ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಾಲಕಿಯೋರ್ವಳು ನಿದ್ದೆ ಮಂಪರಿನಲ್ಲಿ ಎದ್ದು ಸುಮಾರು ಒಂದು 50ಮೀ. ದೂರ ರಸ್ತೆಯಲ್ಲಿ ನಡೆದು ಬಂದಿದ್ದು, ಯುವಕರ ತಂಡವೊಂದು ಬಾಲಕಿಯನ್ನು ರಕ್ಷಿಸಿದ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ತಾಲೂಕಿನ ಕೊರ್ಗಿ ಗ್ರಾಮದ ಚಾರುಕೊಟ್ಟಿಗೆ ಸಮೀಪ ದಬ್ಬೆಕಟ್ಟೆ – ತೆಕ್ಕಟ್ಟೆ ರಸ್ತೆಯಲ್ಲಿ ತೆರಳುತ್ತಿದ್ದ ಚಾರುಕೊಟ್ಟಿಗೆ ಬಾರ್ನ ಸಿಬ್ಬಂದಿ ವಿಶ್ವನಾಥ್ ಎಂಬುವವರು ಬಾಲಕಿ ರಸ್ತೆ ಪಕ್ಕದಲ್ಲಿ ನಿಂತಿರುವುದನ್ನು ಗಮನಿಸಿದ್ದು, ಪೂರ್ವಾಪರ ವಿಚಾರಿಸಿ ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.
ಬುಧವಾರ ರಾತ್ರಿ ವಿಶ್ವನಾಥ ಪೂಜಾರಿ ರಾತ್ರಿ ಸರಿ ಸುಮಾರು 2 ಗಂಟೆ ಹೊತ್ತಿಗೆ ಬಾರಿನ ಕೆಲಸ ಮುಗಿಸಿಕೊಂಡು ಸಿಬ್ಬಂದಿಗಳೊಂದಿಗೆ ಮನೆಗೆ ತೆರಳುತ್ತಿರುವಾಗ ದಬ್ಬೆಕಟ್ಟೆ ತೆಕ್ಕಟ್ಟೆ ರಸ್ತೆಯಲ್ಲಿ 6 ವರ್ಷದ ಬಾಲಕಿ ಸ್ವಾಮಿ ಕೊರಗಜ್ಜನ ನಾಮಫಲಕದ ಕೆಳಗೆ ನಿಂತಿರುವುದನ್ನು ಗಮನಿಸಿದ್ದಾರೆ. ಈ ಹೊತ್ತಿನಲ್ಲಿ ಒಂಟಿ ಮಗು ಇಲ್ಲಿಗೆ ಬರಲು ಹೇಗೆ ಸಾಧ್ಯ ಎಂದು ಆಲೋಚಿಸಿ ಮಗುವಿನ ರಕ್ಷಣೆಗೆ ಧಾವಿಸುತ್ತಾರೆ. ಮಗುವಿನ ಪೂರ್ವಾಪರ ವಿಚಾರಿಸಿ ಮಗುವನ್ನ ಅವರ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ನಿದ್ರೆಯಲ್ಲಿದ್ದ ಪೋಷಕರು ಮಗು ಮನೆಯಿಂದ ಹೊರಕ್ಕೆ ಬಂದಿರುವ ವಿಚಾರ ತಿಳಿದು ಹೆದರಿ ಹೋಗಿದ್ದಾರೆ. ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಮಗುವಿನ ತಾಯಿಯ ವಿಚಾರಣೆ ನಡೆಸಿರುವ ಬಗ್ಗೆ ತಿಳಿದುಬಂದಿದ್ದು, ಬಾಗಿಲ ಚಿಲಕಿ ಕೆಳಭಾಗದಲ್ಲಿ ಇದ್ದುದರಿಂದ ಸುಲಭವಾಗಿ ತೆಗೆದು ಬಾಲಕಿ ಹೊರಕ್ಕೆ ಬಂದಿದ್ದಾಳೆ ಎನ್ನಲಾಗಿದೆ.