ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಲಾವಿದರನ್ನು ಸೃಷ್ಠಿಸುವುದೆಂದರೇ ಉತ್ತಮ ಸಮಾಜವನ್ನು ಸೃಷ್ಠಿಸಿದಂತೆ. ಕಲೆಯ ಮೂಲಕ ಮಾತ್ರ ಸದ್ವಿಚಾರಗಳನ್ನು ಜನರಿಗೆ ತಲುಪಿಸಲು ಹಾಗೂ ಸಮಾಜವನ್ನು ಸದಾ ಜಾಗೃತ ಸ್ಥಿತಿಯಲ್ಲಿಡಲು ಸಾಧ್ಯವಿದೆ ಎಂದು ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ ಹೇಳಿದರು.
ಪರಿಶಿಷ್ಟ ಪಂಗಡದ ಕಲಾವಿದರ ರಂಗತಂಡ ಸಂಚಲನ ರಿ. ಹೊಸೂರು ಆಶ್ರಯದಲ್ಲಿ, ಬೆಂಗಳೂರು ಕರ್ನಾಟಕ ನಾಟಕ ಅಕಾಡೆಮಿ ಸಹಕಾರದೊಂದಿಗೆ ಬೈಂದೂರು ರೋಟರಿ ಭವನದಲ್ಲಿ ಆಯೋಜಿಸಲಾದ ಸತ್ರೂ ಅಂದ್ರೆ ಸಾಯ್ತಾರಾ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಟಿ.ವಿ, ಸಾಮಾಜಿಕ ತಾಣಗಳ ಪ್ರಭಾವದಿಂದಾಗಿ ಯುವಕರು ಜ್ಞಾನವಂತರಾಗುತ್ತಿದ್ದಾರೆ ಆದರೆ ವಿಚಾರವನ್ನು ಅರ್ಥೈಸಿಕೊಳ್ಳುವ ಹಾಗೂ ವಾಸ್ತವವನ್ನು ವಿಮರ್ಷಿಸುವ ಸಾಮಾನ್ಯ ಪ್ರಜ್ಞೆಯನ್ನು ಮರೆಯುತ್ತಿದ್ದಾರೆ. ರಂಗಕಲೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನುಷ್ಯ ಮನುಷ್ಯರ ನಡುವಿನ ಸಂಬಂಧ ಗಟ್ಟಿಗೊಳ್ಳಲು ಸಾಧ್ಯವಿದೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಮೇಶ್ ಸಾಲಿಯಾನ್ ಮಾತನಾಡಿ ಪರಿಶಿಷ್ಟ ಪಂಗಡದವರು ಎಲ್ಲರೊಂದಿಗೆ ಸಮಾನವಾಗಿ ಕೂಡಿ ಬಾಳಲು, ಸಾಂಸ್ಕೃತಿಕವಾಗಿ ಬೆಳೆಯಲು ನಾಟಕ ಅಕಾಡೆಮಿ ಹತ್ತು ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ನಾಟಕ ತರಬೇತಿ ನೀಡಿ ಪರಿಶಿಷ್ಟ ಪಂಗಡದವರಲ್ಲಿನ ಕಲಾಸಕ್ತಿಯನ್ನು ಪ್ರೋತ್ಸಾಹಿಸುವುದಲ್ಲದೇ ಜಾತಿ, ಮತಗಳ ಭೇದವನ್ನು ಮೀರಿ ಬೆಳೆಯಬೇಕು ಎಂಬ ಕಾರಣದಿಂದ ನಾಟಕ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಯಡ್ತರೆ ಗ್ರಾ.ಪಂ ಅಧ್ಯಕ್ಷ ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಬೈಂದೂರು ಅಧ್ಯಕ್ಷ ಮಂಜುನಾಥ ಶೆಟ್ಟಿ, ಮುಲ್ಲಿಬಾರು ಸಹಿಪ್ರಾ ಶಾಲೆ ಮುಖ್ಯೋಪಧ್ಯಾಯ ಗಿರೀಶ್ ಪಿ. ಮೇಸ್ತ, ಕಾಸರಗೋಡು ಅಪೂರ್ವ ಕಲಾತಂಡದ ಸಂಚಾಲಕ ಜಗನ್ನಾಥ ಶೆಟ್ಟಿ, ಸಂಚಲನ ರಿ. ಹೊಸೂರು ಅಧ್ಯಕ್ಷ ತಿಮ್ಮ ಮರಾಠಿ ಮೊದಲಾದವರು ಉಪಸ್ಥಿತರಿದ್ದರು. ಸಂಚಲನದ ಸಂಚಾಲಕ ಗಣಪತಿ ಹೋಬಳಿದಾರ್ ಸ್ವಾಗತಿಸಿದರು. ಸುಧಾಕರ ಪಿ. ನಿರೂಪಿಸಿದರು. ಕಾರ್ಯದರ್ಶಿ ನಾಗಪ್ಪ ಮರಾಠಿ ವಂದಿಸಿದರು.