ಕುಂದಾಪುರ: ಸಾವಿರಾರು ವರ್ಷಗಳ ಇತಿಹಾಸವಿರುವ ಭಾರತ ಉಪಖಂಡದಲ್ಲಿ ವೈವಿಧ್ಯಮಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬದುಕುತ್ತಿರುವ ನಮಗೆ ಭಾರತೀಯ ಸಮುದಾಯದ ಯಾವ ದಿಕ್ಕಿನತ್ತ ಸಾಗುತ್ತದೆ ಎಂಬುದನ್ನು ಪುನರ್ ಪರಿಶೀಲನೆಗೆ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಒದಗಿಬಂದಿದೆ. ಪೂರಕವಾಗಿ ಭಾರತೀಯ ಸಾಹಿತ್ಯ ಮತ್ತು ಭಾಷೆಯ ಅಧ್ಯಯನ ಬಹಳ ಮುಖ್ಯವಾಗಿದೆ ಎಂದು ಪ್ರಸಿದ್ಧ ಲೇಖಕ ಪ್ರೊ.ಟಿ.ಪಿ.ಅಶೋಕ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಣಿಪಾಲ ವಿಶ್ವವಿದ್ಯಾಲಯದ ಡಾ. ಟಿ.ಎಂ.ಎ ಪೈ ಭಾರತೀಯ ಸಾಹಿತ್ಯ ಪೀಠ ಮತ್ತು ಕಾಲೇಜಿನ ಡಾ.ಹೆಚ್. ಶಾಂತಾರಾಂ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆಯ ಸಹಯೋಗದಲ್ಲಿ ಭಾರತೀಯ ಕಥನ ಸಾಹಿತ್ಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವೈವಿಧ್ಯಮಯ ಸಾಂಸ್ಕೃತಿಕ ಹಿನ್ನೆಲೆಯ ಭಾರತೀಯ ಸಾಹಿತ್ಯದಲ್ಲಿ ಈ ಹಿಂದೆ ಭಾಷೆಗಳಲ್ಲಿ ಭಿನ್ನತೆ ಇರಲಿಲ್ಲ. ಕನಿಷ್ಠ ಎರಡರಿಂದ ಮೂರು ಭಾಷೆಗಳ ಜ್ನಾನ ಇರುತ್ತಿತ್ತು. ಕಾಲಕಳೆದಂತೆ ವಸಾಹತುಷಾಹಿ ಇಂಗ್ಲೀಷ್ ಭಾಷೆಯ ಪ್ರಭಾವಕ್ಕೆ ಸಿಲುಕಿ ಕೇವಲ ಇಂಗ್ಲೀಷ್ ಬಿಟ್ಟರೆ ನಮ್ಮ ಭಾಷೆ ಮಾತ್ರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಭಾಷಾವಾರು ಪ್ರಾಂತ್ಯ ವಿಂಗಡಣೆಯು ಕೂಡ ನಾವು ಅಖಂಡ ಭಾರತೀಯ ಸಾಹಿತ್ಯವನ್ನು ಅರಿಯುವಲ್ಲಿ ಪ್ರತಿಕೂಲ ಪರಿಣಾಮವನ್ನು ಬೀರಿದೆ. ಭಾರತದ ವಿಭಜನೆಯ ಪ್ರಭಾವ ಉತ್ತರಭಾರತದ ಸಾಹಿತ್ಯದ ಮೇಲೆ ಬೀರಿರುವುದನ್ನು ಅಲ್ಲಿನ ಸಾಹಿತ್ಯದ ಓದಿನಿಂದ ನಾವು ನೋಡುತ್ತಿದ್ದೇವೆ. ಆದರೆ ಅನುಭವಗಳಲ್ಲಿ ಗಮನಿಸಿದಂತೆ ಭಾರತೀಯ ಸಾಹಿತ್ಯ ವನ್ನು ಅರಿತುಕೊಳ್ಳುವುದಕ್ಕೆ ನಮ್ಮ ಮನಸ್ಸುಗಳು ತೆರೆದುಕೊಳ್ಳಬೇಕಾಗಿದೆ. ಆ ಮುಖಾಂತರ ಒಡೆದುಹೋಗುತ್ತಿರುವ ಮನಸುಗಳನ್ನು ಸರಿಪಡಿಸಲು ಸಾಧ್ಯವಾಗಬಹುದು. ಸಾಹಿತ್ಯವನ್ನು ಅರ್ಥೈಸಿಕೊಳ್ಳುವುದರ ಮೂಲಕ ಒಟ್ಟಾರೆ ಸಂಸ್ಕೃತಿಯನ್ನು ಗೆಲ್ಲುವ ಪ್ರಯತ್ನ ಮಾಡಬಹುದು ಎಂದು ಅವರು ಹೇಳಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ವಹಿಸಿದ್ದರು.
ಮಣಿಪಾಲ ವಿಶ್ವವಿದ್ಯಾಲಯದ ಡಾ. ಟಿ.ಎಂ.ಎ ಪೈ ಭಾರತೀಯ ಸಾಹಿತ್ಯ ಪೀಠದ ಸಂಚಾಲಕರಾದ ಡಾ.ವರದೇಶ ಹಿರೆಗಂಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು. ಕಾಲೇಜಿನ ಡಾ.ಹೆಚ್. ಶಾಂತಾರಾಂ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆಯ ಸಂಚಾಲಕಿ ಡಾ.ರೇಖಾ ಬನ್ನಾಡಿ ವಂದಿಸಿದರು. ವಿದ್ಯಾರ್ಥಿನಿ ಚೈತ್ರ ಕಾರ್ಯಕ್ರಮ ನಿರ್ವಹಿಸಿದರು.