ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ತಾಲೂಕು ಎಲ್ಲದಕ್ಕೂ ಆದರ್ಶ ಮಾದರಿ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ವ್ಯವಸ್ಥಿತವಾಗಿ ಶಿಸ್ತುಬದ್ಧವಾಗಿ ಮದ್ಯವರ್ಜನ ಶಿಬಿರಗಳನ್ನು ರೂಪಿಸಿದ್ದಾರೆ. ಹೆಗ್ಗಡೆ ಅವರ ದೂರದೃಷ್ಟಿತ್ವದ ಫಲವಾಗಿ ಕಳೆದ ಎರಡು ದಶಕಗಳಿಂದ ಅನೇಕ ಮನೆಗಳು ಬೆಳಗಿವೆ. ಇಡೀ ದೇಶಕ್ಕೆ ವಿಶ್ವಕ್ಕೆ ಮಾದರಿಯಾದ ಕಾರ್ಯಕ್ರಮಗಳನ್ನು ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಾಡಿದ್ದಾರೆ. ಅವರು ಮಾಡಿದ ಸಾಧನೆಯನ್ನು ಯಾರೂ ಮಾಡಲು ಸಾಧ್ಯವಿಲ್ಲ ಎಂದು ಕುಂದಪ್ರಭ ಸಂಪಾದಕ ಯು.ಎಸ್. ಶೆಣೈ ಹೇಳಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕುಂದಾಪುರ- 1, ಕುಂದಾಪುರ- 2 ಮತ್ತು ಬೈಂದೂರು ತಾಲೂಕು ಮತ್ತು ಜನಜಾಗೃತಿ ವೇದಿಕೆ ಕುಂದಾಪುರ ಹಾಗೂ ಬೈಂದೂರು ತಾಲೂಕು ಇದರ ಜಂಟಿ ಆಶ್ರಯದಲ್ಲಿ ಕುಂದಾಪುರದ ನಾರಾಯಣ ಗುರು ಸಭಾಂಗಣದಲ್ಲಿ ಶನಿವಾರ ಜರಗಿದ ನವಜೀವನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ಮತ್ತು ಜನಜಾಗೃತಿ ವೇದಿಕೆ ಸದಸ್ಯ ರಾಮಕಿಶನ್ ಹೆಗ್ಡೆ ಶುಭ ಹಾರೈಸಿದರು. ನವಜೀವನ ಸಮಿತಿ ಸದಸ್ಯರಾದ ಜಯರಾಮ ಪೂಜಾರಿ ಹಳ್ಳಿಹೊಳೆ, ವಾಸುದೇವ ಆಚಾರಿ ತ್ರಾಸಿ, ಚಂದ್ರ ಖಾರ್ವಿ ಕೋಡಿ, ಪ್ರದೀಪ ಪೂಜಾರಿ ಕುಂದಾಪುರ ಅನಿಸಿಕೆ ವ್ಯಕ್ತಪಡಿಸಿದರು. ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಮಹಾಬಲೇಶ್ವರ ಆಚಾರ್ಯ, ಜನಜಾಗೃತಿ ವೇದಿಕೆ ಸದಸ್ಯರಾದ ಗೋಪಾಲ ಕಾಂಚನ್, ಜಗದೀಶ ಆಚಾರ್ಯ, ರಾಜೇಶ ಕಡ್ಗಿಮನೆ, ಬಿ.ರಾಘವೇಂದ್ರ ಪೈ, ಮಂಜು ಬಿಲ್ಲವ, ಎಂ.ಆರ್.ಶೆಟ್ಟಿ, ಸುಂದರ ಕೊಠಾರಿ, ಒಕ್ಕೂಟದ ಮಾಜಿ ಅಧ್ಯಕ್ಷ ಉದಯ, ಕುಂದಾಪುರ ತಾಲೂಕು ಯೋಜನಾಧಿಕಾರಿ ಸುಧೀರ್, ಶಿಬಿರಾಧಿಕಾರಿ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಬೈಂದೂರು ತಾಲೂಕು ಯೋಜನಾಧಿಕಾರಿ ಸಂಜಯ್ ನಾಯ್ಕ್ ಸ್ವಾಗತಿಸಿದರು. ಕುಂದಾಪುರ ತಾಲೂಕು ಯೋಜನಾಧಿಕಾರಿ ಉಮೇಶ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಜನಜಾಗೃತಿ ವೇದಿಕೆ ಮೇಲ್ವಿಚಾರಕ ಉದಯ ವಂದಿಸಿದರು.











