ಶಿರ್ವ: ಮಾಲಿನ್ಯದಂತಹ ವಿಪತ್ತಿನಿಂದ ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರಾಗಿದೆ. ಆ ನಿಟ್ಟಿನಲ್ಲಿ ಬಾಲ್ಯದಿಂದಲೇ ಮಕ್ಕಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಶಿರ್ವ ಸಂತ ಮೇರಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜನ್ ವಿ. ಎನ್. ಹೇಳಿದರು.
ಅವರು ಶಿರ್ವ ಸಂತ ಮೇರಿ ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ, ಪಡುಕಳತ್ತೂರು ಶ್ರೀ ಅಯ್ಯಣ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕುತ್ಯಾರು ಗ್ರಾಮ ಪಂಚಾಯತ್ ಇವರ ಸಹಯೋಗದಲ್ಲಿ ಪಡುಕಳತ್ತೂರು ಶಾಲಾ ವಠಾರದ ಹಸಿರು ಅಂಗಳದಲ್ಲಿ ಪರಿಸರ ಸಂರಕ್ಷಣೆಯ ಕುರಿತಾದ ಹಸಿರು ಉತ್ಸವ-2015 ಮಕ್ಕಳ ನಡಿಗೆ ಪ್ರಕೃತಿಯೆಡೆಗೆ ಎಂಬ ಎರಡು ದಿನದ ಬೇಸಿಗೆ ಶಿಬಿರವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕುತ್ಯಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಗುರ್ಮೆ ವಹಿಸಿದ್ದರು. ಅತಿಥಿಗಳಾಗಿ ಕಳತ್ತೂರು ಮರಿಯಾ ನಿವಾಸದ ಮುಖ್ಯಸ್ಥರಾದ ಸಿಸ್ಟರ ರೀಟಾ ಫೆರ್ನಾಂಡಿಸ್, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ದಿವಾಕರ್ ಡಿ. ಶೆಟ್ಟಿ, ಶಾಲಾ ಮುಖ್ಯೋಪಾದ್ಯಾಯಿನಿ ಶಶಿಕಲಾ ಎನ್ ಮತ್ತು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಉಪನ್ಯಾಸಕ ವಿಘ್ನೇಶ್ ಉಪಸ್ಥಿತರಿದ್ದರು.
ಸುಮಾರು 45 ಪ್ರಾಥಮಿಕ ಶಾಲಾ ಮಕ್ಕಳು ಭಾಗವಹಿಸಿದ್ದ ಹಸಿರು ಉತ್ಸವದಲ್ಲಿ ಪರಿಸರ ಗೀತೆಗಳು, ಬಣ್ಣಗಳನ್ನು ಬಳಸದೇ ಮಣ್ಣಿನ ಕಲಾಕೃತಿಗಳ ರಚನೆ, ನಿಸರ್ಗದ ಕುರಿತಾದ ಚಿತ್ರಕಲಾ ಸ್ಪರ್ಧೆ, ಕಾಡಿನ ಮಹತ್ವದ ಬಗ್ಗೆ ಉಪನ್ಯಾಸ, ಕಸದಿಂದ ರಸ, ಕೃಷಿ ಭೂಮಿಗೆ ಭೇಟಿಗಳಂತಹ ಹಲವು ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾರೋಪ ಸಮಾರಂಭದಲ್ಲಿ ಅಜ್ಜರಕಾಡಿನ ಡಾ. ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಪ್ರೇಮನಾಥ್, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಸಂಯೋಜಕಿ ಲಕ್ಷ್ಮೀ ಆಚಾರ್ಯ, ಉಪನ್ಯಾಸಕ ಮಹಮ್ಮದ್ ನಸೀರ್ರವರು ಅತಿಥಿಗಳಾಗಿ ಆಗಮಿಸಿದ್ದರು.
ಹಸಿರು ಉತ್ಸವವು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಬಿನು, ಸುಶಾಂತಿ, ಕುಮಾರಿ ದೀಕ್ಷಾ ರಿಯಾ, ಸ್ಟೀಫನ್, ನಾಗೇಂದ್ರರಾಜು, ಮೆಲ್ರೋಯ್ ಮತ್ತು ರಾಜೇಶ್ ಯಶಸ್ವಿಯಾಗಿ ಸಂಘಟಿಸಿದ್ದರು.