ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಮ್ಮ ಕುಟುಂಬಕ್ಕಿಂತ ಸಮಾಜದ ಹಿತವನ್ನೇ ಅನುಗಾಲವೂ ಬಯಸಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಜಿಲ್ಲೆಯ ಜನತೆಯ ಆಗು-ಹೋಗುಗಳಿಗೆ ಸ್ಪಂದಿಸುತ್ತಾ ಅವರಿಗೆ ಸರಿಯಾದ ರೀತಿ ಮಾರ್ಗದರ್ಶನ ನೀಡುತ್ತಾ ಕೇವಲ ಅಲ್ಪಕಾಲ ಬಾಳಿದ ಸಂಜೀವರಾಯರು ಒರ್ವ ವ್ಯಕ್ತಿಯಾಗಿರದೇ ತಮ್ಮ ವ್ಯಕ್ತಿತ್ವದ ಮೂಲಕ ಒಂದು ಅದ್ಭುತ ಶಕ್ತಿಯಾಗಿದ್ದರು ಎಂದು ೯೧ರ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಹೇಳಿದರು.
ನಾಗೂರಿನ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆದ, ಖಂಬದಕೋಣೆ ಪರಿಸರದ ಅಭಿವೃದ್ಧಿಯ ಹರಿಕಾರ, ಬಹುಮುಖೀ ಸಾಧಕ ಖಂಬದಕೋಣೆ ದಿ. ಆರ್. ಕೆ. ಸಂಜೀವ ರಾವ್ ಜನ್ಮಶತಾಬ್ದಿ ಆಚರಣೆ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಾಂಸ್ಕೃತಿಕ ಸಂಪನ್ನ ಕೌಟುಂಬಿಕ ಹಿನ್ನೆಲೆಯ ಸಂಜೀವ ರಾವ್ ಇವರು ತಮ್ಮ ಹುಟ್ಟೂರು ಖಂಬದಕೋಣೆಯನ್ನು ಕೇಂದ್ರವಾಗಿರಿಸಿಕೊಂಡು ಗ್ರಾಮೀಣ ಪ್ರದೇಶದ ಅಭಿವೃದ್ಧಿಯತ್ತ ಅವರು ದೃಢ ಹೆಜ್ಜೆಗಳನ್ನಿರಿಸಿದ್ದರು. ಶಿಕ್ಷಣ, ಸಂಪರ್ಕ ಸೌಲಭ್ಯ ಸೃಷ್ಟಿಸುವಲ್ಲಿ ಅವರದು ಗಣನೀಯ ಸಾಧನೆ. ಭೂದಾನದ ಮೂಲಕ ಔದಾರ್ಯ ಮೆರೆದಿದ್ದರಲ್ಲದೇ ಸಂಗೀತ, ಸಾಹಿತ್ಯ, ನಾಟಕ, ಯಕ್ಷಗಾನ ಕ್ಷೇತ್ರಗಳಲ್ಲಿ ಕೂಡಾ ವಿಶಿಷ್ಟ ಸಾಧನೆಗೈದವರು ಎಂದು ರಾಯರ ವ್ಯಕ್ತಿತ್ವವನ್ನು ನೆನಪಿಸಿಕೊಂಡರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಿ ದೇವಾಡಿಗ ಸಮಾರಂಭ ಉದ್ಘಾಟಿಸಿದರು. ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ವಿನಯ್ ಹೆಗ್ಡೆ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಆರ್ಕೆಎಸ್ ಜನ್ಮಶತಾಬ್ದಿ ಆಚರಣಾ ಸಮಿತಿಯ ಗೌರವಾಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ, ಶತಾಬ್ದಿ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು. ನಿವೃತ್ತ ಪ್ರಾಂಶುಪಾಲ ಡಾ. ಎಂ. ಪ್ರಭಾಕರ ಜೋಷಿ ನುಡಿನಮನ ಸಲ್ಲಿಸಿದರು. ಉಪ್ಪುಂದ ಚಂದ್ರಶೇಖರ ಹೊಳ್ಳರಿಗೆ ’ಜನ್ಮ ಶತಾಬ್ದಿ ಪ್ರಶಸ್ತಿ’ ಪ್ರದಾನಿಸಿ, ಉಪ್ಪುಂದ ರಮೇಶ ವೈದ್ಯ, ಎಸ್. ಜನಾರ್ದನ ಮರವಂತೆ ಇವರನ್ನು ಸನ್ಮಾನಿಸಲಾಯಿತು. ಬಸ್ರೂರು ಅಪ್ಪಣ್ಣ ಹೆಗ್ಡೆ ದಂಪತಿಗಳಿಗೆ ಆರ್ಕೆಎಸ್ ಕುಟುಂಬಿಕರು ವಿಶೇಷವಾಗಿ ಸನ್ಮಾನಿಸಿದರು. ಶಾಸಕ ಕೆ. ಗೋಪಾಲ ಪೂಜಾರಿ, ಮಾಜಿ ಶಾಸಕ ಎ. ಜಿ. ಕೊಡ್ಗಿ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಆರ್. ಕೆ. ಸಂಜೀವ ರಾವ್ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಕೆ. ಎಸ್. ಪ್ರಕಾಶ್ ರಾವ್ ಸ್ವಾಗತಿಸಿ, ಉಪನ್ಯಾಸಕ ವಿಶ್ವನಾಥ ಶೆಟ್ಟಿ ನಿರೂಪಿಸಿದರು. ಸಂದೀಪನ್ ಶಾಲಾ ಮುಖ್ಯೋಪಾಧ್ಯಾಯ ಬಿಜೂರು ವಿಶ್ವೇಶ್ವರ ಅಡಿಗ ವಂದಿಸಿದರು. ನಂತರ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನೇತೃತ್ವದ ಯಕ್ಷಗಾನ ಕಲಾವಿದರ ತಂಡದವರಿಂದ ’ಪಾಂಚಜನ್ಯ’ ಯಕ್ಷಗಾನ ಪ್ರದರ್ಶನಗೊಂಡಿತು.