ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಧ್ಯ ಇಂಗ್ಲೆಂಡ್ನ ಪ್ರೆಸ್ಟನ್ ನಗರದಲ್ಲಿ ಈಚೆಗೆ ನಡೆದ 19ನೆಯ ದಕ್ಷಿಣ ಏಷಿಯಾ ಸಾಂಸ್ಕೃತಿಕ ಉತ್ಸವ ‘ಪ್ರೆಸ್ಟನ್ ಸಿಟಿ ಮೇಳ’ದಲ್ಲಿ ಇದೇ ಮೊದಲ ಬಾರಿಗೆ ಸೇರ್ಪಡೆಯಾದ ಯಕ್ಷಗಾನದ ಕಿರು ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು ಎಂದು ಹಗಲಿಡೀ ನಡೆದ ಮೇಳದ ಪ್ರೇಕ್ಷಕರಾಗಿದ್ದ ಅನಿವಾಸಿ ಕನ್ನಡಿಗ ಡಾ. ಲಕ್ಷ್ಮೀನಾರಾಯಣ ಗುಡೂರು ತಿಳಿಸಿದ್ದಾರೆ.
‘ಮೇಳ’ ಎಂಬ ಭಾರತೀಯ ಪರಿಕಲ್ಪನೆಯ ಈ ಬಹುಸಂಸ್ಕೃತಿಯ ಕಲಾ ಪ್ರದರ್ಶನದಲ್ಲಿ ಇಂಗ್ಲೆಂಡ್ನಲ್ಲಿ ನೆಲೆಸಿರುವ ದಕ್ಷಿಣ ಏಷಿಯಾ ಮೂಲದ ಹೆಸರಾಂತ ಕಲಾವಿದರಿಂದ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ, ವಾದ್ಯಗೋಷ್ಠಿ, ಸಿನಿಡಾನ್ಸ್, ಬಾಂಗ್ಡಾ ನೃತ್ಯ ಇತ್ಯಾದಿ ಪ್ರದರ್ಶನಗೊಳ್ಳುತ್ತವೆ. ಆರ್ಟ್ಸ್ ಕೌನ್ಸಿಲ್ ಆಫ್ ಇಂಗ್ಲೆಂಡ್ ಮತ್ತು ಪ್ರೆಸ್ಟನ್ ಸಿಟಿ ಕೌನ್ಸಿಲ್ ಪ್ರಾಯೋಜಕತ್ವದಲ್ಲಿ ಪ್ರತಿವರ್ಷ ಪ್ರೆಸ್ಟನ್ ನಗರದಲ್ಲಿ ನಡೆಯುವ ವೈವಿಧ್ಯಮಯ ಕಲೆಗಳ ಪ್ರದರ್ಶನ ನೋಡಲು ಏಷಿಯಾ ಮೂಲದವರಲ್ಲದೆ ಸ್ಥಳೀಯ ವಾಸಿಗಳಾದ ಆಂಗ್ಲರೂ ಬರುತ್ತಾರೆ.

ಇಂಗ್ಲೆಂಡ್ನಲ್ಲಿ ದೀರ್ಘಕಾಲದಿಂದ ‘ಅನ್ನಪೂರ್ಣ ಇಂಡಿಯನ್ ಡಾನ್ಸ್’ ಸಂಸ್ಥೆಯನ್ನು ನಡೆಸುತ್ತಿರುವ ಕುಂದಾಪುರ ಮೂಲದ ಹಿರಿಯ ಕಲಾವಿದೆ ಶಾಂತಾ ರಾವ್ ಅವರ ಉಪಕ್ರಮದಿಂದ ಈ ವರ್ಷದ ಪ್ರೆಸ್ಟನ್ ಕಲಾ ಮೇಳದಲ್ಲಿ ಯಕ್ಷಗಾನವನ್ನು ಪರಿಚಯಿಸಲಾಯಿತು. ಕೆಲವು ವರ್ಷಗಳಿಂದ ಇಂಗ್ಲೆಂಡ್ನ ಬ್ರಿಸ್ಟಲ್ ನಗರದಲ್ಲಿ ನೆಲೆಸಿ, ವಿವಿಧೆಡೆ ಯಕ್ಷಗಾನದ ತುಣುಕುಗಳ ಪ್ರದರ್ಶನ ನೀಡುತ್ತಿರುವ ಯೋಗೀಂದ್ರ ಮರವಂತೆ, ಅವರ ಪುತ್ರಿ ಸುನಿಧಿ ಮರವಂತೆ, ಆಯೋಜಕರ ಅಪೇಕ್ಷೆಯಂತೆ ನೃತ್ಯ ಪ್ರಧಾನವಾದ ವನವಿಹಾರದ ದೃಶ್ಯವನ್ನು ಬಯಲು ರಂಗದಲ್ಲಿ ಸಾದರಪಡಿಸಿದರು.
ಪ್ರದರ್ಶನ ಪೂರ್ವದಲ್ಲಿ ಸಣ್ಣ ಟೆಂಟ್ಅನ್ನು ಚೌಕಿಮನೆ ಮಾಡಿಕೊಂಡು ತಂದೆ, ಮಗಳು ಮಾಡಿಕೊಂಡ ಬಣ್ಣಗಾರಿಕೆ, ವೇಷ ತೊಡುವ ಕ್ರಿಯೆ ಕೂಡ ಪ್ರೇಕ್ಷಕರನ್ನು ಸೆಳೆಯಿತು. ಪ್ರದರ್ಶನದುದ್ದಕ್ಕೂ ಪ್ರೇಕ್ಷಕರಿಂದ ಪ್ರಶಂಸೆಯ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವರು ನೃತ್ಯ, ಅಭಿನಯವನ್ನು ಅನುಕರಿಸಲೆತ್ನಿಸುತ್ತಿದ್ದುದೂ ಕಂಡು ಬಂತು. ಹಿಮ್ಮೇಳಕ್ಕೆ ಹೊಂದಿಕೊಂಡು ಮಾಡಿದ್ದ ನೃತ್ಯ, ಅಭಿನಯ, ಭಾವಾಭಿವ್ಯಕ್ತಿ ತುಂಬ ಅಚ್ಚುಕಟ್ಟಾಗಿ ಮೂಡಿಬಂದಿತ್ತು. ಹಾಡಿನ ಭಾವಾರ್ಥವನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು. ಪ್ರೆಸ್ಟನ್ ಪ್ರಾಂತ್ಯದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡ ಯಕ್ಷಗಾನದ ತುಣುಕು ಅದರ ಪರಿಚಯವೇ ಇಲ್ಲದ ಪ್ರೇಕ್ಷಕರ ಗಮನ ಸೆಳೆದಿದೆ. ಪ್ರಾಂತೀಯ ಪತ್ರಿಕೆಗಳಲ್ಲಿ, ಪ್ರೆಸ್ಟನ್ ನಗರದ ಫೇಸ್ಬುಕ್ ಪುಟಗಳಲ್ಲಿ ಯಕ್ಷಗಾನ ಪ್ರದರ್ಶನದ ಚಿತ್ರಗಳು ಪ್ರಕಟಗೊಂಡಿವೆ ಎಂದು ಡಾ, ಲಕ್ಷ್ಮೀನಾರಾಯಣ ಸಂತಸ ವ್ಯಕ್ತಪಡಿಸಿದ್ದಾರೆ.
ಯೋಗೀಂದ್ರ ಮರವಂತೆ, ಪುತ್ರಿಯ ಜತೆಗೆ ಬೈಂದೂರು ಮೂಲದ ಡಾ. ಗುರುಪ್ರಸಾದ ಪಟ್ವಾಲ್ ಸೇರಿಕೊಂಡು ಇಂಗ್ಲೆಂಡ್ನಲ್ಲಿ ನೀಡುವ ಪ್ರದರ್ಶನಗಳಿಗೆ ಭಾಗವತ ಪ್ರಸನ್ನ ಭಟ್ ಬಾಳ್ಕಲ್, ಮದ್ದಲೆಗಾರ ರಾಘವೇಂದ್ರ ಹೆಗಡೆ ಯಲ್ಲಾಪುರ, ಚೆಂಡೆವಾದಕ ರಾಕೇಶ ಮಲ್ಯ ಹಳ್ಳಾಡಿ ಅವರ ಧ್ವನಿಮುದ್ರಿತ ಹಿಮ್ಮೇಳವನ್ನು, ಉಪ್ಪುಂದದ ಯಕ್ಷಗಾನ ಕಲಾವಿದ ಶ್ರೀಧರ ಗಾಣಿಗ ಸಿದ್ಧಪಡಿಸಿರುವ ಪೋಷಾಕುಗಳನ್ನು ಬಳಸಿಕೊಳ್ಳುತ್ತಾರೆ.
ಪ್ರೆಸ್ಟನ್ ಮೇಳದಲ್ಲಿ ಪ್ರಸ್ತುತಗೊಂಡ ಯಕ್ಷಗಾನ ಪ್ರದರ್ಶನ ವೇಷ ಧರಿಸಿಕೊಳ್ಳುತ್ತಿರುವ ಯೋಗೀಂದ್ರ ಮರವಂತೆ ಪ್ರದರ್ಶನಕ್ಕೆ ದೊರೆತ ಸಹೃದಯಿ ಪ್ರೇಕ್ಷಕರ ಸ್ಪಂದನೆ