಾರಿಕೆ ಲಾಭದಾಯ ಉದ್ಯಮವಾಗಿರಿಸಿಕೊಂಡು ಕುಟುಂಬ ನಿರ್ವಹಣೆ ಸಾಧ್ಯ ಎಂದರು.
ನಮ್ಮ ಹಿರಿಯರು ತೋರಿಸಿಕೊಟ್ಟಿದ್ದಾರೆ,ಹೈನುಗಾರಿಕೆ ವಿಧಾನವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಹೆಚ್ಚು ಹೆಚ್ಚು ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡಲು ಸಲಹೆ ನೀಡಿದರ ಅವರು ಈ ಮೂಲಕ ತಾವು ಅಭಿವೃದ್ಧಿಗೊಂಡು ತಮ್ಮ ಸಂಘದ ಹಿತಕಾಯಲು ಕರೆಕೊಟ್ಟರಲ್ಲದೆ ಎಐ ತಂತ್ರಜ್ಞಾನದ ಬಲದಿಂದ ಅದೆಷ್ಟೊ ಯುವ ಸಮೂಹ ಗ್ರಾಮೀಣ ಚಟುವಟಿಕೆಗಳಾದ ಕೃಷಿ ಹೈನೋದ್ಯಮದಲ್ಲಿ ತೊಡಗಿಕೊಳ್ಳುತ್ತಿರುವುದು ಇತ್ತೀಚಿಗಿನ ದಿನಗಳಲ್ಲಿ ಬೆಳಕಿಗೆ ಬಂದಿದೆ,ಕೆ.ಎಂಎಫ್ ಹೈನುಗಾರರ ಹಿತ ಕಾಯಲು ಬದ್ಧವಾಗಿದ್ದು ಸಾಕಷ್ಟು ಯೋಜನೆಗಳನ್ನು ಹೊರತಂದಿದ್ದು ಅದರ ಪ್ರಯೋಜನ ಪಡೆಯಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ವಲೇರಿಯನ್ ಡಿಸೋಜ ಅಧ್ಯಕ್ಷತೆ ವಹಿಸಿ ಸಾಮಾನ್ಯ ಸಭೆಯನ್ನು ನಡೆಸಿಕೊಟ್ಟರು. 2025-26ನೇ ಸಾಲಿನಲ್ಲಿ ಸಂಘಕ್ಕೆ ಹೆಚ್ಚು ಹಾಲು ನೀಡಿ ಪ್ರಥಮ ಬಹುಮಾನ ಪಡೆದ ಜೂಡಿಪ್ ಪಿಕಾರ್ಡೋ ಇವರಿಗೆ ನಗದು ಇನ್ನುಳಿದ ಹೈನುಗಾರರಿಗೆ ಪರಿಕರ ರೂಪದಲ್ಲಿ ಬಹುಮಾನ ನೀಡಿ ಗೌರವಿಸಲಾಯಿತು. ಹಾಲು ಉತ್ಪಾದಕರಿಗೆ ಬೋನಸ್ ಹಾಗೂ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷೆ ಶ್ಯಾಮಲ ದೇವಾಡಿಗ, ನಿರ್ದೇಶಕರುಗಳಾದ ಜಲಜ ಬಿ. ಪೂಜಾರಿ, ವಸುಧಾ ಪಿಎನ್ ಬಾಯರಿ, ಜಯಂತ ಪೂಜಾರಿ, ನಾಗರತ್ನ ಮಡಿವಾಳ, ಲಲಿತಾ ಪೂಜಾರಿ, ಡಯಾನಾ ಪಿಂಟೋ, ದಾಕ್ಷಾಯಿನಿ,ಮೈನಾ ಬಿ. ಸಾಲಿಯಾನ್ ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ಯಾಮಲ ಪಾಂಡೇಶ್ವರ ಸಂಘದ ನಡವಳಿ, ವರದಿ, ಲೆಕ್ಕಪತ್ರ, ಆಯವ್ಯಯ ವಾಚಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಹಾಯಕಿ ಸುಜಾತ ವೆಂಕಟೇಶ ಸಹಕರಿಸಿದರು.
















