ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 1982ರಲ್ಲಿ ಸ್ಥಾಪನೆಯಾದ ಮರವಂತೆಯ ಸಾಧನಾ ಸಮಾಜ ಸೇವಾ ವೇದಿಕೆಯು ನಲವತ್ತು ವರ್ಷಗಳುದ್ದಕ್ಕೆ ಸೇವೆ, ಸಂಸ್ಕೃತಿ ಮನೋಲ್ಲಾಸ ಸಂಬಂಧಿ ಚಟುವಟಿಕೆಗಳನ್ನು ನಡೆಸುತ್ತ ನಿರಂತರ ಕ್ರಿಯಾಶೀಲವಾಗಿ ಮುಂದುವರಿಯುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ಅದರ ಸದಸ್ಯರು ಗುರಿಸಾಧನೆಯ ಕಡೆಗೆ ದೃಷ್ಟಿ ಇರಿಸಿಕೊಂಡು ಒಂದಾಗಿ ಉಳಿದುಕೊಂಡಿದ್ದಾರೆ ಎಂದು ಅದರ ಸ್ಥಾಪಕಾಧ್ಯಕ್ಷ ಎಸ್. ಜನಾರ್ದನ ಮರವಂತೆ ಹೇಳಿದರು.
ಸೋಮವಾರ ಸಾಧನಾ ಸಮುದಾಯ ಭವನದಲ್ಲಿ ನಡೆದ ಸಂಸ್ಥೆಯ ಸದಸ್ಯರ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮರವಂತೆ ಗ್ರಾಮ ಪಂಚಾಯಿತಿಯಲ್ಲಿ 25 ವರ್ಷ ದಕ್ಷತೆಯಿಂದ ಕರ ಸಂಗ್ರಾಹಕ ಆಗಿ ದುಡಿದು ಈಗ ಸರಕಾರ ಅಧೀನದ ಲೆಕ್ಕ ಸಹಾಯಕ ಹುದ್ದೆಗೆ ಬಡ್ತಿಹೊಂದಿ, ಕೋಟ ಗ್ರಾಮ ಪಂಚಾಯಿತಿಗೆ ವರ್ಗಾವಣೆಗೊಳ್ಳುವ ಮೂಲಕ ಈ ಅವಕಾಶ ಗಿಟ್ಟಿಸಿಕೊಂಡ ಜಿಲ್ಲೆಯ ಮೊದಲ ಕೊರಗ ಸಮುದಾಯದ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾದ ಶೇಖರ ಮರವಂತೆ ಅವರನ್ನು ಸನ್ಮಾನಿಸಲಾಯಿತು.
ಬೈಂದೂರಿನ ಲಾವಣ್ಯ ಕಲಾವಿದರು ರಂಗ ಸಂಗೀತ ಪ್ರಸ್ತುತಪಡಿಸಿದರು. ಸಾಧನಾ ಸದಸ್ಯರು ಕುಟುಂಬದೊಂದಿಗೆ ಭಾಗಿಯಾಗಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ನಿವೃತ್ತ ಉಪನ್ಯಾಸಕ ಪಿ. ಶೇಷಪ್ಪಯ್ಯ ಅತಿಥಿಗಳಾಗಿದ್ದರು. ಜತೀಂದ್ರ ಮರವಂತೆ ನಿರೂಪಿಸಿದರು. ಮರವಂತೆಯಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಜಲಜಾನಪದ ಉತ್ಸವದ ಕಾರ್ಯಕಾರಿ ತಂಡದ ಸದಸ್ಯರು ಎಸ್. ಜನಾರ್ದನ ಮರವಂತೆ ಅವರನ್ನು ಅವರ ೮೪ನೆ ಜನ್ಮದಿನ ಪ್ರಯುಕ್ತ ಅಭಿನಂದಿಸಿದರು.