ಕೊಲ್ಲೂರು: ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕ ಪದ್ಮಭೂಷಣ ಡಾ. ಕೆ.ಜೆ.ಜೇಸುದಾಸ್ ತಮ್ಮ 76ನೇ ಹುಟ್ಟುಹಬ್ಬದ ಪ್ರಯುಕ್ತ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ, ಚಂಡಿಕಾ ಹೋಮ ನೆರವೇರಿಸಿದರು.
ಪತ್ನಿ ಪ್ರಭಾ ದಾಸ್ ಅವರೊಂದಿಗೆ ಭಾನುವಾರ ಬೆಳಿಗ್ಗೆ ದೇವಸ್ಥಾನಕ್ಕೆ ಆಗಮಿಸಿದ ಅವರು ಕ್ಷೇತ್ರದ ಹಿರಿಯ ಅರ್ಚಕರಾದ ಎನ್.ಗೋವಿಂದ ಅಡಿಗ ಹಾಗೂ ತಂತ್ರಿ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿಗಳನ್ನು ನೆರವೇರಿಸಿ, ಬಳಿಕ ಶ್ರೀದೇವಿಯ ದರ್ಶನ ಪಡೆದರು. ತಮ್ಮ ನೆಚ್ಚಿನ ಗಾಯಕ ಜೇಸುದಾಸ್ ಅವರ ಹುಟ್ಟು ಹಬ್ಬದ ಆಚರಣೆಗಾಗಿ ಕೇರಳ ಹಾಗೂ ವಿವಿಧೆಡೆಗಳಿಂದ ಸಾವಿರಾರು ಅಭಿಮಾನಿಗಳು ಕೊಲ್ಲೂರಿಗೆ ಬಂದಿದ್ದರು. 1967 ನೇ ಇಸವಿಯಿಂದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಿಯ ಭಕ್ತರಾಗಿರುವ ಅವರು 1972 ರಿಂದ ಪ್ರತಿ ವರ್ಷದ ಜನವರಿ 10 ರಂದು ದೇವಳಕ್ಕೆ ಭೇಟಿ ನೀಡಿ, ಚಂಡಿಕಾಹೋಮ ನೆರವೇರಿಸಿದ ಬಳಿಕ ಸಂಗೀತ ಕಛೇರಿ ನೀಡುವ ಪರಿಪಾಠವಿಟ್ಟುಕೊಂಡಿದ್ದಾರೆ.
ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಡಾ.ಜೇಸುದಾಸ್ ಹಾಗೂ ಪ್ರಭಾ ಜೇಸುದಾಸ್ ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಿದರು. ದೇಗುಲದ ಕಾರ್ಯನಿರ್ವಹಣಾಧಿಕಾರಿ ಟಿ. ಆರ್, ಉಮಾ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಅಧೀಕ್ಷಕ ರಾಮಕೃಷ್ಣ ಅಡಿಗ ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯ ಜಯಾನಂದ ಹೋಬಳಿದಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.