ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಸೆ.10: ತಾಲೂಕಿನ ಶಿರೂರು ಕೆಳಪೇಟೆ ಸಮೀಪ ಜರುಗಿದ ಸರಣಿ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಬೈಕ್ ಸವಾರ ಶಿರೂರು ನಿವಾಸಿ ನಾಗೇಂದ್ರ ಮಹಾಲೆ (45) ಮೃತ ದುರ್ದೈವಿ. ಸರಣಿ ಅಪಘಾತದಲ್ಲಿ ಪೊಲೀಸ್ ವಾಹನ ಸೇರಿದಂತೆ ನಾಲ್ಕು ಬೈಕ್ ಜಖಂಗೊಂಡಿದೆ.

ಶಿರೂರು ಗ್ರೀನ್ ವ್ಯಾಲಿ ಶಾಲೆಯ ಸಮೀಪದ ಬೆಳಿಗ್ಗೆ ಅಪಘಾತಗೊಂಡು ನಿಂತಿದ್ದ ವಾಹನವನ್ನು ಮೇಲೆತ್ತುವ ಸಂದರ್ಭದಲ್ಲಿ ಈ ಅವಘಡ ನಡೆದಿದೆ. ಬೈಂದೂರು ಕಡೆಯಿಂದ ಶಿರೂರು ಕಡೆಗೆ ತೆರಳುತ್ತಿದ್ದ ಲಾರಿಯು ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು, ಮುಂದೆಯೇ ಇದ್ದ ಬೈಕ್, ಹೈವೆ ಪೆಟ್ರೋಲ್ ವಾಹನ ಸೇರಿದಂತೆ ಒಟ್ಟು ನಾಲ್ಕು ಬೈಕುಗಳಿಗೆ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಓರ್ವ ಬೈಕ್ ಸವಾರ ನಾಗೇಂದ್ರ ಮಹಾಲೆ ಅವರ ತಲೆ ಭಾಗಕ್ಕೆ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನಿತರ ಬೈಕ್ ಸವಾರರು ಹಾಗೂ ಹೈವೆ ಪಟ್ರೋಲ್ ವಾಹನದಲ್ಲಿದ್ದ ಪೊಲೀಸರು ದೊಡ್ಡ ಅಪಾಯದಿಂದ ಪಾರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ನಿರ್ವಹಣೆ ತಂಡವು ಅಪಘಾತಗೊಂಡಿದ್ದ ಲಾರಿಯನ್ನು ಮೇಲೆತ್ತು ಸಂದರ್ಭ ಒಂದು ಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ ಕ್ರೇನ್ ಮೂಲಕ ಕೆಲಸ ಮಾಡಲಾಗುತ್ತಿತ್ತು. ಇದೇ ವೇಳೆಗೆ ರಬ್ಬರ್ ತುಂಬಿದ ಲಾರಿ ಕೇರಳದಿಂದ ಮಹಾರಾಷ್ಟ್ರದ ಕಡೆಗೆ ತೆರಳುತ್ತಿದ್ದು, ಒತ್ತಿನಣೆಯ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ಎದುರಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಸರಣಿ ಅಪಘಾತದ ನಡುವೆಯೂ ಭಾರಿ ದುರಂತವೂ ತಪ್ಪಿಹೊಗಿದೆ.

ಘಟನಾ ಸ್ಥಳಕ್ಕೆ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಸೇರಿದಂತೆ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
















