ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಂದು ಸ್ವಚ್ಚತಾ ಆಂದೋಲನ ಕೇವಲ ಪ್ರಚಾರಕ್ಕಾಗಿ ಮಾತ್ರ ನಡೆಯುತ್ತಿದೆ. ಘನತ್ಯಾಜ್ಯಗಳ ಸಮರ್ಪಕ ವಿಲೇವಾರಿ ನಡೆದಾಗ ಮಾತ್ರ ನಗರಗಳ ನೈರ್ಮಲ್ಯ ಹೆಚ್ಚಿಸಲು ಸಾಧ್ಯವಾಗುವುದರ ಜೊತೆಗೆ ಮುಂದಿನ ಪೀಳಿಗೆಗೂ ಉತ್ತಮ ಸಮಾಜವನ್ನು ಕಟ್ಟಕೊಡಲು ಸಾಧ್ಯವಿದೆ ಎಂದು ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಟ ಶೆಟ್ಟಿ ಹೇಳಿದರು.
ಅವರು ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ವತಿಯಿಂದ ನಡೆದ “ಸ್ವಚ್ಚತಾ ಆಂದೋಲನದಲ್ಲಿ ನಾಗರಿಕರ ಪಾತ್ರ” ಕುರಿತು ಮಾತನಾಡುತ್ತಿದ್ದರು.
ಕುಂದಾಪುರ ಪುರಸಭೆಯ ವ್ಯಾಪ್ತಿಯಲ್ಲಿ ಸುಮಾರು ೩೦,೦೦೦ ಜನವಸತಿ ಇದ್ದು, ಸುಮಾರು ೧೫ ಟನ್ ಕಸ ಉತ್ಪತ್ತಿಯಾಗುತ್ತಿದೆ. ಈ ತ್ಯಾಜ್ಯವನ್ನು ಬಳಸಿಕೊಂಡು ಗೊಬ್ಬರ ತಯಾರಿಸುವ ಘಟಕವನ್ನು ಪುರಸಭೆ ಉತ್ತಮವಾಗಿ ನಿರ್ವಹಿಸುತ್ತಿದೆ. ಇದು ಹೀಗೆಯೇ ಮುಂದುವರಿಯಲು ಸಾರ್ವಜನಿಕರ ಸಹಕಾರ ಅತೀ ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ರೋಟರಿ ದಕ್ಷಿಣದ ಅಧ್ಯಕ್ಷ ವಾಸುದೇವ ಕಾರಂತ ವಹಿಸಿದ್ದರು. ಪ್ರಾರ್ಥನೆಯನ್ನು ಶ್ರೀನಿವಾಸ ಶೇಟ್ ನೇರವೇರಿಸಿದರು. ಕಾರ್ಯದರ್ಶಿ ರೊ ಸುರೇಶ ಮಲ್ಯ ವಾರದ ವರದಿಯನ್ನು ಮಂಡಿಸಿದರು. ರೋಟರಿ ಮಾಹಿತಿಯನ್ನು ನಿಕಟಪೂರ್ವ ಅಧ್ಯಕ್ಷಕೆ.ಪಾಂಡುರಂಗ ಭಟ್ ನೀಡಿದರು. ಮುಖ್ಯ ಅತಿಥಿಗಳನ್ನು ಉಮೇಶ ಕುಂದಾಪುರ ಪರಿಚಯಿಸಿದರು. ಜೋನ್ಸನ ಅಲ್ಮೇಡ ದನ್ಯವಾದ ಸಮರ್ಪಿಸಿದರು.