ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಜಾಂಬೂರಿ ಕೇವಲ ಜನಜಾತ್ರೆಯಾಗದೇ ಸ್ಕೌಟ್ಸ್ ಗೈಡ್ಸ್ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುವ ವೇದಿಕೆಯನ್ನಾಗಿ ನಿರ್ಮಿಸಲಾಗಿತ್ತು. ವಿದ್ಯಾರ್ಥಿಗಳಿಗಷ್ಟೇ ಮೀಸಲಾಗಿರಿಸಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕರೂ ಭಾಗವಹಿಸುವಂತೆ ಮಾಡಲಾಗಿದೆ. ಪರಿಣಾಮವಾಗಿ ಏಳು ದಿನಗಳ ಉತ್ಸವದಲ್ಲಿ ಲಕ್ಷಾಂತರ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಕೌಟ್ಸ್ ಗೈಡ್ಸ್ ಮಹತ್ವ ಅರಿಯುವ ಜೊತೆಗೆ, ಸಾಂಸ್ಕೃತಿಕ ಸೊಬಗನ್ನು ಸವಿಯುವಂತಾಯಿತು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.
ಅವರು ಸೋಮವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜನೆ ಸವಾಲೇ ಆದರೂ, ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿರುವ ಒಂದಿಷ್ಟು ಮೂಲಭೂತ ಸೌಕರ್ಯದ ಕಾರಣದಿಂದ ಆಯೋಜನೆ ಸುಲಭಸಾಧ್ಯವಾಯಿತು. 60,000 ಕ್ಕೂ ಅಧಿಕ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು, 13,000 ದಷ್ಟು ಅಧಿಕಾರಿಗಳು, ಸ್ವಯಂ ಸೇವಕರು ಜಾಂಬೂರಿಯಲ್ಲಿ ಭಾಗವಹಿಸಿದ್ದರು. ಅಲ್ಲದೇ ಪ್ರತ್ಯೇಕವಾಗಿ ಸಾವಿರಾರು ಸಾರ್ವಜನಿಕರು ಜಾಂಬೂರಿಯ ಸವಿಯನ್ನು ಸವಿದಿದ್ದಾರೆ. ಶನಿವಾರ – ಭಾನುವಾರ ಎರಡೂ ದಿನ 1 ಲಕ್ಷಕ್ಕೂ ಅಧಿಕ ಮಂದಿ ಸಾರ್ವಜನಿಕರು ಭೇಟಿ ನೀಡಿರುವುದು ಸಂತಸ ತಂದಿದೆ ಎಂದರು.
ಜಾಂಬೂರಿಯ ಮೂಲಕ ಪ್ರತಿಯೊಬ್ಬರಲ್ಲೂ ಸ್ಕೌಟ್ಸ್ ಗೈಡ್ಸ್ ಬಗ್ಗೆ ಅರಿವು ಮೂಡಿಸುವುದು ನಮ್ಮ ಉದ್ದೇಶವಾಗಿತ್ತು. ಇಲ್ಲಿಗೆ ಭೇಟಿ ನೀಡಿರುವ ಲಕ್ಷಾಂತರ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಮುಂದಿನ ದಿನದಲ್ಲಿ ಅದರ ಬಗ್ಗೆ ಒಂದಿಷ್ಟು ಯೋಚಿಸುವಂತೆ ಮಾಡಲಿದೆ ಎಂದರು.
ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ನಿರಂತರವಾಗಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಜಂಗಲ್ ಟ್ರಯಲ್, ಚಾಲೆಂಜ್ ವ್ಯಾಲಿ, ಫನ್ ಗೇಮ್, ವಿವಿಧ ವಿಷಯ ಪರಿಣತರಿಂದ ತರಬೇತಿ, ಸ್ವಚ್ಛತಾ ಅಭಿಯಾನ, ಜಾದೂ ಪ್ರದರ್ಶನ, ಸಿನಿಮಾ ಪ್ರದರ್ಶನ, ವಿವಿಧ ರಾಜ್ಯಗಳ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಗಳು ಬೆಳಗ್ಗಿನ ಅವಧಿಯಲ್ಲಿ ನಡೆದರೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಪ್ರತಿನಿತ್ಯವೂ ಆಯಾ ರಾಜ್ಯಗಳ ಆಹಾರಕ್ರಮಕ್ಕೆ ಅನುಸಾರವಾಗಿ ಬೆಳಿಗ್ಗೆ ಉಪಹಾರ, ಮಧ್ಯಾಹ ಹಾಗೂ ರಾತ್ರಿ ಊಟ, ಸಂಜೆಯ ತಿನಿಸು ವ್ಯವಸ್ಥೆ ಮಾಡಲಾಗಿತ್ತು. ಎಲ್ಲಿಯೂ ತೊಡಕಾಗದಂತೆ ಕಾರ್ಯಕ್ರಮ ಜರುಗಿದೆ ಎಂದರು.
ಜಾಂಬೂರಿಯ ಪ್ರಮುಖ ಆಕರ್ಷಣೆಯಾಗಿದ್ದ ಕೃಷಿಸಿರಿ, ವಿಜ್ಞಾನ ಮೇಳ, ಪುಸ್ತಕಮೇಳ, ಕಲಾಮೇಳ, ಆಹಾರೋತ್ಸವ ಮೇಳ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಸಾರ್ವಜನಿಕರಿಗೆ ಪ್ರತ್ಯೇಕ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿತ್ತು. ಕಲಾವೇಳದಲ್ಲಿ ಪ್ರಖ್ಯಾತ ಕಲಾವಿದರು ಭಾಗಹಿಸಿದ್ದರು. ಛಾಯಾಚಿತ್ರ ಪ್ರದರ್ಶನಗಳು ಸಾರ್ವಜನಿಕರು ಗಮನ ಸೆಳೆದಿದ್ದವು. ಎಲ್ಲಾ ವಿಭಾಗದ ಕಾರ್ಯಕ್ರಮಗಳು, ಪ್ರದರ್ಶನಗಳು ಯಶಸ್ವಿಯಾಗಿ ನಡೆದಿರುವುದು ಸಂತಸ ತಂದಿದೆ ಎಂದರು.
ಪಿಳಿಕುಳದಲ್ಲಿ ಯುವಶಕ್ತಿ ಕೇಂದ್ರ:
ಮುಂದಿನ ಒಂದು ವರ್ಷದಲ್ಲಿ ಜಾಂಬೂರಿಯ ನೆನಪಿಗೆ ಒಂದು ಯುವಶಕ್ತಿ ಕೇಂದ್ರ ನಿರ್ಮಿಸಲುವ ಯೋಜನೆಯಿದ್ದು, ಸರಕಾರದ ನೆರವು ಅಗತ್ಯವಿದೆ. ಮಂಗಳೂರಿನಲ್ಲಿ ಸ್ಕೌಟ್ಸ್ ಗೈಡ್ಸ್, ಎನ್ಸಿಸಿ, ಎನ್ಎಸ್ಎಸ್ ಶಿಬಿರ, ಪೊಲೀಸ್ ಕವಾಯತು, ಮಿಲಿಟರಿ ಪೆರೆಡ್ ಮೊದಲಾದ ಉದ್ದೇಶಗಳಿಗೆ ಕನಿಷ್ಠ 1000 ಮಂದಿ ಉಳಿದುಕೊಳ್ಳಬಹುದಾದ ಮೈದಾನದ ಅಗತ್ಯವಿದ್ದು, ಪಿಳಿಕುಳದಲ್ಲಿ ಸ್ಕೌಟ್ಸ್ ಗೈಡ್ಸ್ ಮೀಸಲಿರಿಸಿದ ಜಾಗದಲ್ಲಿ ನೂತನ ಕಟ್ಟಡ ನಿರ್ಮಿಸಲು ಯೋಜಿಸಲಾಗಿದೆ ಎಂದರು.