ಗಂಗನಾಡು, ಮದ್ದೋಡಿ, ತೂದಳ್ಳಿ, ದೊಂಬೆ ಮಾರ್ಗಕ್ಕೆ ನಾಲ್ಕು ಬಸ್ಸುಗಳು
ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಿರೂರು, ಆಲಂದೂರು, ತೂದಳ್ಳಿ, ಮದ್ದೋಡಿ, ಗಂಗನಾಡು, ಕರಾವಳಿ, ದೊಂಬೆ ಮುಂತಾದ ಊರುಗಳಿಂದ ಸಾರ್ವಜನಿಕರು ಸರಕಾರಿ ಬಸ್ಸುಗಳನ್ನು ಪ್ರಾರಂಭಿಸುವ ಕುರಿತು ಕ.ರಾ.ರ.ಸಾ.ಸಂಸ್ಥೆಯ ಅಧ್ಯಕ್ಷರಾದ ಕೆ.ಗೋಪಾಲ ಪೂಜಾರಿಯವರಿಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸಂದಿಸಿದ ಶಾಸಕರು ಅತೀ ಶೀಘ್ರದಲ್ಲಿ ನಾಲ್ಕು ಹೊಸ ಬಸ್ಸುಗಳನ್ನು ಗ್ರಾಮಾಂತರ ಸಾರಿಗೆ ಸೇವೆ ಮೂಲಕ ನೀಡಿರುವುದು ಶ್ಲಾಘನೀಯ ಎಂದು ಶಿರೂರು ಜೆ.ಸಿ.ಐ ಅಧ್ಯಕ್ಷ ಅರುಣ ಕುಮಾರ್ ಶಿರೂರು ಹೇಳಿದರು.
ಅವರು ದೊಂಬೆ, ಕರಾವಳಿ, ತೂದಳ್ಳಿ, ಮದ್ದೋಡಿ, ಗಂಗನಾಡು ಮುಂತಾದ ಊರುಗಳಿಗೆ ನೂತನ ಸರಕಾರಿ ಬಸ್ಸುಗಳ ಓಡಾಟಕ್ಕೆ ಶಿರೂರಿನಲ್ಲಿ ಚಾಲನೆ ನೀಡಿ ಮಾತನಾಡಿ ನೂತನ ಬಸ್ಸು ಸೇವೆ ಆರಂಭಿಸಿದ್ದರಿಂದ ಪ್ರತಿದಿನ ಹತ್ತಾರು ಕಿ.ಮೀ ನಡೆದುಕೊಂಡು ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಇಂತಹ ಜನಪರ ಕಾರ್ಯಗಳು ಸದಾ ಜನಮಾನಸದಲ್ಲಿ ಉಳಿಯುತ್ತದೆ ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕೆ.ಡಿ.ಪಿ ಸದಸ್ಯ ಎಸ್.ರಾಜು ಪೂಜಾರಿ ಮಾತನಾಡಿ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿಯವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾದ ಬಳಿಕ ಬೈಂದೂರು ಕ್ಷೇತ್ರಕ್ಕೆ ಮಹೋನ್ನತ ಕೊಡುಗೆ ದೊರೆತಿದೆ. ಈಗಾಗಲೇ ಬೈಂದೂರಿನಿಂದ ಬೆಂಗಳೂರಿಗೆ ಅತ್ಯಾಧುನಿಕ ಬಸ್ಸುಗಳು ಪ್ರಾರಂಭಗೊಂಡಿದೆ. ಭಟ್ಕಳ-ಮಂಗಳೂರು ವೋಲ್ವೋ ಬಸ್ಸುಗಳಿಗೆ ಜನರಿಂದ ಅತ್ಯುತ್ತಮ ಸ್ಪಂದನೆ ದೊರೆತಿದೆ. ಗ್ರಾಮೀಣ ಭಾಗದ ಜನರು ತೂದಳ್ಳಿ, ದೊಂಬೆ, ಮದ್ದೋಡಿ, ಗಂಗನಾಡು ಮುಂತಾದ ಊರುಗಳಿಂದ ಸಾರ್ವಜನಿಕರು ಬೇಡಿಕೆ ಸಲ್ಲಿಸಿರುವುದನ್ನು ಪರಿಗಣಿಸಿದ ಶಾಸಕರು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ನೆಲೆಯಲ್ಲಿ ಹೊಸ ಬಸ್ಸುಗಳ ಕೊಡುಗೆ ನೀಡಿದ್ದಾರೆ. ಮಾತ್ರವಲ್ಲದೆ ಅಳ್ವೆಗದ್ದೆ, ಹೊಸೂರು, ಸೇರಿದಂತೆ ಇನ್ನುಳದ ಭಾಗಗಳಿಗೂ ಬಸ್ಸು ಸಂಪರ್ಕ ಕಲ್ಪಿಸುವ ಬೇಡಿಕೆಯಿದೆ ಎಂದರು.
ಈ ಸಂಧರ್ಭದಲ್ಲಿ ತಾ.ಪಂ ಸದಸ್ಯ ರಾಜು ದೇವಾಡಿಗ, ಬೈದೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮದನ್ ಕುಮಾರ್, ನಾಗರಾಜ ಗಾಣಿಗ, ವಿಭಾಗೀಯ ಸಂಚಲನಾ ಅಧಿಕಾರಿ ಜೈಶಾಂತ್ ಕುಮಾರ್, ಕುಂದಾಪುರ ಸಂಚಾರಿ ಮುಖ್ಯಸ್ಥ ಗಜಾನನ ಡಿ.ಆದಿಮನೆ, ವಿಭಾಗೀಯ ಕಛೇರಿ ಸಂಚಾರಿ ಅಧೀಕ್ಷಕ ಮಂಜುನಾಥ, ಕುಂದಾಪುರ ಘಟಕ ವ್ಯವಸ್ಥಾಪಕ ಎಸ್.ತಾರನಾಥ, ಉದಯ ಶೆಟ್ಟಿ, ಗ್ರಾ.ಪಂ ಸದಸ್ಯರು, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕೆ.ವಿ, ಶಿರೂರಿನ ಮುಖಂಡರು ಹಾಗೂ ಸಾರ್ವಜನಿಕರು ಹಾಜರಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷರಿಗೆ ಸಾಥ್ ನೀಡಿದ ಅಧಿಕಾರಿಗಳು:
ಗ್ರಾಮೀಣ ಭಾಗಕ್ಕೆ ಸರಕಾರಿ ಬಸ್ಸು ಸೇವೆ ಆರಂಭಿಸುವಲ್ಲಿ ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷರೊಂದಿಗೆ ಸಂಸ್ಥೆಯ ಅಧಿಕಾರಿಗಳು ಹೆಗಲಿಗೆ ಹೆಗಲು ಕೊಟ್ಟು ದುಡಿದ್ದಿದ್ದಾರೆ. ಎಲ್ಲರಿಗೂ ಸುಲಭ ಸಾರಿಗೆ ಸೌಲಭ್ಯ ಕಲ್ಪಸಬೇಕು ಎಂಬ ಅಧ್ಯಕ್ಷರ ಕನಸಿನಂತೆ ಹಲವು ದಿನಗಳಿಂದ ಶ್ರಮಿಸುತ್ತಿರುವ ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗೀಯ ಅಧಿಕಾರಿಗಳು ಪರ್ಮಿಟ್ ಪಡೆದು ರೂಟ್ ಮಾಪ್ ಮಾಡುವಲ್ಲಿ ಅರ್ಧ ರಾತ್ರಿ ಕಳೆದಿತ್ತು. ಮರುದಿನ ಬೆಳಿಗ್ಗೆ ಜಿಲ್ಲೆಯಲ್ಲಿ 56 ಬಸ್ಸುಗಳನ್ನು ರಸ್ತೆಗಿಳಿಸುವ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ.