ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶ್ರೀ ಕಾಳಾವರ ವರದರಾಜ್ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕುಂದಾಪುರ-ಕೋಟೇಶ್ವರದ ಇತಿಹಾಸ ವಿಭಾಗ ಹಾಗೂ ಐಕ್ಯೂಎಸಿ (IQAC) ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ “Introduction to Epigraphy” (ಶಾಸನಶಾಸ್ತ್ರ ಪರಿಚಯ) ಕುರಿತು ಒಂದು ದಿನದ ವಿಶೇಷ ಕಾರ್ಯಾಗಾರವು ಇತ್ತೀಚೆಗೆ ಯಶಸ್ವಿಯಾಗಿ ಜರುಗಿತು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುಷಾ ವಸ್ತುಸಂಗ್ರಹಾಲಯದ ಸಂಶೋಧಕರಾದ ಶ್ರುತೇಶ್ ಆಚಾರ್ಯ ಅವರು ಮಾತನಾಡಿ, ಶಾಸನಗಳನ್ನು ಓದುವ ವಿಧಾನ, ಅವುಗಳ ಐತಿಹಾಸಿಕ ಹಿನ್ನೆಲೆ ಹಾಗೂ ಸಂರಕ್ಷಣೆಯ ಅನಿವಾರ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಶಾಸನಗಳನ್ನು ಕೇವಲ ಕಲ್ಲಿನ ಮೇಲೆ ಕೆತ್ತಿದ ಅಕ್ಷರಗಳಾಗಿ ನೋಡದೆ, ಅವುಗಳಲ್ಲಿ ಅಡಕವಾಗಿರುವ ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಸಾಂಸ್ಕೃತಿಕ ಅಂಶಗಳನ್ನು ವಿಶ್ಲೇಷಿಸುವ ವಿಧಾನಗಳ ಕುರಿತು ವಿದ್ಯಾರ್ಥಿಗಳಿಗೆ ಸವಿವರವಾದ ಮಾರ್ಗದರ್ಶನ ನೀಡಲಾಯಿತು. ಶಾಸನಗಳ ಅಧ್ಯಯನವು ಇತಿಹಾಸ ಸಂಶೋಧನೆಗೆ ಹೇಗೆ ಭದ್ರವಾದ ಬುನಾದಿಯಾಗುತ್ತದೆ ಎಂಬುದನ್ನು ಸಂಪನ್ಮೂಲ ವ್ಯಕ್ತಿಗಳು ಮನವರಿಕೆ ಮಾಡಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ ವೈದ್ಯ ಎಂ. ಅವರು ಮಾತನಾಡಿ, “ಶಾಸನಗಳು ನಮ್ಮ ಪ್ರಾಚೀನ ಇತಿಹಾಸದ ಜೀವನಾಡಿಗಳಾಗಿದ್ದು, ಇಂದಿನ ವಿದ್ಯಾರ್ಥಿಗಳು ಶಾಸನಗಳ ಅಧ್ಯಯನದ ಕಡೆಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಇದೇ ವೇಳೆ, 75ಕ್ಕೂ ಹೆಚ್ಚು ಶಾಸನಗಳನ್ನು ಓದಿ ಅತಿಥಿ ಸಂಶೋಧಕರಾಗಿ ಗುರುತಿಸಿಕೊಂಡಿರುವ ಶ್ರುತೇಶ್ ಆಚಾರ್ಯ ಅವರನ್ನು ವಿಶೇಷ ಸಾಧನೆಯನ್ನು ಅಭಿನಂದಿಸಿ, ಇತಿಹಾಸ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು.
ಇದೇ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾಗಿದ್ದು, ಪ್ರಸ್ತುತ ಬೈಂದೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿರುವ ಮಮತಾ ಅವರನ್ನು ಈ ಸಂದರ್ಭದಲ್ಲಿ ಕಾಲೇಜಿನ ಪರವಾಗಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಬ್ರಹ್ಮಣ್ಯ ಎ. ಹಾಗೂ ಐಕ್ಯೂಎಸಿ ಸಂಯೋಜಕಿ ಮೋಹಿನಿ ಅತ್ತಿಮನಿ ಉಪಸ್ಥಿತರಿದ್ದರು.
ಈ ಕಾರ್ಯಾಗಾರವು ಬಿ.ಎ. ವಿದ್ಯಾರ್ಥಿಗಳಿಗೆ ಶಾಸನಶಾಸ್ತ್ರದ ಕುರಿತು ಪ್ರಾಥಮಿಕ ಹಾಗೂ ಪ್ರಾಯೋಗಿಕ ಜ್ಞಾನವನ್ನು ಪಡೆಯಲು ಅತ್ಯಂತ ಉಪಯುಕ್ತವಾಯಿತು ಹಾಗೂ ವಿದ್ಯಾರ್ಥಿಗಳಲ್ಲಿ ಇತಿಹಾಸ ಸಂಶೋಧನೆಯ ಬಗ್ಗೆ ಹೊಸ ಉತ್ಸಾಹವನ್ನು ಮೂಡಿಸಿತು.
ಇತಿಹಾಸ ವಿಭಾಗದ ಮುಖ್ಯಸ್ಥೆ ವೈಶಾಲಿ ಜಿ.ಆರ್. ಅವರು ಸ್ವಾಗತಿಸಿದರು. ಬಿ.ಎ. ವಿದ್ಯಾರ್ಥಿನಿ ಸೌಮ್ಯ ಬಿ.ಎಸ್. ಕಾರ್ಯಕ್ರಮವನ್ನು ನಿರೂಪಿಸಿ, ಸಮೃದ್ಧಿ ವಂದನಾರ್ಪಣೆ ಗೈದರು.
















