ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತ್ರಾಸಿಯ ಮೊವಾಡಿ ಕ್ರಾಸ್ ಬಳಿ ನಡೆದ ಸ್ಕೂಲ್ ವ್ಯಾನ್ ಹಾಗೂ ಬಸ್ ನಡುವಿನ ಅಫಘಾತದಲ್ಲಿ ಮಡಿದ ಡಾನ್ ಬಾಸ್ಕೊ ಶಾಲೆಯ ಎಂಟು ಮಕ್ಕಳ ಪೈಕಿ ಐವರು ಮಕ್ಕಳ ಅಂತ್ಯಕ್ರಿಯೆ ಧಾರ್ಮಿಕ ವಿಧಿಗಳು ಬೆಳಿಗ್ಗೆ ಗಂಗೊಳ್ಳಿಯ ಚರ್ಚಿನಲ್ಲಿ ನಡೆದರೇ, ಮೂವರು ಮಕ್ಕಳ ಅಂತ್ಯಕ್ರಿಯೆ ಸಂಜೆ ತಲ್ಲೂರು ಚರ್ಚಿನಲ್ಲಿ ನಡೆಯಿತು. ಗಂಗೊಳ್ಳಿ ಚರ್ಚಿನ ಆವರಣದಲ್ಲಿ ನೆರೆದಿದ್ದ ಎರಡು ಸಾವಿರಕ್ಕೂ ಅಧಿಕ ಜನರು ಮೃತ ಮಕ್ಕಳ ಅಂತಿಮ ದರ್ಶನ ಪಡೆದರು. ಹೆಮ್ಮಾಡಿ, ತ್ರಾಸಿ, ಗಂಗೊಳ್ಳಿ, ತಲ್ಲೂರು ಮೊದಲಾದೆಡೆ ಜನರು ಶೋಕ ಸಾಗರದಲ್ಲಿ ಮುಳುಗಿರುವುದು ಕಂಡುಬಂತು. ದೇವರು, ಧರ್ಮದ ಪರಿವೆ ಇಲ್ಲದೇ ಮೃತ ಮಕ್ಕಳನ್ನು ಕಂಡ ಪ್ರತಿಯೊಬ್ಬರ ಕಂಗಳೂ ಕಂಬನಿ ಮಿಡಿಯುತ್ತಿದ್ದವು.
ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೋ ಧಾರ್ಮಿಕ ಪ್ರಕ್ರಿಯೆ ನೆರವೇರಿಸಿದರು. ಕುಂದಾಪುರ ಚರ್ಚಿನ ಧರ್ಮಗುರು ಅನಿಲ್ ಡಿಸೋಜಾ, ಗಂಗೊಳ್ಳಿ ಚರ್ಚಿನ ಧರ್ಮಗುರು ಅಲ್ಬರ್ಟ್ ಕ್ರಾಸ್ಟಾ ಸಂತಾಪ ಸೂಚಿಸಿದರು. ಉಡುಪಿ ಧರ್ಮಪ್ರಾಂತ್ಯದ ಎಲ್ಲಾ ಚರ್ಚಿನ ಧರ್ಮಗುರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಗಣ್ಯರ ಅಂತಿಮ ದರ್ಶನ:
ಉಡುಪಿ ಚಿಕ್ಕಮಂಗಳೂರು ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ, ಶಾಸಕ ವಿನಯಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಜಿ.ಪಂ ಸದಸ್ಯರುಗಳಾದ ಶಂಕರ ಪೂಜಾರಿ, ಶೋಭಾ ಜಿ. ಪುತ್ರನ್, ಬಿಜೆಪಿ ಜಿಲ್ಲಾಧ್ಯಕ್ಷ ಮುಟ್ಟಾರು ರತ್ನಾಕರ ಹೆಗ್ಡೆ, ಮಕ್ಕಳ ಆಯೋಗದ ಸದಸ್ಯ ವನಿತಾ ತೋರ್ವಿ, ಜಿಪಂ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಬೈಂದೂರು ಬಿಜೆಪಿ ಕ್ಷೇತ್ರಾಧ್ಯಕ್ಷ ಸುಕುಮಾರ್ ಶೆಟ್ಟಿ, ಎಸ್ಪಿ ಅಣ್ಣಾಮಲೈ, ಡಿವೈಎಸ್ಪಿ ಮಂಜುನಾಥ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಅಧಿಕಾರಿಗಳು ಮೃತ ಮಕ್ಕಳ ಅಂತಿಮ ದರ್ಶನ ಪಡೆದರು.
ತ್ರಾಸಿಯಲ್ಲಿ ನಡೆದ ಭೀಕರ ಅಫಘಾತದಲ್ಲಿ ನಿಖಿತಾ, ಅನನ್ಯಾ, ರಾಯಸ್ಟನ್, ಕ್ಯಾಲಿಸ್ಟಾ, ಕ್ಲಾರಿಷಾ, ಅಲ್ವಿತಾ, ಆನ್ಸಿತಾ ಹಾಗೂ ಡೆಲ್ವಿನ್ ದಾರುಣವಾಗಿ ಮೃತಪಟ್ಟು, ಹತ್ತು ವಿದ್ಯಾರ್ಥಿಗಳು, ಓರ್ವ ಶಿಕ್ಷಕಿ ಹಾಗೂ ಚಾಲಕ ಗಂಭೀರವಾಗಿ ಗಾಯಗೊಂಡಿದ್ದರು.