ವಿಶೇಷ ವರದಿ: ಚಂದ್ರ ಕೆ. ಹೆಮ್ಮಾಡಿ. || ಕುಂದಾಪ್ರ ಡಾಟ್ ಕಾಂ |
ಕಣ್ಮನ ಸೆಳೆಯುವ ಬಣ್ಣ, ಘಮಘಮ ಸುವಾಸನೆ, ಮೋಹಕ ಚೆಲುವು, ಗಾತ್ರ ಚಿಕ್ಕದಾದರೂ ಹೆಚ್ಚು ಬಾಳಿಕೆಯ ಗುಣ-ವೈಶಿಷ್ಟ್ಯಗಳಿಂದಾಗಿ ಕರಾವಳಿ ಭಾಗದಲ್ಲಿ ಪ್ರಸಿದ್ಧವಾದ ವಾರ್ಷಿಕ ಬೆಳೆ ಹೆಮ್ಮಾಡಿ ಸೇವಂತಿ ಹೂವುಗಳು ಈ ಹಳ್ಳಿಯ ರೈತರ ಗದ್ದೆಗಳಲ್ಲಿ ಅರಳಿ ಊರೆಲ್ಲಾ ಘಮಘಮ ಪರಿಮಳ ಬೀರುತ್ತಿವೆ.
ಹೆಮ್ಮಾಡಿ ಗ್ರಾಮದ ಆಸುಪಾಸಿನಲ್ಲಿ ಮಾತ್ರ ಬೆಳೆಯಲಾಗುವ ವಿಶಿಷ್ಟ ಪುಷ್ಪವೇ ಹೆಮ್ಮಾಡಿ ಸೇವಂತಿ. ಗ್ರಾಮದ ಕಟ್ಟು, ಹೊಸ್ಕಳಿ, ಹರೆಗೋಡು, ಮೂಡಾಡಿ ಮೊದಲಾದೆಡೆಯ ನೂರಾರು ಬೆಳೆಗಾರರು ತಮ್ಮ ಗದ್ದೆಗಳಲ್ಲಿ ಪಾರಂಪರಿಕವಾಗಿ ಸೇವಂತಿಯನ್ನು ಬೆಳೆಯುತ್ತಿದ್ದಾರೆ. ಜುಲೈ ತಿಂಗಳಿನಿಂದಲೇ ಸೇವಂತಿ ಸಸ್ಯ ಸಂವರ್ಧನೆಯ ಕಾಯಕ ಆರಂಭವಾಗುತ್ತದೆ. ನಂತರ ಹಂತಹಂತವಾಗಿ ಗೊಬ್ಬರ ಉಪಚಾರ, ಔಷಧೋಪಚಾರ, ಕಳೆನಿಯಂತ್ರಣ ಮೊದಲಾದ ಕಾರ್ಯಗಳು ಪೂರ್ಣಗೊಂಡು ನಳನಳಿಸುವ ಅಂದಗಾತಿ ಸೇವಂತಿ ಪುಷ್ಪವು ಕೃಷಿಕರ ಬುಟ್ಟಿಯನ್ನು ಹಾಗೂ ತುತ್ತಿನ ಬುತ್ತಿಯನ್ನು ತುಂಬುವುದು ದಶಂಬರ-ಜನವರಿ ತಿಂಗಳ ಸಮಯದಲ್ಲಿ. (ಕುಂದಾಪ್ರ ಡಾಟ್ ಕಾಂ ಸುದ್ದಿ)
ಮುಂದಿನ ಮೂರು ತಿಂಗಳು ಇಲ್ಲಿನ ರೈತರಿಗೆ ಸೇವಂತಿಯ ಸುಗ್ಗಿ. ಔಷಧೋಪಚಾರವೂ ಸೇರಿದಂತೆ ಸೇವಂತಿ ಬೆಳೆಯಲು ಪ್ರತೀ ಎಕರೆಗೆ ಸುಮಾರು 50 ಸಾವಿರ ರೂಪಾಯಿಗಳಿಗೂ ಅಧಿಕ ವೆಚ್ಚ ತಗಲುತ್ತದೆ. ಪ್ರತೀ ಎಕರೆಗೆ ತಲಾ 5 ಲಕ್ಷ ಹೂಗಳು ಸಿಗುವಂತಾದರೆ ತಮ್ಮ ಪರಿಶ್ರಮದ ದುಡಿಮೆಗೆ ತಕ್ಕ ಬೆಲೆ ಸಿಕ್ಕಿದಂತಾಗುತ್ತದೆ. ಒಂದು ಸಾವಿರ ಸೇವಂತಿಗೆ ಕನಿಷ್ಟ ರೂ. 50 ರಿಂದ 100 ಸಿಕ್ಕಿದರೆ ಹಾಕಿದ ದುಡ್ಡು ಕೈಗೆ ಬರಬಹುದು. ಈ ವರ್ಷ ಹೆಮ್ಮಾಡಿ ಸೇವಂತಿಗೆ ಆರಂಭಿಕವಾಗಿ ರೂ. 100 ದರ ಲಭಿಸುತ್ತಿದೆ. ಆದರೆ ನುಸಿಬಾಧೆಯಿಂದಾಗಿ ಸಾಕಷ್ಟು ಹೂಗಳು ಹಾಳಾಗುತ್ತಿರುವುದರಿಂದಾಗಿ ರೈತರಿಗೆ ನಷ್ಟವಾಗುತ್ತಿದೆ ಎನ್ನುವುದು ಇಲ್ಲಿನ ಸೇವಂತಿ ಬೆಳೆಗಾರರ ಅಳಲು. (ಕುಂದಾಪ್ರ ಡಾಟ್ ಕಾಂ ಸುದ್ದಿ)
ಗೆಂಡ-ಜಾತ್ರೆಗಳಿಗೆ ಬೇಡಿಕೆ:
ಕರಾವಳಿಯ ಮಂಗಳೂರು, ಉಡುಪಿ, ಕುಂದಾಪುರ, ಭಟ್ಕಳ, ಹೊನ್ನಾವರ ಮೊದಲಾದೆಡೆ ಬಹುಬೇಡಿಕೆಯಿರುವ ಹೆಮ್ಮಾಡಿ ಸೇವಂತಿ ವಿಶೇಷವಾಗಿ ಸಂಕ್ರಮಣ ಉತ್ಸವದಿಂದ ಮೊದಲ್ಗೊಂಡು ಗೆಂಡ, ಜಾತ್ರೆ ಮೊದಲಾದ ಧಾರ್ಮಿಕ ಉತ್ಸವಗಳಿಗೆ ಸಾಷಕ್ಟು ಬೇಡಿಕೆ ಪಡೆದ ಹೂವು. ಅದರಲ್ಲೂ ದೈವಸ್ಥಾನಗಳಲ್ಲಿ ಜರುಗುವ ನೇಮೋತ್ಸವಗಳಿಗೆ ಊರ ಹೂವಿನ ಸೇವೆಯನ್ನು ಭಕ್ತರು ಹೆಚ್ಚಾಗಿ ಅವಲಂಬಿಸಿದ್ದರಿಂದ ಹೆಮ್ಮಾಡಿ ಸೇವಂತಿಯ ಬೇಡಿಕೆ ಯಾವತ್ತೂ ಕುಂದಿಲ್ಲ. ಮಾರಣಕಟ್ಟೆ, ಕಟ್ಕೆರೆ, ಕೈಪಡಿ, ಕೊಮೆ, ಹಿಜಾಣ, ಯಡಮಕ್ಕಿ, ಆನಗಳ್ಳಿ ಮೊದಲಾದೆಡೆ ಗೆಂಡ ಹಾಗೂ ಜಾತ್ರಾ ಮಹೋತ್ಸವಗಳಿಗೆ ಹೆಚ್ಚಾಗಿ ಪೂರೈಕೆಯಾಗುತ್ತದೆ. ಸೇವಂತಿ ಬೆಳೆಗಾರರು ಹೂವುಗಳನ್ನು ಬುಟ್ಟಿಗಳಲ್ಲಿ ಹೊತ್ತೊಯ್ದು ಮಾರಾಟ ಮಾಡುತ್ತಾರೆ.
ಬ್ರಹ್ಮಲಿಂಗೇಶ್ವರನಿಗೆ ಬಲುಪ್ರಿಯ:
ಹೆಮ್ಮಾಡಿ ಸೇವಂತಿ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವರಿಗೆ ಬಲು ಪ್ರೀತಿಯ ಹೂವು. ಹೆಮ್ಮಾಡಿಯ ಸೇವಂತಿ ಬೆಳೆಗಾರರು ತಮ್ಮ ಗದ್ದೆಗಳಲ್ಲಿ ಮೊದಲು ಅರಳಿದ ಸೇವಂತಿಯನ್ನು ಮಾರಣಕಟ್ಟೆ ದೇವರಿಗೆ ಒಪ್ಪಿಸಿಕೊಂಡು ಬಳಿಕವೇ ಮಾರಾಟಕ್ಕೆ ಹೊರಡುವ ಪದ್ಧತಿಯನ್ನು ಚಾಚೂ ತಪ್ಪದೇ ಪಾಲಿಸಿಕೊಂಡು ಬಂದಿದ್ದಾರೆ. ಮಕರ ಸಂಕ್ರಮಣ ಉತ್ಸವದ ಸಂದರ್ಭದಲ್ಲಿ ಹೆಮ್ಮಾಡಿ ಸೇವಂತಿ ಹೂವುಗಳು ಮಾರಣಕಟ್ಟೆಯತ್ತ ಮುಖಮಾಡಿ ಅರಳುತ್ತವೆ ಎಂದು ರೈತರು ಹೇಳುತ್ತಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)
ಸಹಾಯಧನ ಇಲ್ಲ:
ತೋಟಗಾರಿಕಾ ಇಲಾಖೆಯಿಂದ ಹೆಮ್ಮಾಡಿ ಸೇವಂತಿ ಬೆಳೆಗಾರರಿಗೆ 2006ರಲ್ಲಿ ಸಹಾಯಧನ ಮಂಜೂರು ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಸತತ ಎರಡು ವರ್ಷಗಳ ಕಾಲ ಒಂದಷ್ಟು ಫಲಾನುಭವಿಗಳಿಗೆ ಸಹಾಯಧನ ಲಭಿಸಿದೆ. ಆದರೆ ಕಳೆದ 8 ವರ್ಷಗಳಿಂದ ಸೇವಂತಿ ಬೆಳೆಗಾರರಿಗೆ ಸಹಾಯಧನ ದೊರಕುತ್ತಿಲ್ಲ ಎನ್ನಲಾಗಿದೆ. ಗ್ರಾಮೀಣ ಸೊಗಡಿನ ಈ ವಿಶಿಷ್ಟ ಪುಷ್ಪಕೃಷಿಗೆ ಎರವಾದ ಪ್ರಾಕೃತಿಕ ವಿಕೋಪದಿಂದ ತತ್ತರಿಸಿದ ರೈತರ ಸಂಕಷ್ಟಕ್ಕೆ ಸರಕಾರೀ ಇಲಾಖೆಗಳ ಹೆಚ್ಚಿನ ಸ್ಪಂದನವೂ ದೊರಕದಿರುವುದು ಹೆಮ್ಮಾಡಿ ಸೇವಂತಿ ಬೆಳೆಗಾರರ ಆತ್ಮವಿಶ್ವಾಸವನ್ನು ಕುಗ್ಗಿಸಿದೆ. ಪ್ರಾದೇಶಿಕ ಸೊಗಡಿನ ಈ ವಿಶಿಷ್ಟ ಪುಷ್ಪ ಕೃಷಿಗೆ ಸರಕಾರ ಆರ್ಥಿಕ ಬೆಂಬಲ ನೀಡಬೇಕು ಎಂದು ಹೆಮ್ಮಾಡಿ ಸೇವಂತಿ ಬೆಳೆಗಾರರು ಹಂಬಲಿಸಿದ್ದಾರೆ.
ಸಂಶೋಧನೆ-ಸಂವರ್ಧನೆ ನಡೆಯಲಿ:
ಪ್ರಾದೇಶಿಕ ವೈಶಿಷ್ಟ್ಯವನ್ನು ಹೊಂದಿದ ಹೆಮ್ಮಾಡಿ ಸೇವಂತಿಯಂತಹ ವಿಶೇಷ ಪುಷ್ಪ ತಳಿಯ ಕುರಿತು ಸಂಶೋಧನೆ ಮತ್ತು ಸಂವರ್ಧನೆಯ ಪ್ರಯತ್ನಗಳು ಹೆಚ್ಚಾಗಿ ನಡೆದಿಲ್ಲ. ಕೃಷಿ, ತೋಟಗಾರಿಕೆ ಮೊದಲಾದ ಇಲಾಖೆಗಳಾಗಲೀ, ಕೃಷಿ ಸಂಶೋಧನಾ ಕೇಂದ್ರಗಳಾಗಲೀ, ಕೃಷಿ ಆಸಕ್ತ ಸಂಘ-ಸಂಸ್ಥೆಗಳಾಗಲೀ ಹೆಮ್ಮಾಡಿ ಸೇವಂತಿಯಂತಹ ವಿಶಿಷ್ಟ ಪುಷ್ಪತಳಿಯ ಸಂಶೋಧನೆ, ಸಂವರ್ಧನೆಗೆ ಮುಂದಾಗಿಲ್ಲ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಕಳೆದ ಕೆಲವು ವರ್ಷಗಳಿಂದ ನುಸಿಬಾಧೆಗೆ ನಲುಗಿದ ಈ ವಿಶಿಷ್ಟ ಪುಷ್ಪತಳಿಯ ಸಮಸ್ಯೆಯನ್ನು ನಿವಾರಿಸುವ ದಿಸೆಯಲ್ಲಿ ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ಕೃಷಿಸಂಶೋಧಕರು, ವಿಜ್ಞಾನಿಗಳು ಸಾಕಷ್ಟು ಗಮನಹರಿಸಿಲ್ಲ.
► ಇದನ್ನೂ ಓದಿ:
ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಇತಿಹಾಸ, ಮಾಹಿತಿ – http://kundapraa.com/?p=1508
[box type=”custom” color=”#ff0547″ bg=”#ffffff” fontsize=”15″ radius=”5″ border=”#1e73be”]Note: ಮೇಲಿನ ಲೇಖನದ ಸಂಪೂರ್ಣ ಹಕ್ಕುಗಳು ಲೇಖಕರದ್ದಾಗಿರುತ್ತದೆ. ಅವರ ಅನುಮತಿ ವಿನಃ ಕಾಪಿ ಮಾಡಿದರೇ ಕಾಪಿರೈಟ್ ನಿಮಯದ ಅನುಸಾರ ಕಾನೂನು ರಿತ್ಯಾ ಕ್ರಮ ಎದುರಿಸಬೇಕಾದಿತು. ಶೇರ್ ಮಾಡಲು ಮಾತ್ರ ಅವಕಾಶವಿದೆ. – ಕುಂದಾಪ್ರ ಡಾಟ್ ಕಾಂ [/box]