ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯಕ್ಷಗಾನ, ರಂಗಭೂಮಿ ಮುಂತಾದ ಕಲಾ ಪ್ರಕಾರಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಮಾಡಿದರೇ ಮಕ್ಕಳು ದಾರಿ ತಪ್ಪುವ ಪ್ರಮೇಯ ಕಡಿಮೆಯಾಗುವುದಲ್ಲದೇ ಶೈಕ್ಷಣಿಕವಾಗಿಯೂ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಜಿ.ಪಂ ಸದಸ್ಯ ಶಂಕರ ಪೂಜಾರಿ ಹೇಳಿದರು.
ಬುಧವಾರ ಸಂಚಲನ ರಿ. ಹೊಸೂರು ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ ಬೈಂದೂರು ಗ್ರಾಪಂ ವ್ಯಾಪ್ತಿಯ ಹೊಸೂರಿನ ಹೊಂಗಿರಣ ರಂಗಮಂದಿರದಲ್ಲಿ ನಾಲ್ಕು ದಿನಗಳ ಕಾನನದೊಳಗೊಂದು ರಂಗಸುಗ್ಗಿ ‘ಶರತ್ ರಂಗ ಸಂಚಲನ-2016’ರ ಕಾರ್ಯಕ್ರಮದಲ್ಲಿ ಸಮಾರೋಪ ನುಡಿಗಳನ್ನಾಡಿದರು. ಗ್ರಾಮೀಣ ಭಾಗದಲ್ಲಿ ಸತತವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿ ಮನೋರಂಜನೆಯೊಂದಿಗೆ ಸಾಂಸ್ಕೃತಿಕ ಅರಿವು ಮೂಡಿಸುವ ಕಾರ್ಯ ನಿರಂತವಾಗಿ ನಡೆಯುತ್ತಿರುವುದು ಶ್ಲಾಘನೀಯ. ಈ ಕಾರ್ಯಕ್ಕೆ ಜಿ.ಪಂ ನಿಂದ ಅಗತ್ಯ ನೆರವು ನೀಡುವುದಾಗಿ ಅವರು ಭರವಸೆಯಿತ್ತರು.
ಸುರಭಿ ರಿ. ಬೈಂದೂರು ವ್ಯವಸ್ಥಾಪಕ ಕೃಷ್ಣಮೂರ್ತಿ ಉಡುಪ, ಮುಲ್ಲಿಬಾರು ಸ.ಹಿ.ಪ್ರಾ ಶಾಲೆ ಪ್ರಭಾರ ಮುಖ್ಯೋಪಧ್ಯಾಯ ಗಿರೀಶ್ ಪಿ. ಮೇಸ್ತ, ಸಹಶಿಕ್ಷಕ ರಾಮನಾಥ ಮೇಸ್ತ, ಜೆಸಿಐ ಶಿರೂರು ಸ್ಥಾಪಕಾಧ್ಯಕ್ಷ ಮೋಹನ ರೇವಣ್ಕರ್, ಯಡ್ತರೆ ಗ್ರಾಪಂ ಮಾಜಿ ಸದಸ್ಯ ಕುಪ್ಪ ಮರಾಠಿ ಮೊದಲಾದವರು ವೇದಿಕೆಯಲ್ಲಿದ್ದರು. ಸಂಚಲನ ಹೊಸೂರು ಕಾರ್ಯದರ್ಶಿ ನಾಗಪ್ಪ ಮರಾಠಿ ಸ್ವಾಗತಿಸಿ, ಅಧ್ಯಕ್ಷ ತಿಮ್ಮ ಮರಾಠಿ ವಂದಿಸಿದರು. ಸಂಚಾಲಕ ಸುಧಾಕರ ಪಿ. ಬೈಂದೂರು ನಿರೂಪಿಸಿದರು. ಬಳಿಕ ರಂಗ ಸುರಭಿ ಬಾಲ ಕಲಾವಿದರಿಂದ ಡಾ. ವೆಂಕಟೇಶಮೂರ್ತಿ ರಚಿಸಿದ, ಪೃಥ್ವಿನ ಉಡುಪಿ ನಿರ್ದೇಶನದ ಧರಣಿಮಂಡಲ ಮಧ್ಯದೊಳಗೆ ನಾಟಕ ಪ್ರದರ್ಶನಗೊಂಡಿತು.