ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಎಲ್ಲಡೆ ಲಾಕ್ಡೌನ್ ಜಾರಿಯಾಗಿ ಕೊರೋನಾ ವಿರುದ್ಧ ಹೋರಾಟಕ್ಕಿಳಿದ ಸಂದರ್ಭ ವಂಡ್ಸೆ ಗ್ರಾಮ ಪಂಚಾಯತಿಯ ಸ್ವಾವಲಂಬನಾ ಕೇಂದ್ರದ ಮಹಿಳೆಯರೂ ಇದಕ್ಕೆ ಸಾಥ್ ನೀಡಿದ್ದಲ್ಲದೇ ಸಾವಿರಾರು ಬಟ್ಟೆಯ ಮಾಸ್ಕ್ಗಳನ್ನು ತಯಾರಿಸಿ ಆದಾಯಕ್ಕೊಂದು ದಾರಿ ಕಂಡುಕೊಂಡಿದ್ದರು.
ಲಾಕ್ಡೌನ್ ಘೊಷಣೆಯ ಬಳಿಕ ದೇವಸ್ಥಾನಗಳಿಗೆ ಸಾರ್ವಜನಿಕ ದರ್ಶನ ರದ್ದಾಗಿದ್ದರಿಂದ ವಂಡ್ಸೆ ಸ್ವಾವಲಂಭನಾ ಕೇಂದ್ರದಲ್ಲಿ ತಯಾರಾಗುತ್ತಿದ್ದ ಬಟ್ಟೆ ಚೀಲದ ಬೇಡಿಕೆ ಕುಸಿದಿತ್ತು. ಮಹಿಳೆಯರು ಕೆಲಸವಿಲ್ಲದೆ ಖಾಲಿ ಕೂತಿದ್ದರು. ಮಾಸ್ಕ್ ಸಿದ್ಧಪಡಿಸಿವುದು ಸೂಕ್ತ ಆಯ್ಕೆ ಎಂಬುದನ್ನು ಅರಿತ ಮಹಿಳೆಯರು ವಂಡ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಗಮನ ಸೆಳೆದಿದ್ದರು. ಅವರು ಜಿಲ್ಲಾಡಳಿತದ ಜೊತೆ ಮಾತನಾಡಿ ಮಾಸ್ಕ್ ಸಿದ್ದಪಡಿಸುವ ಜವಾಬ್ದಾರಿ ಪಡೆದಿದ್ದು, ಇದೂವರೆಗೆ 15,000ಕ್ಕೂ ಹೆಚ್ಚು ಕಾಟನ್ ಮಾಸ್ಕ್ಗಳನ್ನು ಸಿದ್ದಪಡಿಸಿ ಅಗತ್ಯವಿರುವೆಡೆಗೆ ನೀಡಿದ್ದಾರೆ. ಮಹಿಳೆಯರು ಸಾಮಾಜಿಕ ಅಂತರ ಪಾಲಿಸಿಕೊಂಡು ಸ್ವಾವಲಂಬನಾ ಕೇಂದ್ರದಲ್ಲಿ ಹಾಗೂ ತಮ್ಮ ಮನೆಯಲ್ಲಿಯೇ ಮಾಸ್ಕ್ನ ತಯಾರಿಸಿದ್ದರು. ಮಾಸ್ಕ್ ಸಿದ್ದ ಪಡಿಸುವ ಮೂಲಕ ಕರೋನಾ ವಾರಿಯರ್ಸ್ ಕೆಲಸ ನಿಭಾಯಿಸುವ ಜೊತೆ ತಮ್ಮ ಆರ್ಥಿಕ ಆಧಾರಕ್ಕೂ ದಾರಿ ಮಾಡಿಕೊಂಡಿದ್ದಾರೆ. ಮರುಬಳಕೆ ಮಾಡಬಹುದಾದ ಮಾಸ್ಕ್ಗೆ 15 ರೂ. ಬೆಲೆ ನಿಗದಿಪಡಿಸಲಾಗಿದೆ. ಮಾಸ್ಕ್ ಸಿದ್ದಪಡಿಸಿದವರಿಗೆ 5 ರೂ. ನೀಡುತ್ತಿದ್ದು, ಒಬ್ಬೊಬ್ಬರು ನೂರಕ್ಕೂ ಮಿಕ್ಕಿ ಮಾಸ್ಕ್ ಹೊಲಿಯುತ್ತಾರೆ.
ಕುಂದಾಪುರ ತಾಲೂಕು ವಂಡ್ಸೆ ಗ್ರಾಮ ಪಂಚಾಯಿತಿ ಮೂಲಕ ಗ್ರಾಮೀಣ ಭಾಗದ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಿ ಸ್ವಾವಲಂಬಿ ಜೀವನ ನಡೆಸುವುದಕ್ಕಾಗಿ ಮಹಿಳಾ ಸ್ವಾವಲಂಬನಾ ಕೇಂದ್ರ 2018ರಲ್ಲಿ ಆರಂಭವಾಗಿದ್ದು, ಈಗಾಗಲೇ ಎರಡು ಬ್ಯಾಚ್ ಮೂಲಕ 100 ಮಹಿಳೆಯರು ಹೊಲಿಗೆ ತರಬೇತಿ ಪಡೆದಿದ್ದಾರೆ. ಕೇಂದ್ರದ ಮೂಲಕ ತರಬೇತಿ ಪಡೆದ ಮಹಿಳೆಯರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ವಂಡ್ಸೆ ಗ್ರಾಮ ಪಂಚಾಯಿತಿ ದೇವಸ್ಥಾಗಳ ಪ್ರಸಾದ ವಿತರಣೆ ಬಟ್ಟೆ ಚೀಲ ಹೊಲಿಯುವ ಕೆಲಸ ವಹಿಸಿಕೊಂಡು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ದಾರಿ ಮಾಡಿಕೊಟ್ಟಿತ್ತು.
- ವಂಡ್ಸೆ ಸ್ವಾವಲಂಬನಾ ಕೇಂದ್ರ ಹೊಲಿಗೆ ತರಬೇತಿ ಜೊತೆ ಸ್ವಉದ್ಯೋಗಕ್ಕೆ ಅವಕಾಶ ನೀಡುತ್ತದೆ. ಈಗಾಗಲೇ ಎರಡು ಬ್ಯಾಚ್ ತರಬೇತಿ ಮುಗಿಸಿ, ಮೂರನೇ ಬ್ಯಾಚ್ ತರಬೇತಿ ಸಮಯದಲ್ಲಿ ಲಾಕ್ಡೌನ್ ಘೋಷಣೆ ಆಗಿದ್ದರಿಂದ ತರಬೇತಿ ನಿಂತಿದೆ. ಕರೋನಾ ಹಿನ್ನೆಲೆಯಲ್ಲಿ ಮಾಸ್ಕ್ ತುಟ್ಟಿಯಾದ ಕಾರಣ ಜಿಲ್ಲಾಡಳಿತದ ಮೂಲಕ ಮಾಸ್ಕ್ ಸಿದ್ದಪಡಿಸುವ ಕೆಲಸ ಸಿಕ್ಕಿದ್ದು, ಕಾಟನ್ ಮಾಸ್ಕ್ ನಮ್ಮಲ್ಲಿ ಸಿದ್ದಮಾಡುವ ಮೂಲಕ ಕೆಲಸವೇ ಇಲ್ಲದೆ ಕೂತ ಮಹಿಳೆಯಿರಗೆ ಕೆಲಸದ ಜೊತೆ ದುಡಿಮೆ ಕೂಡಾ ಸಿಕ್ಕಿದೆ. ಈಗಾಗಲೇ 15 ಸಾವಿರ ಮಾಸ್ಕ್ ವಿತರಣೆ ಮಾಡಿದ್ದು, ಸಾಕಷ್ಟು ಮಾಸ್ಕ್ ಬೇಡಿಕೆಯಿದ್ದು, ಮಾಸ್ಕ್ ಸಿದ್ದಪಡಿಸಿದವರಿಗೆ 5 ರೂ. ನೀಡುತ್ತಿದ್ದು, ಒಬ್ಬೊಬ್ಬರು ನೂರಕ್ಕೂ ಮಿಕ್ಕಿ ಮಾಸ್ಕ್ ಹೊಲಿಯುತ್ತಾರೆ. – ಮಹಾಲಕ್ಷ್ಮೀ, ಮೇಲ್ವಿಚಾರಕಿ, ಸ್ವಾವಲಂಬನಾ ಕೇಂದ್ರ ವಂಡ್ಸೆ
- ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಸ್ವ-ಉದ್ಯೋಗ ಮಾಡುವ ಅವಕಾಶ ಕಡಿಮೆಯಿದ್ದು, ವಂಡ್ಸೆ ಗ್ರಾಮ ಪಂಚಾಯಿತಿ ಸ್ವಾವಲಂಬನಾ ಕೇಂದ್ರ ಆರಂಭಿಸಿ ಹೊಲಿಗೆ ತರಬೇತಿ ನೀಡಲು ಆರಂಭಿಸಿತು. ನಮ್ಮಲ್ಲಿ ತರಬೇತಿ ಪಡೆದ ನೂರಕ್ಕೂ ಮಿಕ್ಕ ಮಹಿಳೆಯರಿಗೆ ದೇವಸ್ಥಾನಗಳ ಬಟ್ಟೆ ಚೀಲ ಹೊಲಿಯುವ ಕೆಲಸ ವಹಿಸಿಕೊಂಡು ಮಹಿಳೆಯರಿಗೆ ನೀಡಿದ್ದು, ಕರೋನಾ ಹಿನ್ನೆಲೆಯಲ್ಲಿ ದೇವಸ್ಥಾನ ದರ್ಶನ ನಿಷೇಧಿಸಿದ್ದರಿಂದ ಕೈಚೀಲ ಮಡುವ ಕೆಲಸ ನಿಂತಿದ್ದು, ಜಿಲ್ಲಾಡಳಿತ ಜೊತೆ ಮಾತನಾಡಿ ಬಟ್ಟೆ ಮಾಸ್ಕ್ ಸಿದ್ದಪಡಿಸುವ ಕೆಲಸ ಪಡೆದು ಮಹಿಳೆಯರಿಗೆ ನೀಡುವ ಮೂಲಕ ಲಾಕ್ಡೌನ್ ನಡುವೆಯೂ ಮಹಿಳೆಯರು ಸ್ವಲ್ಪಮಟ್ಟಿಗಿನ ಆದಾಯ ಗಳಿಸುತ್ತಿದ್ದಾರೆ. ಮುಂದೆ ಶಾಲಾ ಸಮವಸ್ತ್ರ ಹೊಲಿಯುವ ಕೆಲಸ ಕೇಂದ್ರ ಮಾಡಲಿದೆ. – ಉದಯಕುಮಾರ್ ಶೆಟ್ಟಿ, ಅಧ್ಯಕ್ಷರು ಗ್ರಾಮ ಪಂಚಾಯತ್ ವಂಡ್ಸೆ
ಇದನ್ನೂ ಓದಿ:
► ಕುಂದಾಪುರ ವಿಧಾನಸಭೆ ಕ್ಷೇತ್ರದ ಕ್ವಾರಂಟೈನ್ ಮಾಹಿತಿ-ದೂರಿಗಾಗಿ ಕಂಟ್ರೋಲ್ ರೂಂ – https://kundapraa.com/?p=37760 .
► ಕುಂದಾಪುರದಲ್ಲಿ120 ಬೆಡ್ಗಳ ಕೋವಿಡ್-19 ಆಸ್ಪತ್ರೆ ಸಜ್ಜು – https://kundapraa.com/?p=37752 .