ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ.
ಒಂದೇ ನೋಟಕ್ಕೆ ಮನತುಂಬಿದ ನಗು ಇಲ್ಲವೇ ಸೆಡವು. ಬಾಗುವ ರೇಖೆಗೆ ತಕ್ಕಂತೆ ಬದಲಾಗುವ ಭಾವಲಹರಿ. ಕಾರ್ಟೂನ್ ಎಂದರೆ ಹಾಗೆ. ಆಳುವವರಿ ಗೊಂದು ಚಾಟಿ. ಜನಸಾಮಾನ್ಯರಿಗೆ ನಗುವಿನ ಚಟಾಕಿ. ವಾಸ್ತವದ ಅನಾವರಣ. ನೂರು ಪದಗಳಲ್ಲಿ ಹೇಳಬಹುದಾದದ್ದನ್ನು ಒಂದು ರೇಖೆಯಲ್ಲಿ ಹೇಳಿ ಮುಗಿಸುವ ಛಾತಿ. ಇಂತಹ ಕಾರ್ಟೂನಿಷ್ಠ ರನ್ನು ಕಾರ್ಟೂನಿಷ್ಠರ ತವರು, ಕುಂದಾಪುರದಲ್ಲಿ ಒಗ್ಗೂಡಿಸಿ ಕಳೆದ ಐದು ವರ್ಷಗಳಿಂದ ಆಯೋಜಿಸುತ್ತಿರುವ ಕಾರ್ಟೂನು ಹಬ್ಬ, ಈ ಭಾರಿ ನ.23ರಿಂದ ನ.26ರ ತನಕ ನಡೆಯಲಿದೆ.
ಖ್ಯಾತ ವ್ಯಂಗ್ಯಚಿತ್ರಕಾರ ಕುಂದಾಪುರದ ಸತೀಶ್ ಆಚಾರ್ಯರ ಅವರ ಸಾರಥ್ಯದಲ್ಲಿ ವಿಭಿನ್ನ ಐಡಿಯಾಸ್ ಹಾಗೂ ಕಾರ್ಟೂನು ಕುಂದಾಪ್ರ ತಂಡದ ಕಾರ್ಟೂನಿಷ್ಠರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಟೂನು ಹಬ್ಬ ಹತ್ತಾರು ವಿಶೇಷತೆಗಳೊಂದಿಗೆ ರಂಗು ರಂಗಾಗಿ ನಡೆಯುತ್ತಿದ್ದು ನಾಲ್ಕು ದಿನಗಳ ಕಾಲ ಕುಂದಾಪುರದ ಕಲಾಮಂದಿರದಲ್ಲಿ ಜರುಗಲಿದೆ.
ಹಬ್ಬದಲ್ಲಿ ಕಾರ್ಟೂನು ಪ್ರದರ್ಶನ, ಸ್ಕೂಲ್ ಟೂನ್ ಚಾಂಪಿಯನ್ಶಿಪ್ ಕಾರ್ಟೂನು ಸ್ವರ್ಧೆ, ಲೈವ್ ಕ್ಯಾರಿಕೇಚರಿಂಗ್, ಎಡಿಟೂನ್ಸ್, ಮಾಸ್ಟರ್ ಸ್ಟ್ರೋಕ್, ನಿತ್ಕ ಕಾಮಿಡಿ ಕೂತ್ಕ ನಗಾಡಿ, ಸೆಲ್ಫಿ ಕಾರ್ನರ್, ಹೀಗೆ ನಾಲ್ಕು ದಿನವೂ ಕಾರ್ಟೂನು ಪ್ರಿಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ರಂಜನೆ ಹಾಗೂ ಅರಿವಿಗಾಗಿ ಇದರ ಜೊತೆ ಜೊತೆಗೆ ಕಾರ್ಟೂನಿನ ಬಗೆಗೆ ಒಲವು ಮೂಡಿಸುವುದಕ್ಕಾಗಿ ಕಾರ್ಟೂನು ಕುಂದಾಪ್ರ ತಂಡ ಸಿದ್ದವಾಗಿದೆ.
ಸತೀಶ್ ಆಚಾರ್ಯರರ ಕನಸು:
ಕಲೆಯೊಂದಿಗಿನ ಒಡನಾಟ ಹವ್ಯಾಸವಾಗಿ, ಹವ್ಯಾಸ ವೃತ್ತಿಗೆ ತಿರುಗಿ, ವೃತ್ತಿ ಮೂಲಕ ವಿಶ್ವಖ್ಯಾತಿ ಗಳಿಸಿದ ಅಪ್ಪಟ ಕುಂದಾಪುರದ ಪ್ರತಿಭೆ ಸತೀಶ್ ಆಚಾಾರ್ಯ ಅವರು, ಇಂದು ತಾನು ಕಲಿತದ್ದನ್ನು ಜಗತ್ತಿಗೆ ಪಸರಿಸುವ ಹಾಗೂ ಮುಂದಿನ ಪೀಳಿಗೆಗೂ ಕಾರ್ಟೂನು ಕಲೆಯ ಕಸುವು ಒದಗಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ದೇಶದ ಪ್ರಮುಖ ಪತ್ರಿಕೆ ಹಾಗೂ ಪೋರ್ಟೆಲ್ಗಳಲ್ಲಿ ಅವರ ವ್ಯಂಗ್ಯಚಿತ್ರಗಳು ಪ್ರಕಟವಾಗುತ್ತಿರುವುದಲ್ಲದೇ, ವಿಶ್ವದಾದ್ಯಂತ ಅವರ ಕಾರ್ಟೂನುಗಳಿಗೆ ಅವರದ್ದೇ ಆದ ಅಭಿಮಾನಿ ವರ್ಗವಿದೆ. ಮುಂಬೈನಲ್ಲಿ ಬದುಕಿನ ರೇಸ್ ಆರಂಭಿಸಿದ್ದರು. ಒಂದು ಹಂತದ ಯಶಸನ್ನು ತಲುಪಿದ ಬಳಿಕ ತನ್ನ ಹುಟ್ಟೂರಿಗೆ ಮರಳಿ ರೇಸ್ ಮುಂದುವರಿಸಿದ ಸತೀಶ್ ಅವರು, ತಾನು ಸಾಗುವ ಮಾರ್ಗದಲ್ಲಿ ತನ್ನವರನ್ನೂ ಕರೆದೊಯ್ಯುತ್ತಿದ್ದಾರೆ. ಕಾರ್ಟೂನಿಷ್ಠರನ್ನು ಒಟ್ಟಾಗಿಸಿ ಸತತವಾಗಿ ಕಾರ್ಟೂನು ಹಬ್ಬ ಆಯೋಜಿಸಿ ಕುಂದಾಪುರ ಮಣ್ಣಿನಲ್ಲಿ ವ್ಯಂಗ್ಯಚಿತ್ರದ ಅಭಿರುಚಿಯನ್ನು ಹಾಗೆಯೇ ಉಳಿಸುವಲ್ಲಿ ಶ್ರಮಿಸುತ್ತಿದ್ದಾರೆ. ತಮ್ಮ ಕನಸುಗಳನ್ನು ಸಕಾರಗೊಳಿಸುವಲ್ಲಿ ಯಶವನ್ನೂ ಕಂಡಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.
ಕಾರ್ಟೂನು ಹಬ್ಬ – 2019:
ಕುಂದಾಪುರದ ಕಲಾಮಂದಿರದಲ್ಲಿ ನಾಲ್ಕು ದಿನಗಳ ಕಾಲ ಕಾರ್ಟೂನು ಕಲರವ ನಡೆಯಲಿದೆ. ನವೆಂಬರ್ 23ರ ಬೆಳಿಗ್ಗೆ 10 ಗಂಟೆಗೆ ಕಾರ್ಟೂನು ಹಬ್ಬವನ್ನು ಖ್ಯಾತ ನಟ ಹಾಗೂ ನಿರ್ದೇಶಕ ರಿಶಬ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸೇರಿದಂತೆ ವಿವಿಧ ಅತಿಥಿ ಗಣ್ಯರು ಸಮಾರಂಭದಲ್ಲಿ ಇರಲಿದ್ದಾರೆ. ಸಾಧಕರನ್ನು ಸನ್ಮಾನಿಸಲಾಗುತ್ತದೆ. ಮಧ್ಯಾಹ್ನ ಮಾಯಾ ಕಾಮತ್ ಸ್ಮರಣಾರ್ಥ ಕಾರ್ಟೂನು ಸ್ವರ್ಧೆ, ಸ್ಕೂಲ್’ಟೂನ್ ಚಾಂಪಿಯನ್’ಶಿಪ್ ಜರುಗಲಿದೆ.
ನ.24ರಂದು ಕಾರ್ಟೂನಿಷ್ಠರೊಂದಿಗೆ ಮಾಸ್ಟರ್ ಸ್ಟ್ರೋಕ್, ಸಂಜೆ ಕ್ಯಾರಿಕೇಚರ್ ಮೂಲಕ ಬಡ ವಿದ್ಯಾರ್ಥಿಗಳಿಗೆ ನಿಧಿ ಸಂಗ್ರಹಿಸುವ ಚಿತ್ರನಿಧಿ ಕಾರ್ಯಕ್ರಮ ನಡೆಯಲಿದೆ. ನ.25 ಬೆಳಿಗ್ಗೆ ಪ್ರಾಯೋಗಿಕ ಕಾರ್ಟೂನು ಕಾರ್ಯಾಗಾರ ಎಡಿಟೋನ್ಸ್ ನಡೆಯಲಿದೆ.
ನ.26ರ ಸಂಜೆ 5ಕ್ಕೆ ಕುಂದಾಪ್ರ ಕನ್ನಡದ ಕಾಮಿಡಿ ಸ್ಟ್ಯಾಂಡಪ್ ಕಾಮಿಡಿ ಸ್ವರ್ಧೆ ’ನಿತ್ಕ ಕಾಮಿಡಿ ಕೂತ್ಕ ನಗಾಡಿ!’ ನಡೆಯಲಿದೆ. ಮನು ಹಂದಾಡಿ ಹಾಗೂ ಚೇತನ್ ನೈಲಾಡಿ ಅವರ ಸಾರಥ್ಯದಲ್ಲಿ ಸಂದೇಶ್ ಶೆಟ್ಟಿ ಸಳ್ವಾಡಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಕಾರ್ಟೂನಿಷ್ಠರ ತವರು:
ಕುಂದಾಪುರ ಕಾರ್ಟೂನಿಷ್ಠರ ತವರು ಎಂದೇ ಗುರುತಿಸಿಕೊಂಡಿದೆ. ದೇಶದ ಹಲವು ಖ್ಯಾತನಾಮ ಕಾರ್ಟೂನಿಷ್ಠರುಗಳು ಕುಂದಾಪುರ ಮೂಲದವರು ಎಂಬುದು ಕುಂದಾಪುರಿಗರಿಗೆ ನಿಜಕ್ಕೂ ಹೆಮ್ಮೆ.
ಈಶ್ವರ್ ಅಲ್ಲಾ ತೇರೆ ನಾಮ್ ಥೀಮ್:
ಮಹಾತ್ಮ ಗಾಂಧಿಜಿ ಅವರ 150ನೇ ಜನ್ಮವರ್ಷಾಚರಣೆ ಸಂದರ್ಭ ಕಾರ್ಟೂನು ಹಬ್ಬದಲ್ಲಿಯೂ ‘ಈಶ್ವರ ಅಲ್ಲಾ ತೇರೆ ನಾಮ್’ ಎಂಬ ಥೀಮ್ ಅಳವಡಿಸಿಕೊಳ್ಳಲಾಗಿದೆ. ಗಾಂಧೀಜಿ ಅವರು ಶಾಂತಿ, ಅಹಿಂಸೆ ಹಾಗೂ ಸಾಮರಸ್ಯ ಕಾರ್ಟೂನು ಹಬ್ಬದ ಆಶಯವಾಗಿರಲಿದೆ. ಇದಕ್ಕೆ ಪೂರ್ವಭಾವಿಯಾಗಿ ಹಮ್ಮಿಕೊಂಡ ‘ನಾನೂ ಗಾಂಧಿ’ ಅಭಿಯಾನಕ್ಕೆ ಮಹಾತ್ಮ ಗಾಂಧಿ ಕುಟುಂಬದ ತುಷಾರ್ ಗಾಂಧಿ ಸೇರಿದಂತೆ ದೇಶದ ವಿವಿಧ ಭಾಗಗಳ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಎಲ್ಲವೂ ಭಿನ್ನ:
ಕಾರ್ಟೂನು ಹಬ್ಬ ಸತೀಶ್ ಆಚಾರ್ಯ ಅವರ ಕನಸಿನ ಕೂಸು. ಇಲ್ಲಿ ಎಲ್ಲವೂ ಭಿನ್ನ. ಕುಂದಾಪುರದ ಕಲಾಮಂದಿರದ ಒಳಹೊಕ್ಕಿದವರಿಗೆ ಕಾರ್ಟೂನು ಲೋಕದಲ್ಲಿ ಸುತ್ತಿ ಬಂದ ಅನುಭವವಾಗುವುದು ಗ್ಯಾರೆಂಟಿ. ಕಾರ್ಟೂನು ಹಬ್ಬದ ಆಮಂತ್ರಣದಿಂದ ಕಾರ್ಟೂನು ಪ್ರದರ್ಶನ, ಕಾರ್ಟೂನು ಪುಸ್ತಕಗಳು, ಸಂದೇಶ ಹೊತ್ತ ಹೊರ್ಡಿಂಗ್, ಓಪನ್ ಕ್ಯಾನ್ವಾಸ್, ಪೇಪರ್, ಸ್ಮರಣಿಕೆ ಹೀಗೆ ಕಾರ್ಟೂನು ಹಬ್ಬದಲ್ಲಿ ಬಳಸುವ ಪೇಪನಿಂದ ಹಿಡಿದು ಎಲ್ಲವೂ ಭಿನ್ನ ಹಾಗೂ ಸದಾ ಮನಸ್ಸಿನಲ್ಲಿ ಮುದ್ರೆಯೊತ್ತುವ ಮಾದರಿ ಕಾಣಸಿಗುತ್ತವೆ.