ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸೇವೆಯನ್ನೇ ಮುಖ್ಯ ಧ್ಯೇಯವಾಗಿಟ್ಟುಕೊಂಡು ದೇಶದಾದ್ಯಂತ ಸನಾತನ ಹಿಂದು ಧರ್ಮದ ರಕ್ಷಣೆಯಲ್ಲಿ ಹಾಗೂ ಭಾರತೀಯ ಪರಂಪರೆ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೇತೃತ್ವದಲ್ಲಿ ರಚನೆಯಾದ ಸೇವಾಸಂಗಮ ಶಿಶುಮಂದಿರ ಕೇವಲ ಮಕ್ಕಳಿಗಲ್ಲದೇ ಮಾತೆಯರಿಗೂ ಧರ್ಮ ಜಾಗೃತಿ ಮೂಡಿಸುವ ಕೇಂದ್ರವಾಗಿದೆ ಎಂದು ಭಗವದ್ಗೀತಾ ಸಮಿತಿ ಅಧ್ಯಕ್ಷ ರಾಮಕೃಷ್ಣ ಶೇರುಗಾರ್ ಬಿಜೂರು ಹೇಳಿದರು.
ಬೈಂದೂರು ಸೇವಾಸಂಗಮ ಶಿಶುಮಂದಿರ ಕಟ್ಟಡದ ನೂತನ ಮೇಲ್ಮಹಡಿಯನ್ನು ಉದ್ಘಾಟಿಸಿ, ನಂತರ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರೋಟರಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ಹಿಂದು ಧರ್ಮದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಧರ್ಮಕ್ಕೆ ಅನೇಕ ವಿಘ್ನಗಳು ಅಡಚಣೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ನಾವೆಲ್ಲರೂ ಜಾತಿಭೇಧ ಮರೆತು ಒಗ್ಗೂಡಬೇಕಿದೆ ಎಂದ ಅವರು ಆಂಗ್ಲಮಾಧ್ಯಮ ಶಿಕ್ಷಣದ ಮಧ್ಯೆಯೂ ಕೂಡ ಇಂದಿನ ಸಂಸ್ಕ್ರತಿಯ ಉಳಿವಿನ ದೃಷ್ಠಿಯಿಂದ ನಮ್ಮ ದೇಶದ ಇತಿಹಾಸ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಹೊರಾಡುತ್ತಿರುವ ಸೆವಾಸಂಗಮದ ಆಡಳಿತ ಮಂಡಳಿ ಸದಸ್ಯರ ಹಾಗೂ ಮಾತಾಜಿಯವರ ಸಾಧನೆ ಶ್ಲಾಘನೀಯ. ಎಂದರು.
ಮುಂಬೈ ಉದ್ಯಮಿ ವಿ. ಆರ್. ಬಾಲಚಂದ್ರ ರಾವ್ ಸಮಾರಂಭದ ಅಧ್ಯಕ್ಷೆವಹಿಸಿ ಮಾತನಾಡಿ, ಹಿಂದು ಸಮಾಜದಲ್ಲಿ ನಮ್ಮ ಸನಾತನ ಪರಂಪರೆಯಂತೆ ವಿವಿಧ ಹಬ್ಬಗಳ ಆಚರಣೆ ಮಾಡಲಾಗುತ್ತಿದೆ. ಸಂಸ್ಕೃತಿ ನಿಷ್ಠ ಆಚರಣೆಯಾಗಿದ್ದು ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಿ ಸೌಹಾರ್ದತೆಯನ್ನು ಹೆಚ್ಚಿಸುತ್ತದೆ. ಪಾಶ್ಚಾತ್ಯ ಸಂಸ್ಕೃತಿಗೆ ನಮ್ಮ ಮಕ್ಕಳನ್ನು ಒಗ್ಗದೆ ನಮ್ಮ ಶ್ರೇಷ್ಠ ಹಿಂದು ಸಂಸ್ಕೃತಿಯಂತೆ ವಿವಿಧ ಆಚರಣೆಗಳನ್ನು ಮಾಡಿದರೆ ನಮ್ಮ ಹಬ್ಬ ಹರಿದಿನಗಳ ಆಚರಣೆಗೆ ಹೆಚ್ಚಿನ ಮಹತ್ವ ದೊರೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಮೊದಲ ಮಹಡಿ ನಿರ್ಮಾಣಕ್ಕೆ ಹೆಚ್ಚಿನ ಮೊತ್ತ ನೀಡಿ ಸಹಕರಿಸಿದ ಉದ್ಯಮಿ ವಿ. ಆರ್. ಬಾಲಚಂದ್ರ ರಾವ್ ಮತ್ತು ರತಿ ದಂಪತಿಗಳಿಗೆ, ಕಟ್ಟಡ ಸಮಿತಿ ಕಾರ್ಯದರ್ಶಿ ದಿನೇಶ್ ಕೆ. ಪಡುವರಿ, ಮಾತಾಜಿ ಜ್ಯೋತಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಗನ್ನಾಥ ಶೆಟ್ಟಿ ಐಎಫ್ಎಸ್, ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಗ್ರಾಪಂ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ವಿಶ್ವಸ್ತ ಮಂಡಳಿ ನಿವಾಹಕ ಸುಬ್ರಹ್ಮಣ್ಯ ಹೊಳ್ಳ, ವಿಶ್ವಸ್ತ ಕೇಶವರಾಯ ಪ್ರಭು, ಎನ್. ಆನಂದ ಶೆಟ್ಟಿ, ಡಾ. ರೋಶನ್ ಪಾಯಸ್, ಅಣ್ಣಯ್ಯ ಸೇರಿಗಾರ್ ಪೂನಾ, ಕಟ್ಟಡ ಸಮಿತಿಯ ಅಧ್ಯಕ್ಷ ಜಗನ್ನಾಥ ರಾವ್, ಸೇವಾಸಂಗಮದ ಕಾರ್ಯದರ್ಶಿ ರಾಜೇಶ್ ಐತಾಳ್ ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷ ಯು. ಮಂಜುನಾಥ ಶೆಟ್ಟಿ ಸ್ವಾಗತಿಸಿ, ಉಪಾಧ್ಯಕ್ಷ ಸುಧಾಕರ ಪಿ. ವಂದಿಸಿ, ನಿರೂಪಿಸಿದರು. ನಂತರ ಶಿಶುಮಂದಿರದ ಪುಟಾಣಿಗಳಿಂದ ಮುದ್ದು ಕೃಷ್ಣ-ರಾಧೆಯರ ನೃತ್ಯಗಳು ನಡೆಯಿತು.