ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಹಕ್ಕು ಪತ್ರ ಹೋರಾಟ ಸಮಿತಿ ಶಿರೂರು ಇದರ ವತಿಯಿಂದ ಕಳೆದ ಮೂರು ತಲೆಮಾರುಗಳಿಂದ ಶಿರೂರು ಗ್ರಾಮದಲ್ಲಿ ವಾಸಿಸುತ್ತಿರುವ ಸಾರ್ವಜನಿಕರಿಗೆ ಹಕ್ಕು ಪತ್ರ ಮಂಜೂರು ಮಾಡಬೇಕು ಮತ್ತು ಸಂತ್ರಸ್ಥರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಶನಿವಾರ ಶಿರೂರು ಗ್ರಾಮ ಪಂಚಾಯತ್ ಎದುರಗಡೆ ದರಣಿ ನಡೆಸಿ ಮನವಿ ನೀಡಿದರು. ಶಿರೂರು ಕಾಲೇಜಿನ ಮೈದಾನದಿಂದ ಕಾಲ್ನಡಿಗೆಯ ಮೂಲಕ ಶಿರೂರು ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತ್ರತ್ವ ವಹಿಸಿ ಮಾತನಾಡಿದ ಶಿರೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಕಾಪ್ಸಿ ನೂರ್ ಮಹ್ಮದ್, ಕಳೆದ ಎಂಬತ್ತು ವರ್ಷಗಳಿಂದ ಸರಕಾರಿ ಸ್ಥಳದಲ್ಲಿ ವಾಸವಾಗಿತ್ತು.ಪ್ರತಿ ವರ್ಷ ತೆರಿಗೆ ಪಾವತಿಸುತ್ತಿದ್ದು ಈಗಾಗಲೆ ಹಲವು ಬಾರಿ ಮನವಿ ನೀಡಿದರು ಜಿಲ್ಲಾಡಳಿತ ಸ್ಪಂಧಿಸಿಲ್ಲ.ಒಂದೊಮ್ಮೆ ನಮಗೆ ನ್ಯಾಯ ಸಿಗದಿದ್ದಲ್ಲಿ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ಬ್ರಹತ್ ಪ್ರತಿಭಟನೆ ನಡೆಸಲಾಗುವುದು.ಹೀಗಾಗಿ ಶಿರೂರು ಜನತೆಗೆ ಆದಷ್ಟು ಬೇಗ ನ್ಯಾಯ ನೀಡಬೆಕೆಂದು ಆಗ್ರಹಿಸಿದರು .
ಹೋರಾಟ ಸಮಿತಿ ಸದಸ್ಯ ಮನೋಜ್ ಶಿರೂರು ಮಾತನಾಡಿ ಕಳೆದ ಹಲವು ಬಾರಿ ಈ ಬಗ್ಗೆ ಮನವಿ ನೀಡಿದ್ದು ಇಲಾಖೆ ಇದುವರೆಗೆ ಸ್ಪಂಧಿಸಿಲ್ಲ ಈಗಿರುವ ಸಮಸ್ಯೆಗೆ ಸರಕಾರದ ಮಟ್ಟದಲ್ಲಿ ಈ ಕುರಿತು ನಿರ್ಣಯ ಕೈಗೊಂಡು ಇರುವ ಸಮಸ್ಯೆಗೆ ಪರಿಹಾರ ಕಂಡು ನ್ಯಾಯ ಒದಗಿಸಬೇಕು ಎಂದರು.
ಹೋರಾಟಗಾರರ ಪರವಾಗಿ ಮಾತನಾಡಿದ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಮುಕ್ರಿ ಅಲ್ತಾಫ್ ಮಾತನಾಡಿ, ಶಿರೂರು ಗ್ರಾಮದ ಸರ್ವೆ ನಂಬರ್ 63 ,365, 366, 367, 378 ಮತ್ತು 93 ರಲ್ಲಿ ವಾಸ ಮಾಡುತ್ತಿರುವ ಜನರು ಮೂರು ತಲೆಮಾರುಗಳಿಂದ ನಿಯಮ ಪ್ರಕಾರವಾಗಿ ತೆರಿಗೆ ಪಾವತಿಸಿ ಬದುಕುತ್ತಿದ್ದಾರೆ.ಈಗಾಗಲೆ ಪಂಚಾಯತ್ ಸಭೆಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಡಳಿತಕ್ಕೆ ಕಳುಹಿಸಲಾಗಿದೆ ಇದಕ್ಕೆ ಸಂಂಬಂಧಿಸಿದಂತೆ ಜನಪ್ರತಿನಿಧಿಗಳು ಪಕ್ಷಬೇದ ಮರೆತು ಜನರಿಗೆ ನ್ಯಾಯ ನೀಡಬೇಕು ಎಂದರು.
ಮೋಹನ್ ರೇವಣ್ಕರ್ ಮಾತನಾಡಿ ಶಿರೂರು ಗ್ರಾಮದ ಸರಕಾರಿ ಜಾಗದಲ್ಲಿ ವಾಸಿಸುವ ಜನರ ಸಮಸ್ಯೆಗಳಿಗೆ ನ್ಯಾಯಕ್ಕಾಗಿ ಮೂರು ದಶಕದ ಹೋರಾಟ ನಡೆಯುತ್ತಿದೆ ಜಿಲ್ಲಾಡಳಿತ ಸಮರ್ಪಕವಾಗಿ ಸ್ಪಂಧಿಸಿ ಸೂಕ್ತ ನ್ಯಾಯ ನೀಡದಿದ್ದರೆ ಮುಂದೆ ಇನ್ನಷ್ಟು ಹೋರಾಟ ನಡೆಸಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರರ ಪರವಾಗಿ ಉಪತಹಶೀಲ್ದಾರ ರಮೇಶ್ ಮನವಿ ಸ್ವೀಕರಿಸಿದರು. ಶಿರೂರು ಗ್ರಾ.ಪಂ ಮಾಜಿ ಅಧ್ಯಕ್ಷೆ ಜಿ.ಯು ದಿಲ್ಶಾದ್ ಬೇಗಂ, ಮಾಜಿ ಗ್ರಾ.ಪಂ ಸದಸ್ಯ ಎಚ್.ಎಸ್.ಸಿದ್ದಿಕ್, ಫಾರೂಕ್, ಶಕೀಲ್ ಅಹ್ಮದ್, ನಾರಾಯಣ ಪೂಜಾರಿ ಮಾರ್ಕೆಟ್, ಕಂದಾಯ ನಿರೀಕ್ಷಕ ಉಪೇಂದ್ರ, ಶಿರೂರು ಗ್ರಾ.ಪಂ ಅಭಿವೃದ್ದಿ ಅಧಿಕಾರಿ ರಾಜೇಂದ್ರ ಶೆಟ್ಟಿ, ಗ್ರಾಮಲೆಕ್ಕಾಧಿಕಾರಿ ವಿಜಯ ಕುಮಾರ್ ಹಾಗೂ ಹೋರಾಟ ಸಮಿತಿಯ ಸರ್ವ ಸದಸ್ಯರು ಹಾಜರಿದ್ದರು.
ಹೋರಾಟ ಸಮಿತಿ ಅಧ್ಯಕ್ಷ ಮುಸಿನ್ ಬಾವಾಜಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗ್ರಾ.ಪಂ ಮಾಜಿ ಸದಸ್ಯ ಶೋಯಬ್ ಅರೆಹೊಳೆ ಕಾರ್ಯಕ್ರಮ ನಿರೂಪಿಸಿದರು.
















