ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಂದೇ ಮಾತರಂ ಗೀತೆಯ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಈಗಾಗಲೇ ತನ್ನ ನಿಲುವನ್ನು ಸ್ಪಷ್ಟ ಪಡಿಸಿದೆ. ಈ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಂದಾಪುರ ಮಂಡಲ ಬಿಜೆಪಿ ಅವರು ವಂದೇ ಮಾತರಂ ವಿಚಾರದಲ್ಲಿ ಪಾದಯಾತ್ರೆ ಮಾಡುವುದಕ್ಕೆ ಕಾಂಗ್ರೆಸ್ ಪಕ್ಷದ ಯಾವುದೇ ವಿರೋಧವಿಲ್ಲಾ. ಆದರೆ ವಂದೇ ಮಾತರಂ ವಿಚಾರವನ್ನು ಇಟ್ಟುಕೊಂಡು ಅವರು ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳಾದ ನಾವು ಶಾಲಾ ದಿನಗಳಿಂದ ವಂದೇ ಮಾತರಂ ಗೀತೆಯನ್ನು ಹಾಡಿದವರು ಇಂದಿಗೂ ಹಾಡುತ್ತಿದ್ದೇವೆ ಮುಂದೆ ಹಾಡುತ್ತೇವೆ. ಆದರೆ ವಂದೇ ಮಾತರಂ ಗೀತೆಯ ಅಷ್ಟೂ ಚರಣವನ್ನು ಹಾಡಬೇಕು, ಅದನ್ನು ಹೀಗೆಯೇ ಹೇಳಬೇಕು ಎಂದು ಕಾಂಗ್ರೆಸ್ ನವರಿಗೆ ಭೋದನೆ ಮಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲಾ.
ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷದ ಹೆಮ್ಮೆಯ ಕಾರ್ಯಕರ್ತರುಗಳಿಗೆ ಬಿಜೆಪಿಯ ಕಪಟ ರಾಷ್ಟ್ರ ಪ್ರೇಮದ ಪಾಠದ ಅವಶ್ಯಕತೆಯಿಲ್ಲ. ಸಂಸದರು ಮತ್ತು ಶಾಸಕರು ವಂದೇ ಮಾತರಂ ವಿಚಾರದಲ್ಲಿ ಕುಂದಾಪುರದಿಂದ ಸಾಸ್ತಾನದ ತನಕ ಪಾದಯಾತ್ರೆ ಮಾಡುವಾಗ ಅದರ ಜೊತೆ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ, ಕರಾವಳಿಯ ಸಿ ಆರ್ ಝೆಡ್ ಸಮಸ್ಯೆ, ಕುಂದಾಪುರ ಪುರಸಭೆಯ ಯು ಜಿ ಡಿ ಸಮಸ್ಯೆ, ಕುಂದಾಪುರ ಪುರಸಭೆಯ ಪಾರ್ಕಿಂಗ್ ಸಮಸ್ಯೆ, ಕುಂದಾಪುರದಲ್ಲಿ ಉಪ ಸಾರಿಗೆ ಆಯುಕ್ತರ ಕಚೇರಿ ಬೇಡಿಕೆ, ಸಾಲಿಗ್ರಾಮ ಪಟ್ಟಣ ಪಂಚಾಯತ್ ನ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ, ಹೆದ್ದಾರಿ ಪಕ್ಕದ ಗ್ರಾಮ ಪಂಚಾಯತ್ ಗಳ ಸರ್ವಿಸ್ ರಸ್ತೆ ಬೇಡಿಕೆ, ಚರಂಡಿ ಸಮಸ್ಯೆ, ವಾಣಿಜ್ಯ ಹಾಗೂ ವಸತಿ ಕಟ್ಟಡಗಳ ನಿರ್ಮಾಣಕ್ಕೆ ಇರುವ ತೊಡಕುಗಳು, ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಬಹು ಬೇಡಿಕೆಯ ಸರ್ಕಾರಿ ಬಸ್ಸುಗಳ ಸೇವೆ, ಹೆದ್ದಾರಿ ಅಕ್ಕಪಕ್ಕದ ಶೂನ್ಯ ಶಿಕ್ಷಕರಿರುವ ಶಾಲೆ, ಕೋಟೇಶ್ವರ ರಿಕ್ಷಾ ನಿಲ್ದಾಣದ ಸಮಸ್ಯೆ ಇವುಗಳನ್ನೂ ಸಹ ತಮ್ಮ ಪಾದಯಾತ್ರೆಯ ಭಾಗವಾಗಿ ಸೇರಿಸಿಕೊಂಡು ನಡೆದರೆ ಉತ್ತಮವೆಂದು ಅವರು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.











