ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ಇದರ ಸುವರ್ಣ ಮಹೋತ್ಸವ-೨೦೨೪ರ ನೆನಪಿಗಾಗಿ ನಿರ್ಮಿಸಲಾಗುತ್ತಿರುವ ಶ್ರೀ ಶಾರದಾ ಮಂಟಪದ ಮುಖ್ಯ ದ್ವಾರ ಮಂಟಪ ಮತ್ತು ಮೇಲಂಸ್ತಿನ ಕೊಠಡಿ ನಿರ್ಮಾಣ ಕಾರ್ಯಕ್ಕೆ ಸಮಿತಿಯ ಅಧ್ಯಕ್ಷ ಸತೀಶ ಜಿ. ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಶ್ರೀ ಶಾರದಾ ದೇವಿಗೆ ಬೆಳ್ಳಿಯ ವೀಣೆ, ಬೆಳ್ಳಿಯ ತ್ರಿಶೂಲ ಹಾಗೂ ಬೆಳ್ಳಿಯ ಕಿರೀಟ ನಿರ್ಮಾಣ ಮತ್ತು ಹತ್ತು ದಿನಗಳ ದಸರಾ ಆಚರಣೆ ಸಲುವಾಗಿ ಸುಮಾರು ೪೦ ಲಕ್ಷ ರೂ. ನೀಲಿನಕ್ಷೆಯನ್ನು ಸಿದ್ಧಪಡಿಸಲಾಗಿದೆ.
ಶ್ರೀ ಶಾರದಾ ಮಂಟಪದ ಮುಖ್ಯ ದ್ವಾರ ಮಂಟಪ ಹಾಗೂ ಮೇಲಂಸ್ತಿನ ಕೊಠಡಿ ನಿರ್ಮಾಣಕ್ಕೆ ಸುಮಾರು ೧೨ ಲಕ್ಷ ವೆಚ್ಚ ತಗಲಲಿದ್ದು, ದಾನಿಗಳು ಹಾಗೂ ಭಕ್ತರ ನೆರವಿನ ನಿರೀಕ್ಷೆಯಿಂದ ಈ ಮಹತ್ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಪ್ರಧಾನ ಅರ್ಚಕ ಜಿ.ರಾಘವೇಂದ್ರ ನಾರಾಯಣ ಆಚಾರ್ಯ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಸಮಿತಿಯ ಗೌರವಾಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ, ಪ್ರಧಾನ ಕಾರ್ಯದರ್ಶಿ ನಿತಿನ್ ಖಾರ್ವಿ, ಕಾರ್ಯದರ್ಶಿ ಶ್ರೀಧರ ಎನ್.ಸಕ್ಲಾತಿ, ಖಜಾಂಚಿ ಜಿ.ನಾರಾಯಣ ಪೂಜಾರಿ, ಮಹಿಳಾ ಮಂಡಳಿ ಕಾರ್ಯದರ್ಶಿ ಸುಜಾತ ಬಾಬು ಖಾರ್ವಿ, ಶ್ರೀ ಶಾರದೋತ್ಸವ ಸುವರ್ಣ ಮಹೋತ್ಸವ ಸಮಿತಿ ಹಾಗೂ ಮಹಿಳಾ ಮಂಡಳಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.