ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ಶಿಕ್ಷಣ ಇಲಾಖೆ ಹಾಗೂ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಇವರ ಸಂಯುಕ್ತ ಆಶ್ರಯದಲ್ಲಿ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಬೈಂದೂರು ವಲಯ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯ 9 ವಿದ್ಯಾರ್ಥಿಗಳು ಭರ್ಜರಿ ಜಯದೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
17ರ ವಯೋಮಾನದ ಬಾಲಕರ ವಿಭಾಗದಲ್ಲಿ ರಯಾನ್ ಅಹಮದ್ ಖಾನ್ , ಸೋಹನ್, ಪ್ರೀತಮ್ ಹಾಗೂ ಸ್ಕಂದ ಪ್ರಥಮ ಸ್ಥಾನ ಪಡೆದರು. ನಿನಾದ್ ಮತ್ತು ಭರತ್ ದ್ವಿತೀಯ ಸ್ಥಾನ ಪಡೆದರು.
17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸನ್ಮಿತಾ, ಮತ್ತು ತಕ್ಷಾ ಪ್ರಥಮ ಸ್ಥಾನ ಹಾಗೂ ಉನ್ನತಿ ದ್ವಿತೀಯ ಸ್ಥಾನ ಪಡೆದರು. 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಅಭಿನವ್, ಸಚಿದ್ ಮತ್ತು ಸಾಕ್ಷಿತ್ ಪ್ರಥಮ ಸ್ಥಾನ ಗಳಿಸಿಕೊಂಡರೆ, ದೀಕ್ಷಿತ್ ಹಾಗೂ ಶೈನ್ ದ್ವಿತೀಯ ಸ್ಥಾನ ಗಳಿಸಿದರು.
ತಾಲೂಕಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿರುವ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವುದರ ಜೊತೆಯಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ವಿಭಾಗಗಳಲ್ಲಿ ತನ್ನದೇ ಛಾಪು ಮೂಡಿಸಿದ್ದು, ಅನುಭವಿ ಮತ್ತು ಪ್ರಭಾವಿ ತರಬೇತುದಾರರ ಮೂಲಕ ಪ್ರತಿನಿತ್ಯ ತನ್ನ ವಿದ್ಯಾರ್ಥಿಗಳನ್ನು ವಿವಿಧ ಸ್ಪರ್ಧೆಗಳಿಗೆ ಸಜ್ಜುಗೊಳಿಸುತ್ತಿದೆ.
ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಮುಖ್ಯ ಶಿಕ್ಷಕಿ ವಿದ್ಯಾರ್ಥಿಗಳ ಈ ಅಮೋಘ ಪ್ರದರ್ಶನಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರು, ಬೋಧಕ- ಬೋಧಕೇತರ ವೃಂದದವರು ಮತ್ತು ವಿದ್ಯಾರ್ಥಿಗಳು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
















