ಕುಂದಾಪುರ: ತಾಲೂಕಿನ ಕೋಮು ಸೂಕ್ಷ್ಮ ಪ್ರದೇಶವಾದ ಕಂಡ್ಲೂರು ಬೂದಿ ಮುಚ್ಚಿದ ಕೆಂಡದಂತಾಗಿದ್ದು, ತೆರೆಮರೆಯಲ್ಲಿ ಕೋಮು ಸಂಘರ್ಷ ಮುಂದುವರಿದಿದೆ. ಪೊಲೀಸರ ಶಾಂತಿ ಸಭೆಯ ಬಳಿಕವೂ ಯಾರೋ ಕಿಡಿಗೇಡಿಗಳು ಶಾರದೋತ್ಸವಕ್ಕಾಗಿ ಹಾಕಿದ್ದ ಹಿಂದೂ ಧರ್ಮದ ಭಗವಧ್ವಜಕ್ಕೆ ಭಾನುವಾರ ತಡರಾತ್ರಿ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ಘಟನೆಯ ವಿವರ:
ಕಂಡ್ಲೂರಿನಲ್ಲಿ ನಡೆಸಲುದ್ದೇಶಿಸಿರುವ 50ನೇ ವರ್ಷದ ಶಾರದೋತ್ಸದ ಪ್ರಯುಕ್ತ ಪೇಟೆಯ ಸುತ್ತಲೂ ಬಂಟಿಗ್ಸ್, ಬ್ಯಾನರ್, ಬಾವುಟಗಳನ್ನು ಹಾಕಲಾಗಿತ್ತು. ಯಾರೋ ಕಿಡಿಗೇಡಿಗಳು ಶಾಂತಿ ಕದಡುವ ಸಲುವಾಗಿ ಭಾನುವಾರ ರಾತ್ರಿ ವೇಳೆಗೆ ಕಂಡ್ಲೂರು ಸೇತುವೆಯ ಸಮೀಪ ರಸ್ತೆಯ ಮೇಲ್ಬಾಗದಲ್ಲಿ ಹಾಕಲಾಗಿದ್ದ ಕೇಸರಿ ಭಗವಧ್ವಜಕ್ಕೆ ಬೆಂಕಿ ಹಚ್ಚಿದ್ದಾರೆ. (ಕುಂದಾಪ್ರ ಡಾಟ್ ಕಾಂ ವರದಿ)
ಕಂಡ್ಲೂರಿನಲ್ಲಿ ವಾರದ ಹಿಂದಷ್ಟೇ ಶಾರದೋತ್ಸವದ ವಿಚಾರವಾಗಿಯೇ ಹಿಂದೂ ಯುವಕರ ಮೇಲೆ ಅನ್ಯಕೋಮಿನ ಹುಡುಗರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಆ ಪೈಕಿ ಪ್ರಮುಖ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿತ್ತು. ಕೋಮು ಸೂಕ್ಷ್ಮ ಪ್ರದೇವಾದ್ದರಿಂದ ಜಿಲ್ಲಾ ವರಿಷ್ಠಾಧಿಕಾರಿ ಅಣ್ಣಾಮಲೈ ಘಟನಾ ಸ್ಥಳಕ್ಕೆ ಭೇಟಿ ನೀಡಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಸಿದ್ದರು. ಕುಂದಾಪುರ ಡಿವೈಎಸ್ಪಿ ನೇತೃತ್ವದಲ್ಲಿ ಕಂಡ್ಲೂರಿನಲ್ಲಿಯೇ ಶಾಂತಿಸಭೆ ನಡೆಸಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಎರಡೂ ಕೋಮಿನ ಮುಖಂಡರುಗಳನ್ನು ಕರೆದು ಸೌಹಾರ್ದಯುತವಾಗಿ ಶಾರದೋತ್ಸವವನ್ನು ಆಚರಿಸುವಂತೆ ಕೋರಿಕೊಂಡಿದ್ದರು. ಆದರೆ ಸಭೆ ನಡೆದು ಎರಡು ದಿನಗಳು ಕಳೆಯುವ ಮೊದಲೇ ಕಿಡಿಗೇಡಿಗಳು ದುಷ್ಕೃತ್ಯ ನಡೆಸಿದ್ದಾರೆ. (ಕುಂದಾಪ್ರ ಡಾಟ್ ಕಾಂ ವರದಿ) ಕುಂದಾಪುರ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಕಂಡ್ಲೂರಿನ ನಾಗರಿಕರು ಧರ್ಮದ ನಡುವೆ ಪದೆ ಪದೆ ಸಂಘರ್ಷವನ್ನು ತರುವವರ ವಿರುದ್ಧ ಕಿಡಿ ಕಾರಿದ್ದಾರೆ.