ಕುಂದಾಪ್ರ ಡಾಟ್ ಕಾಂ ಸುದ್ದಿ.
ಸಾಲಿಗ್ರಾಮ: ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಕಡ, ಗುಂಡ್ಮಿ ಚಿತ್ರಪಾಡಿ ಹಾಗೂ ಪಾರಂಪಳ್ಳಿ ಗ್ರಾಮಗಳ ಬಡನಿವೇಶನ ರಹಿತರು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ತಾಲೂಕು ಸಮಿತಿ ನೇತೃತ್ವದಲ್ಲಿ ಮನೆ, ನಿವೇಶನ ಹಕ್ಕು ಪತ್ರ ಕೋರಿ ಸಲಿಸಿದ ಅರ್ಜಿಯನ್ನು ಕೂಡಲೇ ವಿಲೇವಾರಿ ಮಾಡಬೇಕು. ಎಂದು ಒತ್ತಾಯಿಸಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಛೇರಿ ಎದುರು ಬೃಹತ್ ಪ್ರತಿಭಟನಾ ಮುಷ್ಕರ ಮಾಡಿದರು.
ಮನೆ, ನಿವೇಶನ ರಹಿತ ಅರ್ಜಿದಾರರು ಪ್ರತಿಭಟನಾ ಮುಷ್ಕರ ಹೋರಾಟದ ಪೂರ್ವದಲ್ಲಿ ಸಾಲಿಗ್ರಾಮದ ಗಣೇಶ ಕೃಪಾ ಸಭಾಭವನದಲ್ಲಿ ಜರಗಿದ ನಿವೇಶನ ರಹಿತ ಅರ್ಜಿದಾರರ ಬೃಹತ್ ಸಮಾವೇಶದಲ್ಲಿ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಪ್ರಾಸ್ತಾವಿಕ ಭಾಷಣ ಮಾಡುತ್ತಾ- ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ೪ ಗ್ರಾಮಗಳ ಮನೆ, ನಿವೇಶನ ರಹಿತರು ಭೂಮಿ ಹಕ್ಕು ಪತ್ರಕ್ಕಾಗಿ ಒತ್ತಾಯಿಸಿ ಸಲ್ಲಿಸಿದ ೮೩೮ ಅರ್ಜಿಗಳನ್ನು ಕೂಡಲೇ ಪರಿಶೀಲಿಸಿ, ನಿವೇಶನ ರಹಿತರ ಅಂತಿಮ ಪಟ್ಟಿ ೩ ತಿಂಗಳ ಅವಧಿಯೊಳಗೆ ಸಂಪೂರ್ಣಗೊಳಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು. ಇಲ್ಲವಾದರೆ ಭೂಮಿ ಹಕ್ಕಿನ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ನಿವೇಶನ ರಹಿತರ ಸಮಾವೇಶದಲ್ಲಿ ಕೃಷಿ ಕೂಲಿಕಾರರ ಸಂಘದ ಉಡುಪಿ ತಾಲೂಕು ಅಧ್ಯಕ್ಷ ಎಚ್. ವಿಠಲ ಪೂಜಾರಿ ಮಾತನಾಡಿದರು. ಸರಕಾರಿ ಸ್ಥಳವನ್ನು ಗುರುತಿಸಿ ನಿವೇಶನ ರಹಿತರಿಗೆ ಭೂಮಿ ಹಕ್ಕು ಪತ್ರ ಮಂಜೂರು ಮಾಡಬೇಕು ಎಂದು ಹೇಳಿದರು. ನಂತರ ಸಾಲಿಗ್ರಾಮದ ಪ್ರಮುಖ ರಸ್ತೆಯಲ್ಲಿ ನಿವೇಶನ ರಹಿತ ಅರ್ಜಿದಾರರು ಪ್ರತಿಭಟನಾ ಮೆರವಣಿಗೆಯಲ್ಲಿ ಭೂಮಿ ಹಕ್ಕು ಪತ್ರಕ್ಕಾಗಿ ಘೋಷಣೆ ಕೂಗುತ್ತಾ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಛೇರಿ ಎದುರು ಬೃಹತ್ ಪ್ರತಿಭಟನಾ ಮುಷ್ಕರ ನಡೆಸಿದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, – ಕೃಷಿ ಕೂಲಿಕಾರರ ಸಂಘದ ಸಾಲಿಗ್ರಾಮ ಸಮಿತಿ ಅಧ್ಯಕ್ಷ ಮಾಧವ ಸಾಲಿಗ್ರಾಮ, ಕಾರ್ಯದರ್ಶಿ ರಾಮ ಕಾರ್ಕಡ, ಕವಿರಾಜ ಉಡುಪಿ, ಶೋಭಾ ಗುಂಡ್ಮಿ, ಪದ್ಮಾವತಿ ಶೆಟ್ಟಿ, ಕುಶಲ ಇವರು ಉಪಸ್ಥಿತರಿದ್ದರು.
ರ್ಯಾಲಿ, ಪ್ರತಿಭಟನಾ ಪ್ರದರ್ಶನದ ನಂತರ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ವಸುಮತಿ ನಾಗೇಶ ನಾಯರಿ, ಉಪಾಧ್ಯಕ್ಷ ಉದಯ ಪೂಜಾರಿ, ಸದಸ್ಯರಾದ ಕರುಣಾಕರ ಪೂಜಾರಿ ಇವರಿಗೆ ನಿವೇಶನ ರಹಿತರ ಭೂಮಿ ಹಕ್ಕಿನ ಬೇಡಿಕೆಯ ಮನವಿಯನ್ನು ಹಸ್ತಾಂತರಿಸಲಾಯಿತು.