ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನರೇಂದ್ರ ಮೋದಿಯವರು ವಿಶ್ವವೇ ಪುರಸ್ಕರಿಸುವ ನಾಯಕ. ಅಂತರಾಷ್ಟ್ರೀಯ ಸಂಬಂಧ, ರಾಷ್ಟ್ರದ ಭದ್ರತೆ, ಹಿಂದೂ ಧರ್ಮದ ಉಳಿವು ಇವೆಲ್ಲದಕ್ಕೂ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು. ಪ್ರಧಾನಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ನಾನೂ ಕೂಡ ಗೆದ್ದು ಅವರು ಪ್ರಧಾನಿಯಾಗಲು ಬೆಂಬಲಿಸುವುದುದೇ ನನ್ನ ಗುರಿಯಾಗಿದೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಹೇಳಿದರು.





ಅವರು ಗುರುವಾರ ಉಪ್ಪಂದದ ದೇವಕಿ ಬಿ.ಆರ್. ಸಭಾಂಗಣದಲ್ಲಿ ಜರುಗಿದ ರಾಷ್ಟ್ರಭಕ್ತ ಬಳಗದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ಕಾಂಗ್ರೆಸ್ ಸೋಲಿಸುವುದು, ಮೋದಿ ಪ್ರಧಾನಿಯಾಗುವುದು ಹಾಗೂ ಬಿಜೆಪಿಯ ಹೊಂದಾಣಿಕೆ ರಾಜಕಾರಣಕ್ಕೆ ಕೊನೆ ಹಾಡಲು ಕಾರ್ಯಕರ್ತರ ನಮ್ಮ ಜೊತೆಗೆ ಬಂದಿದ್ದಾರೆ. ಜಾತೀಯತೆ, ಕುಟುಂಬ ರಾಜಕಾರಣ, ಬಿಜೆಪಿಯ ಹಿರಿಯ ಕಿರಿಯ ಕಾರ್ಯಕರ್ತರ ನೋವು ಈ ಎಲ್ಲದಕ್ಕೂ ಒಂದು ಪರಿಹಾರ ಕಂಡುಕೊಳ್ಳಲು ಚುನಾವಣೆ ಎದುರಿಸುತ್ತಿದ್ದೇನೆ. ರಾಷ್ಟ್ರಭಕ್ತ ಬಳಗ ಸಂಘಟನೆಗೆ ದಿನದಿಂದ ದಿನಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದರು.
ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಮಾತನಾಡಿ ರಾಜ್ಯದಲ್ಲಿ ಈಶ್ವರಪ್ಪನವರ ಬಗ್ಗೆ ಅನುಕಂಪದ ಅಲೆ ಎದ್ದಿದೆ. ಹಿಂದೂ ಕಾರ್ಯಕರ್ತರು ಅವರ ಪರವಾಗಿ ನಿಂತಿದ್ದಾರೆ. ಎಲ್ಲಾ ಸಮಾಜವನ್ನು ಗೌರವಿಸುತ್ತಾ ಬಂದಿರುವ ಈಶ್ವರಪ್ಪನವರಿಗೆ ಅನ್ಯಾಯವಾಗಿರುವುದು ಬೇಸರ ತರಿಸಿದೆ. ಈ ಭಾರಿಯ ಚುನಾವಣೆಯಲ್ಲಿ ಅವರಿಗೆ ದೊರೆಯುತ್ತಿರುವ ಬೆಂಬಲ ನೋಡಿದರೆ ಗೆಲುವು ಸುಲಭವಾಗಿ ದೊರೆಯುವ ವಿಶ್ವಾಸವಿದೆ ಎಂದರು.
ತಾಲೂಕು ಪಂಚಾಯತ್ ಮಾಜಿ ಸದಸ್ಯ ನಾರಾಯಣ ಗುಜ್ಜಾಡಿ, ಹಿಂದೂ ಜಾಗರಣೆಯ ಅಧ್ಯಕ್ಷ ಯಶವಂತ ಗಂಗೊಳ್ಳಿ, ಉಪ್ಪುಂದ ಗ್ರಾ.ಪಂ ಮಾಜಿ ಸದಸ್ಯ ರಾಜು ದೇವಾಡಿಗ ಕಂಚಿಕಾನ್, ರಾಷ್ಟ್ರಭಕ್ತರ ಬಳಗ ಬೈಂದೂರು ಮುಖಂಡರಾದ ಮಂಜುನಾಥ ರಾವ್ ಬೈಂದೂರು, ಗಣೇಶ್ ರಾವ್ ಬೈಂದೂರು, ರೇಣುಕಾ, ಚಂದ್ರಯ್ಯ ಆಚಾರ್ಯ, ವಿಷ್ಣು, ವಿನಯ್ ನಾಯರಿ ನಾವುಂದ ಇನ್ನಿತರರು ಉಪಸ್ಥಿತರಿದ್ದರು.
ಶ್ರೀಧರ್ ಬಿಜೂರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೋಪಾಲಕೃಷ್ಣ ನಾಡ ಕಾರ್ಯಕ್ರಮ ನಿರೂಪಿಸಿದರು, ಶ್ರೀಧರ್ ದೇವಾಡಿಗ ಬಡಾಕೆರೆ ವಂದಿಸಿದರು.